Gandhada Gudi Trailer: ‘ಗಂಧದ ಗುಡಿ’ಯಿಂದ ಹೊಸ ಸುದ್ದಿ; ಅಶ್ವಿನಿ ಪುನೀತ್ ಕಡೆಯಿಂದ ಹೀಗೊಂದು ಪೋಸ್ಟ್..
Oct 06, 2022 08:24 PM IST
‘ಗಂಧದ ಗುಡಿ’ಯಿಂದ ಹೊಸ ಸುದ್ದಿ; ಅಶ್ವಿನಿ ಪುನೀತ್ ಕಡೆಯಿಂದ ಹೀಗೊಂದು ಪೋಸ್ಟ್..
- ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಸಾಕ್ಷ್ಯಚಿತ್ರದ ಬಗ್ಗೆ ಪತ್ನಿ ಅಶ್ವಿನಿ ಪುನೀತ್ ಅಪ್ಡೇಟ್ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಪುನೀತ್ ರಾಜ್ಕುಮಾರ್ ಇಲ್ಲವಾಗಿ ವರ್ಷ ತುಂಬಲು ಇನ್ನೇನು ಹೆಚ್ಚು ದಿನ ಬೇಕಿಲ್ಲ. ಅವರಿಲ್ಲದೆ 12 ತಿಂಗಳು ಕಳೆದರೂ, ನಿತ್ಯ ಅವರನ್ನು ಸ್ಮರಿಸದವರಿಲ್ಲ. ಅವರ ಹೆಸರಲ್ಲಿ ಪುತ್ಥಳಿ ನಿರ್ಮಿಸುವ ಕೆಲಸಗಳು ಈಗಲೂ ನಡೆಯುತ್ತಿವೆ. ಅವರ ಹೆಸರಿನಲ್ಲಿ ಹೊಸ ಹೊಸ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಇತ್ತ ಅವರ ಬರ್ತ್ಡೇ ಪ್ರಯುಕ್ತ ಬಿಡುಗಡೆ ಆಗಿದ್ದ "ಜೇಮ್ಸ್" ಸಿನಿಮಾ ಸಹ ಶತದಿನೋತ್ಸವ ಆಚರಿಸಿಕೊಂಡಿತ್ತು. ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ. ಗಳಿಕೆಯನ್ನೂ ಮಾಡಿತ್ತು. ಅದಾದ ಮೇಲೆ "ಲಕ್ಕಿಮ್ಯಾನ್" ಸಿನಿಮಾ ಸಹ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಪುನೀತ್ ಅವರ ಕನಸಿನ ಪ್ರಾಜೆಕ್ಟ್ "ಗಂಧದ ಗುಡಿ" ಬಿಡುಗಡೆಯ ಸನಿಹಕ್ಕೆ ಬಂದಿದೆ. ಮೊದಲಾರ್ಥವಾಗಿ ಟ್ರೇಲರ್ಗೆ ದಿನಾಂಕ ನಿಗದಿಯಾಗಿದೆ.
ಟ್ರೇಲರ್ಗೆ ದಿನಾಂಕ ನಿಗದಿ..
ಕಳೆದ ವರ್ಷ ಅಕ್ಟೋಬರ್ 29ಕ್ಕೆ ಪುನೀತ್ ಸಾವಿನ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಅಪಾರ ಅಭಿಮಾನಿಗಳ ಹೃದಯ ಛಿದ್ರವಾಗಿತ್ತು. ಇದೀಗ ಆ ದಿನಕ್ಕೂ ಒಂದು ದಿನ ಮುನ್ನ ಅಂದರೆ, ಮುಂಬರುವ ಅಕ್ಟೋಬರ್ 28ಕ್ಕೆ "ಗಂಧದ ಗುಡಿ" ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲು ಟ್ರೇಲರ್ ತೋರಿಸಲು ನಿರ್ಧರಿಸಿದ್ದಾರೆ ನಿರ್ಮಾಪಕರು. ಈ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕದ ವಿಚಾರವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ಒಂದು ಅದ್ಬುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ... #ಗಂಧದಗುಡಿ ಟ್ರೈಲರ್ ಅಕ್ಟೋಬರ್ 9ರ ಬೆಳಗ್ಗೆ 10:19:10 ಕ್ಕೆ ಪಿಆರ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 28ಕ್ಕೆ ಬಿಡುಗಡೆ
"ಗಂಧದ ಗುಡಿ" ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕನಸಿನ ಯೋಜನೆ. ಕರ್ನಾಟಕದ ಕಾನನದ ತುಂಬೆಲ್ಲ ಚಿತ್ರಿತವಾಗಿರುವ ಈ ಸಾಕ್ಷ್ಯಚಿತ್ರದಲ್ಲಿ ಪುನೀತ್ ಸಹ ಕಾಣಿಸಿಕೊಂಡಿದ್ದಾರೆ. ನಟನಾಗಿ ಕಾಣಿಸಿಕೊಳ್ಳುವುದರ ಬದಲು, ಪುನೀತ್ ಆಗಿಯೇ "ಗಂಧದಗುಡಿ"ಯಲ್ಲಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಸಹ ಕುತೂಹಲ ಮೂಡಿಸಿದ್ದು, ಕರುನಾಡಿನ ಪೃಕೃತಿ ಸೌಂದರ್ಯ, ವನ್ಯ ಜೀವಿಗಳ ಬಗ್ಗೆ ಬೆಳಕು ಚೆಲ್ಲುತ್ತಿದೆ.
ಪಿಆರ್ಕೆ ಸಂಸ್ಥೆಯಡಿ ನಿರ್ಮಾಣವಾಗಿರುವ "ಗಂಧದಗುಡಿ" ಸಾಕ್ಷ್ಯಚಿತ್ರವನ್ನು ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷದ ನವೆಂಬರ್ 1ಕ್ಕೆ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿದ್ದರು ಪುನೀತ್. ಆದರೆ, ಅಕ್ಟೋಬರ್ 29ಕ್ಕೆ ಅವರ ಅಕಾಲಿಕ ಸಾವು ಇಡೀ ಕರುನಾಡನ್ನೇ ಅಕ್ಷರಶಃ ಅಳುಸಿತು. ಆಗ ನೆನೆಗುದಿಗೆ ಬಿದ್ದ ಪ್ರಾಜೆಕ್ಟ್ಗಳಲ್ಲಿ "ಗಂಧದ ಗುಡಿ" ಸಹ ಒಂದು. ಅದರ ಬಹುತೇಕ ಶೂಟಿಂಗ್ ಮುಗಿಸಿದ್ದ ಪುನೀತ್, ಇನ್ನೇನು ತೆರೆಗೆ ತರುವ ಪ್ಲಾನ್ ಹಾಕಿದ್ದರು. ಅಮೋಘವರ್ಷ ನಿರ್ದೇಶದಲ್ಲಿ ಮೂಡಿಬಂದಿರುವ ಈ ಸಾಕ್ಷ್ಯಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಪ್ರತೀಕ್ ಶೆಟ್ಟಿ ಛಾಯಾಗ್ರಹಣವಿದೆ.