logo
ಕನ್ನಡ ಸುದ್ದಿ  /  ಕರ್ನಾಟಕ  /  Manikanta Rathod: ಕಲಬುರಗಿಯಲ್ಲಿ ಮಣಿಕಂಠ ರಾಠೋಡ್ ಹೈಡ್ರಾಮಾ, ಸುದ್ದಿಗೋಷ್ಠಿಗೂ ಮೊದಲೆ ಬಂಧನ

Manikanta Rathod: ಕಲಬುರಗಿಯಲ್ಲಿ ಮಣಿಕಂಠ ರಾಠೋಡ್ ಹೈಡ್ರಾಮಾ, ಸುದ್ದಿಗೋಷ್ಠಿಗೂ ಮೊದಲೆ ಬಂಧನ

HT Kannada Desk HT Kannada

Dec 07, 2023 09:44 PM IST

ಪೊಲೀಸ್ ವಶಕ್ಕೆ ಮಣಿಕಂಠ ರಾಠೋಡ್

  • ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಸುಳ್ಳು ಆರೋಪ ಮಾಡಿದ ಮಣಿಕಂಠ ಸುದ್ದಿಗೋಷ್ಠಿ ನಡೆಸಲು ತೆರಳುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದರು. 

ಪೊಲೀಸ್ ವಶಕ್ಕೆ ಮಣಿಕಂಠ ರಾಠೋಡ್
ಪೊಲೀಸ್ ವಶಕ್ಕೆ ಮಣಿಕಂಠ ರಾಠೋಡ್

ಕಲಬುರಗಿ: ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿ, ಆ ಹಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕಾರಣವೆಂದು ಆರೋಪಿಸಿದ್ದ ಜಿಲ್ಲೆಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿ ನಗರ ಚೌಕ್‌ ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಇತ್ತೀಚೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಆರೋಪಿಸಿರುವ ಮಣಿಕಂಠ ರಾಠೋಡ ಒಂದು ಕಟ್ಟು ಕಥೆ ಕಟ್ಟಿದ್ದು, ಹಲ್ಲೆ ನಡೆದಿಲ್ಲ ಹೊರತಾಗಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಈ ಕುರಿತು ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ಆಧರಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗ ಪಡಿಸಿ ಸುಳ್ಳು ಅರೋಪ ಮಾಡಿದ ಮಣಿಕಂಠ ರಾಠೋಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು.

ಈ ಸುದ್ದಿ ತಿಳಿದ ತಕ್ಷಣ ಮಣಿಕಂಠ ರಾಠೋಡ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲು ಬರುತ್ತಿದ್ದ ಸಂದರ್ಭದಲ್ಲಿಯೇ ಕಲಬುರಗಿ ನಗರದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿದ್ದ ಮಣಿಕಂಠ್ ರಾಠೋಡ್‌ನನ್ನು ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಣಿಕಂಠ ರಾಠೋಡ್ ಬೆಂಬಲಿಗನ ವಿಚಾರಣೆ ವೇಳೆ ಬಹಿರಂಗವಾದ ಸತ್ಯ

ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ಅಸಲಿಯತ್ತು ಬಯಲಾಗಿದೆ. ಈ ಮೂಲಕ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡು ಹಲ್ಲೆ ಮಾಡಿದ್ದಾರೆ ಎಂದು ಬಿಂಬಿಸಿರುವುದು ಬಯಲಾಗಿದೆ.

