ಅವರು ಮಾಡ್ಸಿದ್ದು ಪ್ರತಿಮೆ ಸಚಿನ್ದು, ಆದರೆ ಅಲ್ಲಿದ್ದದ್ದು ಸ್ಮಿತ್ದು; ತೆಂಡೂಲ್ಕರ್ ಪ್ರತಿಮೆ ಕಂಡು ಕೆಜಿಎಫ್ ಡೈಲಾಗ್ ನೆನೆದ ಫ್ಯಾನ್ಸ್
Nov 06, 2023 06:30 AM IST
ತೆಂಡೂಲ್ಕರ್ ಪ್ರತಿಮೆ ಕಂಡು ಕೆಜಿಎಫ್ ಡೈಲಾಗ್ ನೆನೆದ ಫ್ಯಾನ್ಸ್.
- Sachin Tendulkar Statue: ವಾಂಖೆಡೆ ಸ್ಟೇಡಿಯಂನಲ್ಲಿ ಸ್ಥಾಪಿಸಿರುವ ಪ್ರತಿಮೆಯಲ್ಲಿರುವುದು ಸಚಿನ್ ಅವರೇನಾ? ಅಥವಾ ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್ ಇರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.
ನವೆಂಬರ್ 2ರಂದು ನಡೆದ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಮುಂಬೈನ ವಾಂಖೆಡೆ ಮೈದಾನದಲ್ಲಿ (Wankhede Stadium, Mumbai) ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಪ್ರತಿಮೆ ಅನಾವರಣ ಮಾಡಲಾಯಿತು. ಆದರೀಗ ಆ ಪ್ರತಿಮೆ ನೋಡಿದ ಅಭಿಮಾನಿಗಳು, ಕೆಜಿಎಫ್ ಚಾಪ್ಟರ್ 1 ಚಿತ್ರದ ಡೈಲಾಗ್ ನೆನೆದು ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ.
ಸಚಿನ್ ಜೀವನಗಾಥೆಯನ್ನು ಸಾರುವ ಪೂರ್ಣ ಪ್ರಮಾಣದ ಪ್ರತಿಮೆ ಅನಾವರಣಗೊಳಿಸಲಾಗಿದೆ. ತೆಂಡೂಲ್ಕರ್ ಸ್ಟ್ರೈಟ್ ಡ್ರೈವ್ ಬಾರಿಸುವ ಭಂಗಿಯಲ್ಲಿ ಪ್ರತಿಮೆ ಇದೆ. ಅವರಿಗೆ ಸಮರ್ಪಿತವಾದ ಸ್ಟ್ಯಾಂಡ್ ಬಳಿ ಇರಿಸಲಾಗಿದೆ. ಹೆಸರಾಂತ ಚಿತ್ರ ಕಲಾವಿದ, ಶಿಲ್ಪಿ ಪ್ರಮೋದ್ ಕಾಳೆ ನಿರ್ಮಿಸಿದ್ದಾರೆ. ಈ ಪ್ರತಿಮೆ 22 ಅಡಿ ಉದ್ದ, 10 ಅಡಿ ಎತ್ತರ ಇದೆ. ಕೈಯಲ್ಲಿ 4 ಅಡಿಯ ಬ್ಯಾಟಿದ್ದು, ಅದರ ಮೇಲೆ ಸಚಿನ್ ಪೂರ್ಣ ಹೆಸರನ್ನು ಬರೆಯಲಾಗಿದೆ.
ಸಚಿನ್ ಅಥವಾ ಸ್ಮಿತ್; ಗೊಂದಲದಲ್ಲಿ ಫ್ಯಾನ್ಸ್
ವಾಂಖೆಡೆ ಸ್ಟೇಡಿಯಂನಲ್ಲಿ ಸ್ಥಾಪಿಸಿರುವ ಪ್ರತಿಮೆಯಲ್ಲಿರುವುದು ಸಚಿನ್ ಅವರೇನಾ? ಅಥವಾ ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್ (Steve Smith) ಇರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್. ಪ್ರತಿಮೆ ಅನಾವರಣದ ಬಳಿಕ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರತಿಮೆ ಚಿತ್ರಗಳು ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ಗಳ ಹಬ್ಬ ಸೃಷ್ಟಿಯಾಗಿದೆ.
ಪ್ರತಿಮೆ ಅನಾವರಣದ ನಂತರ ಕ್ರಿಕೆಟ್ ವಲಯದಲ್ಲಿ ಅಭಿಮಾನಿಗಳಿಗೆ ಭಾರಿ ಗೊಂದಲ ಉಂಟಾಗಿದೆ. ಈ ಪ್ರತಿಯಲ್ಲಿ ಸಚಿನ್ ತೆಂಡೂಲ್ಕರಾ ಅಥವಾ ಸ್ಟೀವ್ ಸ್ಮಿತಾ ಎಂದು ಗೊಂದಲಕ್ಕೆ ಉಂಟಾಗಿದ್ದಾರೆ. ಪ್ರತಿಮೆ ಸ್ಮಿತ್ ಹೋಲಿಕೆಯ ಚಿತ್ರಗಳು ನೆಟ್ನಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಏಕೆಂದರೆ ಪ್ರತಿಮೆಯಲ್ಲಿದ್ದಂತೆ ಸ್ಟೀವ್ ಸ್ಮಿತ್ ಕಾಣುತ್ತಿರುವುದೇ ಹಾಸ್ಯಮಯ ಮೀಮ್ಸ್ಗಳು ಸೃಷ್ಟಿಯಾಗಲು ಕಾರಣವಾಗಿದೆ.
