R Chandru with Pawan Kalyan: 'ಕಬ್ಜ' ಮೆಚ್ಚಿದ ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡಲಿದ್ದಾರಂತೆ ಆರ್. ಚಂದ್ರು!
Mar 17, 2023 05:56 PM IST
'ಕಬ್ಜ' ಸಿನಿಮಾ ಮೆಚ್ಚಿದ ಪವನ್ ಕಲ್ಯಾಣ್
- 'ಕಬ್ಜ' ಆಡಿಯೋ ಲಾಂಚ್ ವೇಳೆ ಪವನ್ ಕಲ್ಯಾಣ್ ಆರ್. ಚಂದ್ರು ಅವರಿಗೆ ಪತ್ರ ಬರೆದು ವಿಶ್ ಮಾಡಿದ್ದು, ಇದೀಗ 'ಕಬ್ಜ' ಮೇಕಿಂಗ್ ನೋಡಿ ಕೂಡಾ ಮೆಚ್ಚಿದ್ಧಾರಂತೆ. ಇದೀಗ ಪವನ್ ಕಲ್ಯಾಣ್, ಚಂದ್ರು ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲೀಗ 'ಕಬ್ಜ' ಸಿನಿಮಾದ್ದೇ ಸುದ್ದಿ. ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಹಾಗೂ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಬ್ಜ' ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಕಿಂಗ್ಗೆ ಥ್ರಿಲ್ ಆಗಿದ್ದಾರೆ. ಇದೇ ಖುಷಿಯಲ್ಲಿ ಇದೀಗ ಆರ್. ಚಂದ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಂದು ಚಿತ್ರ ಮಾಡಲಿದ್ದು ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕನ್ನಡದಲ್ಲಿ ಯಶಸ್ಸು ಕಂಡ ಅನೇಕ ನಿರ್ದೇಶಕರು ಪರಭಾಷೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಪ್ರಶಾಂತ್ ನೀಲ್, ಎ. ಹರ್ಷ, ಪವನ್ ಕುಮಾರ್, ನಾಗಶೇಖರ್ ಸೇರಿದಂತೆ ಅನೇಕ ನಿರ್ದೇಶಕರು ಪರಭಾಷೆಯಲ್ಲಿ ಸಿನಿಮಾ ಡೈರೆಕ್ಷನ್ ಕೈ ಹಾಕಿದ್ದಾರೆ. ಇದೀಗ ಆರ್. ಚಂದ್ರು ಕೂಡಾ ತೆಲುಗು ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಲಿದ್ದು ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಸ್ಯಾಂಡಲ್ವುಡ್ ವಲಯದಲ್ಲಿ ಹರಿದಾಡುತ್ತಿದೆ. ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ನೋಡಿ ಥ್ರಿಲ್ ಆಗಿದ್ದಾರಂತೆ.
'ಕಬ್ಜ' ಆಡಿಯೋ ಲಾಂಚ್ ವೇಳೆ ಪವನ್ ಕಲ್ಯಾಣ್ ಆರ್. ಚಂದ್ರು ಅವರಿಗೆ ಪತ್ರ ಬರೆದು ವಿಶ್ ಮಾಡಿದ್ದು, ಇದೀಗ 'ಕಬ್ಜ' ಮೇಕಿಂಗ್ ನೋಡಿ ಕೂಡಾ ಮೆಚ್ಚಿದ್ಧಾರಂತೆ. ಚಿತ್ರದ ಮೊದಲಾರ್ಧ ಬಾಲಿವುಡ್ ರೀತಿ ಇದ್ರೆ ನಂತರ ಹಾಲಿವುಡ್ ರೀತಿ ಇದೆ. ಇದೊಂದು ಅಮೇಜಿಂಗ್ ಸಿನಿಮಾ ಎಂದು ಪವನ್ ಕಲ್ಯಾಣ್, ಆರ್.ಚಂದ್ರು ಹಾಗೂ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರಂತೆ. ಇದೇ ಖುಷಿಯಲ್ಲಿ ಪವನ್ ಕಲ್ಯಾಣ್, ಚಂದ್ರು ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೆಷ್ಟು ನಿಜ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ನಾಲ್ಕು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇರುವ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ತಮ್ಮ ಜನಸೇನಾ ಪಕ್ಷದ ಸಂಘಟನೆ ಜೊತೆಗೆ ಸಿನಿಮಾದಲ್ಲಿ ಕೂಡಾ ಬ್ಯುಸಿ ಇದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಹರಿಹರ ವೀರ ಮಲ್ಲು ಹಾಗೂ ಹೆಸರಿಡದ ಮತ್ತೊಂದು ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಉಸ್ತಾದ್ ಭಗತ್ ಸಿಂಗ್ ಹಾಗೂ ಮತ್ತೊಂದು ಸಿನಿಮಾ ಅನೌನ್ಸ್ ಆಗಿದ್ದು ಶೀಘ್ರದಲ್ಲೇ ಸೆಟ್ಟೇರಲಿವೆ. ಈ ಸಿನಿಮಾಗಳಲ್ಲಿ ಪವನ್ ಕಲ್ಯಾನ್ ತಮ್ಮ ಸೋದರ ಸಂಬಂಧಿ ಸಾಯಿ ಧರಮ್ ತೇಜ್ ಜೊತೆ ರೀಮೇಕ್ ಕಥೆಯಲ್ಲಿ ನಟಿಸುತ್ತಿದ್ದಾರೆ.
ಮುಂದಿನ ಸಿನಿಮಾಗೆ ದಿನವೊಂದಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತೇನೆಂದ ಪವನ್ ಕಲ್ಯಾಣ್
ಇತ್ತೀಚೆಗೆ ಜನಸೇನಾ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ''ನಾನು ಎಂದಿಗೂ ದುಡ್ಡಿಗೆ ಆಸೆ ಪಡುವ ಮನುಷ್ಯ ಅಲ್ಲ, ಬೇಕಿದ್ದರೆ ಹಣ ಸಂಪಾದನೆ ಮಾಡಿ ನಿಮಗೆ ಕೊಡುತ್ತೇನೆಯೇ ಹೊರತು, ನನಗೆ ಅದರ ಬಗ್ಗೆ ವ್ಯಾಮೋಹ ಇಲ್ಲ. ಇಂದು ನಿಮಗೆ ಒಂದು ವಿಷಯವನ್ನು ಧೈರ್ಯದಿಂದ ಹೇಳುತ್ತೇನೆ ಕೇಳಿ. ಈಗ ನಾನು ಮಾಡುತ್ತಿರುವ ಸಿನಿಮಾಗೆ 20 ದಿನಗಳ ಸಮಯ ಕಾಲ್ಶೀಟ್ ನೀಡಿದ್ದೇನೆ. ಆ ಸಿನಿಮಾಗೆ ಪ್ರತಿ ದಿನಕ್ಕೆ 2 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಿದ್ದೇನೆ. ಅಂದರೆ ಇಡೀ ಸಿನಿಮಾಗೆ 40 ಕೋಟಿ ರೂಪಾಯಿ ದೊರೆಯುತ್ತದೆ. ಆದರೆ ಪ್ರತಿ ಸಿನಿಮಾಗೂ ಅಷ್ಟು ಹಣ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ನನ್ನ ಸಾಮಾನ್ಯವಾದ ಸಂಭಾವನೆ ಮಟ್ಟ. ಇಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದರೆ ಅದು ನೀವೇ ಕೊಟ್ಟ ಸ್ಥಾನ'' ಎಂದು ಹೇಳಿದ್ದರು.