ಬಿಜೆಪಿ ನಾಯಕರ ವಿರುದ್ದ ಕ್ರಿಮಿನಲ್ ಡಿಫಾನೇಷನ್ ಕೇಸ್ : ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿ ಪಕ್ಷದ‌ ಮಣಿಕಂಠ ರಾಠೋಡ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರು ದೂರು ನೀಡಿರುವಂತೆ ಶಂಕರವಾಡಿ ಬಳಿ ಅವರ ಮೇಲೆ ಯಾವುದೇ ಹಲ್ಲೆಯಾಗಿಲ್ಲ ಬದಲಿಗೆ ಮಣಿಕಂಠ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ವಾಹನ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚೆಪೆಟ್ಲಾ ಬಳಿ ಅಪಘಾತಕ್ಕೀಡಾಗಿದೆ. ಆ ಸಂದರ್ಭದಲ್ಲಿ ಅವರಿಗೆ ಗಾಯಗಳಾಗಿವೆ ಇದು ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಯಿಂದ ತಿಳಿದುಬಂದಿದೆ ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಮೇಲೆ ಹಲ್ಲೆ ನಿರಾಧಾರ ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡಿದ‌ ಬಿಜೆಪಿಯ ನಾಯಕರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಗುಡುಗಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಕಿ ಹಾಗೂ ಹಾಲಿನ ಪುಡಿ ಕಳ್ಳತನದ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಯ ಮಾತು ಕೇಳಿಕೊಂಡು ನನ್ನ ಚಾರಿತ್ರ್ಯ ಹರಣ ಮಾಡಿ ರಾಜೀನಾಮೆಗೆ ಒತ್ತಾಯಿಸಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್‌ ಸೇರಿ ಬಿಜೆಪಿಯ ಎಲ್ಲ ನಾಯಕರ ವಿರುದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದುಮೆ ಮಾಡುವುದರ ಜೊತೆಗೆ ಸಿಎಲ್ ಪಿ ಲೀಡರ್ ಜೊತೆಗೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಖರ್ಗೆ ಖಡಕ್ ಆಗಿ ಹೇಳಿದರು.

"ಅವನು ನೀಡಿದ ದೂರಿನಂತೆ ದಿನಾಂಕ 2023ರ ನವೆಂಬರ್ 19 ರಂದು ಬೆಳಿಗ್ಗೆ 1.30 ರಿಂದ ಅವನು ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿರುವ ಸ್ಥಳದಲ್ಲಿ ಇರಲೇ ಇಲ್ಲ. ಅವನು ಹಾಗೂ ಅವನ‌ ಇಬ್ಬರು ಸ್ನೇಹಿತರು ಪ್ರಯಾಣಿಸುತ್ತಿದ್ದ ಇನ್ನೋವಾ ವಾಹನ ಚೆಪೆಟ್ಲಾ ಬಳಿಯ ತಿರುವಿನಲ್ಲಿ ಅಪಘಾತಕ್ಕೀಡಾಗಿತ್ತು. ಆ ನಂತರ ತನ್ನ ಕಡೆಯವರಿಗೆ ಫೋನ್ ಮಾಡಿ ಬೇರೆ ವಾಹನ ತರಿಸಿಕೊಂಡು ಕಲಬುರಗಿ ಗೆ ಬಂದಿದ್ದಾನೆ. ಅಪಘಾತವಾದ ವಾಹನವನ್ನು ಹೈದರಾಬಾದ್ ಗೆ ಕಳಿಸಿದ್ದಾನೆ. ಇದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ" ಎಂದು ಸಚಿವರು ವಿವರಿಸಿದರು.

" ಪಡಿತರ ಫಲಾನುಭವಿಗಳಿಗೆ ವಿತರಿಸುವ ಅಕ್ಕಿ ಕಳ್ಳತನ, ಅಂಗನವಾಡಿ ಮಕ್ಕಳಿಗೆ ವಿತರಿಸಲು ಉದ್ದೇಶಿಸಲಾಗಿದ್ದ ಹಾಲಿನಪುಡಿ ಕಳ್ಳತನ ಆರೋಪ, ವಂಚನೆ, ಮೋಸ ಇತ್ಯಾದಿ ಕ್ರಿಮಿನಲ್ ಪ್ರಕರಣ ಆರೋಪಿಯಾಗಿ ಕಲಬುರಗಿ, ಯಾದಗಿರಿ, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಹಾಗೂ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಒಟ್ಟು 33 ಕೇಸು ಎದುರಿಸುತ್ತಿರುವ ಮಣಿಕಂಠನಿಗೆ ಬಿಜೆಪಿಯವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಿತ್ತಾಪುರದಿಂದ ಟಿಕೇಟ್ ನೀಡಿದ್ದರು.ಬಿಜೆಪಿಯವರು ಟಿಕೇಟ್ ನೀಡುವ ಮುನ್ನ ಅವನ ಹಿನ್ನೆಲೆಯನ್ನಾದರೂ ತಿಳಿದುಕೊಳ್ಳಬೇಕಿತ್ತು. ಅಂತವನ ಮಾತು ಕೇಳಿಕೊಂಡು‌ ವಿಜಯೇಂದ್ರ ' ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿದ್ದಾರೆ' ಎಂದು ನನ್ನ ಚಾರಿತ್ರ್ಯ ಹರಣ ಮಾಡಿದರು.

ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಅವರು ಕ್ಯಾಬಿನೆಟ್ ಸಚಿವರೊಬ್ಬರ ಮೇಲೆ ಹೀಗೆ ಆರೋಪ ಮಾಡಬಹುದೇ? ಜೊತೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡಾ ಅವನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ರವಿಕುಮಾರ್ ' ಮಣಿಕಂಠನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಕಾರಣ' ಎಂದು ಹೇಳುತ್ತಾರೆ. ಅಂತಹ ವ್ಯಕ್ತಿಯ ಜೊತೆಗೆ ನನಗೇನಿದೆ ಕೆಲಸ.? ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಬಿಜೆಪಿ ನಾಯಕರು ಇಂತಹ ನಾಟಕಗಳನ್ನು ಬಿಟ್ಟು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಸಲಹೆ ನೀಡಿದರು.

"ಮಣಿಕಂಠ ರಾಠೋಡ್ ನೀಡಿದ ದೂರಿನಂತೆ ತನಿಖೆ ಕೈಗೊಂಡ ಪೊಲೀಸರು ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ನನ್ನ ಮೇಲೆ ಆಧಾರರಹಿತ ಆರೋಪ ಹೊರೆಸಿ ನನ್ನ ರಾಜೀನಾಮೆಗೆ ಆಗ್ರಹಿಸಿ ನನ್ನನ್ನು ಸಂಪುಟದಿಂದ ವಜಾ‌ ಮಾಡುವಂತೆ ಹೇಳಿದ ಬಿಜೆಪಿ ನಾಯಕರು ಈಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತಾರೆಯೇ ? " ಎಂದು ಖಾರವಾಗಿ ಪ್ರಶ್ನಿಸಿದ ಪ್ರಿಯಾಂಕ್, ಮಣಿಕಂಠನ ಪರವಾಗಿ ಬ್ಯಾಟಿಂಗ್ ಮಾಡುವ ಬಿಜೆಪಿ ನಾಯಕರು ಅವನು, ಪ್ರಿಯಾಂಕ್ ಖರ್ಗೆಯನ್ನು ಶೂಟ್ ಮಾಡುತ್ತೇನೆ ಎಂದಾಗ, ಖರ್ಗೆ ಕುಟುಂಬವನ್ನು ಸಾಫ್ ಮಾಡುತ್ತೇನೆ ಎಂದಾಗ, ನನ್ನ ಕುಟುಂಬದವರ, ತಾಯಿಯವರ ಫೋಟೋಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಾಕಿದ್ದಾಗ ಎಲ್ಲಿ ಹೋಗಿದ್ದರು ? ಎಂದರು.

ಈಗ ಪೊಲೀಸ್ ತನಿಖೆಯಿಂದ ನಿಜಸಂಗತಿ ಬಯಲಾಗಿದೆ. ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ಚಾರಿತ್ರ್ಯ ಹರಣ ಮಾಡಿದ ಯಾವೊಬ್ಬ ಬಿಜೆಪಿ ನಾಯಕರನ್ನೂ ಸುಮ್ಮನೆ ಬಿಡಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮವಾಗಿ ಮಾನನಷ್ಠ ಮೊಕದ್ದುಮೆ ಹೂಡುತ್ತೇನೆ. ಜೊತೆಗೆ ಸಿಎಲ್‌ಪಿ ನಾಯಕರೊಂದಿಗೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಮಾಡುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಖರ್ಗೆ ಪುನರುಚ್ಚರಿಸಿದರು.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