logo
ಕನ್ನಡ ಸುದ್ದಿ  /  Karnataka  /  Karnataka Election A Swot Analysis Of The Bjp In Karnataka Election News In Kannada Jds Congress Kjp Uks

Analysis: ಕರ್ನಾಟಕ ಚುನಾವಣೆ 2023; ಬಿಜೆಪಿ ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ಆತಂಕಗಳ ಅವಲೋಕನ

Anonymous HT Kannada

Apr 29, 2023 07:15 AM IST

ಕೇಂದ್ರ ಸಚಿವ ಅಮಿತ್‌ ಶಾ ಜತೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  • Analysis: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಇರುವ ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು ಮತ್ತು ಆತಂಕಗಳನ್ನು ಅವಲೋಕಿಸುವ ಮೂರು ಚಾರ್ಟ್‌ಗಳು ಮತ್ತು ವಿವರಣೆಯನ್ನು ನೀಡಿದ್ದಾರೆ ಹಿಂದುಸ್ತಾನ ಟೈಮ್ಸ್‌ನ ನಿಶಾಂತ್‌ ರಂಜನ್‌.

ಕೇಂದ್ರ ಸಚಿವ ಅಮಿತ್‌ ಶಾ ಜತೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕೇಂದ್ರ ಸಚಿವ ಅಮಿತ್‌ ಶಾ ಜತೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (HT_PRINT / ANI)

ರಾಜ್ಯದಲ್ಲಿ ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (BJP) ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷೆಗಳೇನು? ಅದನ್ನು ಈಡೇರಿಸಿಕೊಳ್ಳುವಲ್ಲಿ ಬಿಜೆಪಿಗೆ ಇರುವ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಆತಂಕಗಳನ್ನು ವಿವರಿಸುವ ಮೂರು ಚಾರ್ಟ್‌ಗಳ ವಿವರಣೆ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

ಸಾಮರ್ಥ್ಯ (Strength): ಸಮರಾಂಗಣದಲ್ಲಿರುವ ಬಿ.ಎಸ್.ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2013 ರಲ್ಲಿ, ಬಿಜೆಪಿ ಜತೆಗಿನ ಸಂಬಂಧವನ್ನು ಮುರಿದು ತಮ್ಮದೇ ಪಕ್ಷವಾದ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ಬ್ಯಾನರ್ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 204ರಲ್ಲಿ ಕೆಜೆಪಿ ಸ್ಪರ್ಧಿಸಿದೆ. ಕೆಜೆಪಿ ವಿಶೇಷವಾಗಿ ಉತ್ತಮ ಸಾಧನೆ ಮಾಡದಿದ್ದರೂ ಅದು ಕೇವಲ ಆರು ಕ್ಷೇತ್ರಗಳನ್ನು ಗೆದ್ದು ರಾಜ್ಯದ 14 ಪ್ರತಿಶತ ಮತಗಳಿಕೆ ಪಾಲನ್ನು ಹೊಂದಿತ್ತು. ಇದು ಬಿಜೆಪಿಗೆ ಭಾರಿ ಹಾನಿಯನ್ನುಂಟುಮಾಡಿತು. ಅವರ ಸ್ಥಾನವು 2008ರಲ್ಲಿ 110 ಇದ್ದದ್ದು 2013 ರಲ್ಲಿ ಕೇವಲ 40ಕ್ಕೆ ಕುಸಿದಿತ್ತು.

2008 ಮತ್ತು 2013ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಮತ ಹಂಚಿಕೆಯನ್ನು ಕ್ಷೇತ್ರವಾರು ಬದಲಾವಣೆಯೊಂದಿಗೆ ಕೆಜೆಪಿಯ 2013 ರ ಕಾರ್ಯಕ್ಷಮತೆಯನ್ನು ಹೋಲಿಸಿ ಗಮನಿಸಿ. ಅದರಲ್ಲಿ, ಕೆಜೆಪಿಯು ಬಿಜೆಪಿಗೆ ಉಂಟು ಮಾಡಿದ ಹಾನಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸರಾಸರಿಯಾಗಿ, ಕ್ಷೇತ್ರಗಳ ಲೆಕ್ಕಾಚಾರದಲ್ಲಿ ಬಿಜೆಪಿಗೆ ಅತಿದೊಡ್ಡ ನಷ್ಟವಾಯಿತು. ಇದೇ ವೇಳೆ ಕೆಜೆಪಿಗೆ ಹೆಚ್ಚಿನ ಮತ ಹಂಚಿಕೆಯೂ ಆಯಿತು. ಯಡಿಯೂರಪ್ಪ ಇಲ್ಲದ್ದರ ದುಷ್ಪರಿಣಾಮವನ್ನು ಅರಿತ ಬಿಜೆಪಿ ನಾಯಕರು, 2014ರ ಲೋಕಸಭೆ ಚುನಾವಣೆಗೂ ಮುನ್ನ ಅವರನ್ನು ವಾಪಸ್‌ ಪಕ್ಷಕ್ಕೆ ಸೇರಿಸಿಕೊಂಡರು. 2013 ರ ಚುನಾವಣೆಯ ಅನುಭವದ ಕಡೆಗೊಂದು ಹಿನ್ನೋಟ ಬೀರಿದರೆ, ಯಡಿಯೂರಪ್ಪ ಪಕ್ಷದಲ್ಲಿ ಇಲ್ಲದಿದ್ದರೆ 2018 ರಲ್ಲಿ ಬಿಜೆಪಿಯ ಸಾಧನೆಗೆ ಹೋಲಿಸಿದರೆ 2023 ರ ಚುನಾವಣೆಯಲ್ಲಿ ಅದರ ಭವಿಷ್ಯವು ತುಂಬಾ ಕೆಟ್ಟದಾಗಿರಲಿದೆ ಎಂದು ಹೇಳಬಹುದು.

