ಅತ್ಯಾಚಾರ ಅಪರಾಧಿ ಸಂದೀಪ್ ಲಾಮಿಚಾನೆ ಬಂಧನ; ಕ್ರಿಕೆಟಿಗನ ಅಮಾನತುಗೊಳಿಸಿದ ನೇಪಾಳ ಕ್ರಿಕೆಟ್ ಸಂಸ್ಥೆ
Jan 11, 2024 07:11 PM IST
ನೇಪಾಳ ಕ್ರಿಕೆಟ್ ಆಟಗಾರ ಸಂದೀಪ್ ಲಮಿಚಾನೆ (FILE)
- Sandeep Lamichhane: ಸಂದೀಪ್ ಲಮಿಚಾನೆ ಅವರನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತುಗೊಳಿಸಲಾಗಿದೆ. ಏಕೆಂದರೆ ಅವರು ಅಪರಾಧಿ ಎಂಬುದು ಸಾಬೀತಾಗಿದ್ದು ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ನೇಪಾಳ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.
ಅತ್ಯಾಚಾರ ಪ್ರಕರಣ ಸಾಬೀತಾಗಿ ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನೇಪಾಳದ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರನ್ನು ಗುರುವಾರ ಬಂಧಿಸಲಾಗಿದೆ. ಕಠ್ಮಂಡು ಜಿಲ್ಲಾ ನ್ಯಾಯಾಲಯ ಬುಧವಾರ (ಜನವರಿ 10) ಶಿಕ್ಷೆಯ ಪ್ರಮಾಣದ ತೀರ್ಪನ್ನು ಪ್ರಕಟಿಸಿದ್ದು, ಅದರ ಬೆನ್ನಲ್ಲೇ ನೇಪಾಳ ಕ್ರಿಕೆಟ್ ಸಂಸ್ಥೆಯು (Cricket Association of Nepal) ಆಟಗಾರನನ್ನು ಅಮಾನತುಗೊಳಿಸಿದೆ.
18 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ, ಕಠ್ಮಂಡು ಜಿಲ್ಲಾ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಅದರ ಬೆನ್ನಲ್ಲೇ ಕ್ರಿಕೆಟ್ನಿಂದ ಅವರನ್ನು ಅಮಾನತುಗೊಳಿಸಲಾಗಿದೆ. “ಸಂದೀಪ್ ಲಮಿಚಾನೆ ಅವರನ್ನು ಯಾವುದೇ ರೀತಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳಿಂದ ಅಮಾನತುಗೊಳಿಸಲಾಗಿದೆ. ಏಕೆಂದರೆ ಅವರು ಅಪರಾಧಿ ಮತ್ತು ಶಿಕ್ಷೆಗೆ ಗುರಿಯಾಗಿದ್ದಾರೆ” ಎಂದು ನೇಪಾಳ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪ ಸಾಬೀತು; ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ 8 ವರ್ಷ ಜೈಲುಪಾಲು
ಜಿಲ್ಲಾ ನ್ಯಾಯಾಲಯದ ಏಕಸದಸ್ಯ ಪೀಠವು 23 ವರ್ಷದ ಆಟಗಾರನಿಗೆ 3,00,000 ರೂಪಾಯಿ ದಂಡ ವಿಧಿಸಿದೆ. ಅದರಲ್ಲಿ ಸಂತ್ರಸ್ತೆಗೆ ಪರಿಹಾರವಾಗಿ 2,00,000 ರೂಪಾಯಿ ನೀಡುವಂತೆ ಆದೇಶಿಸಿತು.
ನೇಪಾಳ ಪರ 103ಕ್ಕೂ ಹೆಚ್ಚು ವೈಟ್ ಬಾಲ್ ಪಂದ್ಯಗಳಲ್ಲಿ ಆಡಿರುವ ಸ್ಪಿನ್ನರ್ ಲಮಿಚಾನೆ, 100ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ತಮ್ಮ ದೇಶದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಬಿಗ್ಬ್ಯಾಷ್, ಐಪಿಎಲ್ ನಲ್ಲೂ ಆಡಿದ ಅನುಭವ ಆತನಿಗೆ ಇದೆ. ಐಪಿಎಲ್ನಲ್ಲಿ 2018ರಿಂದ 20ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಆಡಿದ ಒಂಬತ್ತು ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಪಡೆದರು.