ಕೆಜಿಎಫ್ ಡೈಲಾಗ್ ನೆನೆದ ಫ್ಯಾನ್ಸ್
ಕೆಜಿಎಫ್ ಚಾಪ್ಟರ್ 1ರಲ್ಲಿ ಗರುಡ ಆಗಮಿಸಿ ಪ್ರತಿಮೆ ಉದ್ಘಾಟಿಸಿದಾಗ, ಅನಂತ್ ನಾಗ್ ಹೇಳುವ ಡೈಲಾಗ್ಗೆ ಈ ಪ್ರತಿಮೆ ಹೋಲಿಸಿದ್ದಾರೆ. ಅವರು ಮಾಡಿಸಿದ್ದು ಪ್ರತಿಮೆ ಸೂರ್ಯವರ್ಧನದ್ದು, ಆದರೆ ಅಲ್ಲಿದ್ದದ್ದು ಗರುಡನದ್ದು ಎಂದು ಅನಂತ್ನಾಗ್ ಡೈಲಾಗ್ ಹೇಳುತ್ತಾರೆ. ಅದೇ ರೀತಿ, ಅವರು ಮಾಡಿಸಿದ್ದು ಪ್ರತಿಮೆ ಸಚಿನ್ದು, ಆದರೆ ಅಲ್ಲಿದ್ದದ್ದು ಸ್ಮಿತ್ದು ಎಂದು ಫ್ಯಾನ್ಸ್, ಟ್ರೋಲ್ ಮಾಡುತ್ತಿದ್ದಾರೆ. ಅದರ ಜೊತೆಗೆ ಈ ಪ್ರತಿಮೆ ನೋಡಿ ಸಚಿನ್ ಹೇಗೆ ರಿಯಾಕ್ಟ್ ಮಾಡಿದ್ದಾರೆ ಎನ್ನುವ ಚಿತ್ರಗಳು ವೈರಲ್ ಆಗುತ್ತಿವೆ.
‘ಪ್ರತಿಮೆ ಮಾಡುವಾಗ ಸ್ಮಿತ್ ನೆನಪಾಗಿರಬೇಕು’
ಇನ್ನೂ ಕೆಲವರು ಪ್ರತಿಮೆ ನಿರ್ಮಿಸುವಾಗ ಸ್ಮಿತ್ ನೆನಪಾಗಿರಬಹುದು ಎಂದಿದ್ದಾರೆ. ಹಾಗೇನಿಲ್ಲ, ಸ್ಮಿತ್ ಕಟ್ಟಾಭಿಮಾನಿ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಇದನ್ನು ಸರಿದೂಗಿಸಲು, ಸ್ಮಿತ್ ನಿವೃತ್ತಿಯ ನಂತರ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಸಚಿನ್ ಪ್ರತಿಮೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸ್ಥಾಪಿಸಲಿದೆ ಎಂದು ನಗುವ ಎಮೋಜಿ ಹಾಕಿದ್ದಾರೆ. ಇದು ಸಂಪೂರ್ಣ ಸ್ಟೀವ್ ಸ್ಮಿತ್ರನ್ನೇ ಹೋಲುತ್ತದೆ, ಸಚಿನ್ ಅಲ್ಲವೇ ಅಲ್ಲ ಎಂದು ಕೆಲ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಸಚಿನ್ ಹೆಸರಿಲ್ಲಿ ಸ್ಮಿತ್ ಪ್ರತಿಮೆ ಅನಾವರಣ
ಅನುರಾಜ್ ಕುಮಾರ್ ಎಂಬಾತ ಇದು ತುಂಬಾ ವಿಲಕ್ಷಣ. ಮೈದಾನದ ಆಡಳಿತ ಮಂಡಳಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಸ್ಟೀವ್ ಸ್ಮಿತ್ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಇದು ವಿಶ್ವಕಪ್ನ ಐಸಿಸಿ ಈವೆಂಟ್ನಂತೆ ಕಾಣಲಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಈವೆಂಟ್ನಂತೆ ಇತ್ತು ಎಂದು ಪೋಸ್ಟ್ ಮಾಡಿದ್ದಾರೆ. ಪಾಕ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಇದು ಐಸಿಸಿ ಈವೆಂಟ್ನಂತೆ ಇರಲಿಲ್ಲ, ಬಿಸಿಸಿಐ ಕಾರ್ಯಕ್ರಮದಂತೆ ಇತ್ತು ಎಂದು ಭಾರತ-ಪಾಕ್ ಪಂದ್ಯದ ನಂತರ ಹೇಳಿದ್ದರು.
ಶ್ರೀಲಂಕಾ ವಿರುದ್ಧ ಭಾರತ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಯ್ ಶಾ , ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ, ರಾಜ್ಯಸಭಾ ಸದಸ್ಯ ಶರದ್ ಪವಾರ್ ಮತ್ತು ತೆಂಡೂಲ್ಕರ್ ಕುಟುಂಬ ಹಾಜರಿತ್ತು.