ಚಾರ್ಟ್ 1: ಕೆಜೆಪಿಯ ಸರಾಸರಿ ಮತ ಹಂಚಿಕೆ ಮತ್ತು 2008 ಮತ್ತು 2013 ರ ನಡುವೆ ಬಿಜೆಪಿ ಮತ ಹಂಚಿಕೆಯಲ್ಲಿ ಬದಲಾವಣೆ

2013ರ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಜೆಪಿ ನಡುವಿನ ಕ್ಷೇತ್ರವಾರು ಮತಗಳಿಕೆ ಪ್ರಮಾಣ

ದೌರ್ಬಲ್ಯ (Weakness): ಕೆಲವು ಪ್ರದೇಶಗಳಲ್ಲಿ ಬಿಜೆಪಿಯ 2018ರ ಸಾಧನೆಯಲ್ಲಿ ಕೊರತೆ

ಯಡಿಯೂರಪ್ಪನವರು 2018ರ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದರೂ ಆಡಳಿತ ವಿರೋಧಿ ಲಾಭವನ್ನು ಅನುಭವಿಸುತ್ತಿದ್ದರೂ ತನ್ನದೇ ಆದ ಬಹುಮತವನ್ನು ಗಳಿಸಲು ಬಿಜೆಪಿ ಏಕೆ ವಿಫಲವಾಯಿತು? 2008 ರಿಂದ 2018 ರವರೆಗಿನ ಫಲಿತಾಂಶಗಳ ಉಪ-ಪ್ರಾದೇಶಿಕ ವಿಶ್ಲೇಷಣೆಯು ಈ ಪ್ರಶ್ನೆಯ ಮೇಲೆ ಸ್ವಲ್ಪ ಬೆಳಕು ಚೆಲ್ಲಬಹುದು. ಕರಾವಳಿ ಮತ್ತು ಮಧ್ಯ ಕರ್ನಾಟಕದಲ್ಲಿ ಬಿಜೆಪಿ ತನ್ನ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಸುಧಾರಿಸಿದೆ - ಮೊದಲನೆಯದು ಸಾಂಪ್ರದಾಯಿಕವಾಗಿ ಬಿಜೆಪಿಯ ಭದ್ರಕೋಟೆಯಾಗಿದೆ. ಎರಡನೆಯದು ಲಿಂಗಾಯತರಿಂದ ಪ್ರಾಬಲ್ಯ ಹೊಂದಿದೆ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಯಡಿಯೂರಪ್ಪ ಮುಖ್ಯ. ಇಷ್ಟಾಗ್ಯೂ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಅಂದರೆ, ಕಾಂಗ್ರೆಸ್ (ಬಾಂಬೆ ಮತ್ತು ಹೈದರಾಬಾದ್ ಕರ್ನಾಟಕ) ಮತ್ತು ಜಾತ್ಯತೀತ ಜನತಾ ದಳ (ಜೆಡಿಎಸ್)ನ ದಕ್ಷಿಣ ಕರ್ನಾಟಕದ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿರುವಲ್ಲಿ ಕಾಲಿಡಲು ಬಿಜೆಪಿ ವಿಫಲವಾಗಿದೆ. 2018 ರ ಫಲಿತಾಂಶದ ನಂತರ ಚುನಾವಣೋತ್ತರ ಮೈತ್ರಿ ಸಾಧಿಸುವುದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನೆರವಾಗಿದ್ದೇ ಈ ಅಂಶ. ಇದು ಆ ಪಕ್ಷಗಳ ಸಾಮರ್ಥ್ಯ ಕೂಡ ಹೌದು.