ಏನಿದು ಪ್ರಕರಣ?
ನೇಪಾಳದ ರಾಜಧಾನಿ ಕಠ್ಮುಂಡುವಿನ ಹೋಟೆಲ್ವೊಂದರಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂದೀಪ್ ಲಮಿಚಾನೆ ವಿರುದ್ಧ 17 ವರ್ಷ ಯುವತಿ ದೂರು ದಾಖಲಿಸಿದ್ದರು. ಹೀಗಾಗಿ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಜಾಮೀನಿನ ಮೇಲೆ 2023ರಲ್ಲಿ ಹೊರ ಬಂದಿದ್ದ ಸಂದೀಪ್, ಆರೋಪಗಳ ಹೊರತಾಗಿಯೂ ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದರು. ನವೆಂಬರ್ನಲ್ಲಿ ನಡೆದ ಟಿ20 ಏಷ್ಯಾ ಫೈನಲ್ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದೀಗ 2023ರ ಡಿಸೆಂಬರ್ನಲ್ಲಿ ಆರೋಪ ಸಾಬೀತಾಗಿದ್ದು, ಶಿಕ್ಷೆಗೂ ಗುರಿಯಾಗಿದ್ದಾರೆ.
ಕಳೆದ ಜನವರಿ 12ರಂದು ಪಟಾನ್ ಹೈಕೋರ್ಟ್ ಕ್ರಿಕೆಟಿಗನನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಹೀಗಾಗಿ ಲಮಿಚಾನೆ ಜಾಮೀನಿನ ಮೇಲೆ ಹೊರಗಿದ್ದರು. 2022ರ ನವೆಂಬರ್ 4ರಂದು ಕಠ್ಮಂಡು ಜಿಲ್ಲಾ ನ್ಯಾಯಾಲಯವು ವಿಚಾರಣೆಯ ನಂತರ ಲಮಿಚಾನೆಯನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲು ಆದೇಶ ನೀಡಿತ್ತು. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಲಾಮಿಚಾನೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ | ಮೊಹಾಲಿಯಲ್ಲಿ ಭಾರಿ ಚಳಿ; ಭಾರತ vs ಅಫ್ಘಾನಿಸ್ತಾನ 1ನೇ ಟಿ20 ಪಂದ್ಯಕ್ಕೆ ಇಬ್ಬನಿಯ ಸವಾಲು, ವೇಗಿಗಳಿಗೆ ಲಾಭ
ಸದ್ಯ ಅಪರಾಧದ ಹಿನ್ನೆಲೆಯಲ್ಲಿ ಲಮಿಚಾನೆ ಕ್ರಿಕೆಟ್ ಕರಿಯರ್ಗೆ ದೊಡ್ಡ ಹೊಡೆತ ಬಿದ್ದಿದೆ. ದೇಶದ ಕ್ರಿಕೆಟ್ ಮಂಡಳಿ ಕೂಡಾ ಅವರನ್ನು ಅಧಿಕೃತವಾಗಿ ಅಮಾನತುಗೊಳಿಸಿದೆ. ಪ್ರಕರಣದಲ್ಲಿ ಕಠ್ಮಂಡು ಜಿಲ್ಲಾ ಸರ್ಕಾರಿ ವಕೀಲರ ಕಚೇರಿಯು ಆರೋಪಿ ಲಮಿಚಾನೆಗೆ 12 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶ ಶಿಶಿರ್ ರಾಜ್ ಢಂಕಾಲ್, ಶಿಕ್ಷೆಯನ್ನು ಎಂಟು ವರ್ಷಗಳಿಗೆ ಇಳಿಸಿದ್ದಾರೆ.
ವಿಡಿಯೋ ನೋಡಿ: radeep Eshwar : ಪ್ರತಾಪ್ ಸಿಂಹನಷ್ಟು ಅಯೋಗ್ಯ, ಮುಠ್ಠಾಳ ಇಲ್ಲ : ಸಿದ್ಧರಾಮಯ್ಯರ ಬಗ್ಗೆ ಮಾತಾಡ್ತಾರೆ