ಚಾರ್ಟ್ 2 : 2008, 2013 ಮತ್ತು 2018 ರಲ್ಲಿ ಬಿಜೆಪಿಯ ಉಪ-ಪ್ರದೇಶವಾರು ಸ್ಥಾನಗಳು

ಬಿಜೆಪಿ ಗೆದ್ದ ಉಪ - ಪ್ರಾಂತ್ಯವಾರು ಸ್ಥಾನಗಳ ವಿವರ

ಅವಕಾಶ (Opportunity): ಜೆಡಿಎಸ್ ಭದ್ರಕೋಟೆಗೆ ಪ್ರವೇಶವು ಬಿಜೆಪಿಗೆ ಬಹುದೊಡ್ಡ ಲಾಭ ಉಂಟುಮಾಡಬಹುದು

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಯು ನೆಲದ ಮೇಲಿನ ಎರಡು ಪಕ್ಷಗಳ ಸಾವಯವ ಹೊಂದಾಣಿಕೆಗಿಂತ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಿಂದ ಹೆಚ್ಚು ನಡೆಸಲ್ಪಟ್ಟಿದೆ. ಇದಕ್ಕೆ ದೊಡ್ಡ ಪುರಾವೆಯೆಂದರೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪ್ರಾಯೋಗಿಕವಾಗಿ ಕ್ಷೀಣವಾಗಿರುವುದು. ಈ ಪ್ರದೇಶದಲ್ಲಿ ಜೆಡಿಎಸ್‌ನ ಪ್ರಾಥಮಿಕ ಎದುರಾಳಿ ಕಾಂಗ್ರೆಸ್. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಚುನಾವಣಾ ಪೂರ್ವ ಮೈತ್ರಿಯು ಈ ವಿರೋಧಾಭಾಸಗಳ ಭಾರದಲ್ಲಿ ಕುಸಿದುಬಿತ್ತು. ಬಿಜೆಪಿ ಈ ಮಂಥನದ ದೊಡ್ಡ ಫಲಾನುಭವಿಯಾಗಿ ಹೊರಹೊಮ್ಮಿತು. 2018 ರ ವಿಧಾನಸಭಾ ಚುನಾವಣೆಗಳು ಮತ್ತು 2019 ರ ಲೋಕಸಭೆ ಚುನಾವಣೆಗಳ ಹೋಲಿಕೆಯು ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಜೆಡಿಎಸ್‌ನ ಸಖ್ಯದೊಂದಿಗೆ 2019 ರಲ್ಲಿ ದಕ್ಷಿಣ ಕರ್ನಾಟಕ ಪ್ರದೇಶಗಳಲ್ಲಿ ಬಿಜೆಪಿ ತನ್ನ ಸ್ಥಾನಗಳ ಪಾಲನ್ನು ಹೆಚ್ಚಿಸುವುದರೊಂದಿಗೆ (ಬಿಜೆಪಿಯು ದಕ್ಷಿಣ ಕರ್ನಾಟಕದಲ್ಲಿ ತನ್ನ ಕಾರ್ಯಕ್ಷಮತೆಯನ್ನು ಪುನರಾವರ್ತಿಸಲು ಸಾಧ್ಯವಾದರೆ ), ಈ ಚುನಾವಣೆಯಲ್ಲಿ ದೊಡ್ಡ ಲಾಭವನ್ನು ಗಳಿಸಲು ಮುಂದಾಗಿದೆ.

ಚಾರ್ಟ್ 3: 2008, 2009, 2013, 2014, 2018 ಮತ್ತು 2019 ರಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪಕ್ಷವಾರು ಸ್ಥಾನಗಳು.

ದಕ್ಷಿಣ ಕರ್ನಾಟಕ ಭಾಗದಲ್ಲಿ ಕ್ಷೇತ್ರವಾರು ಸ್ಥಾನ ಗಳಿಕೆ

ಆತಂಕ (Threat): ಪಕ್ಷಾಂತರದಿಂದ ಬಿಜೆಪಿಗೆ ತೊಂದರೆಯಾಗಲಿದೆಯೇ?

ರಾಜ್ಯದಲ್ಲಿಆಡಳಿತಾರೂಢ ಬಿಜೆಪಿಯು ಪ್ರಬಲ ಆಡಳಿತ ವಿರೋಧಿ ಹೋರಾಟವನ್ನು ಎದುರಿಸುತ್ತಿದೆ. ಇದು ಪಕ್ಷದಿಂದ ಹಲವಾರು ಉನ್ನತ ಮಟ್ಟದ ನಿರ್ಗಮನಗಳಿಗೆ ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ ಸವದಿ ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು ಮತ್ತು ರಾಜ್ಯದ ಬಾಂಬೆ ಕರ್ನಾಟಕ ಪ್ರದೇಶದಲ್ಲಿ ಗಣನೀಯ ಪ್ರಭಾವವನ್ನು ಹೊಂದಿದ್ದಾರೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಜಗದೀಶ ಶೆಟ್ಟರ್ ಗೆಲುವಿನ ನಾಗಾಲೋಟ ದಾಖಲಾಗಿದೆ. ಅವರ ಗೆಲುವಿನ ಅಂತರ ಕನಿಷ್ಠ 14 ಪ್ರತಿಶತದಷ್ಟಿದೆ. ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಈ ಪಕ್ಷಾಂತರಗಳ ಪ್ರಭಾವವನ್ನು ನಿರ್ಣಯಿಸುವುದು ಅಕಾಲಿಕವಾಗಿದ್ದರೂ, ಅವರು ಖಂಡಿತವಾಗಿಯೂ ಪಕ್ಷದ ದುರ್ಬಲತೆಯ ಗ್ರಹಿಕೆಯನ್ನು ಸೃಷ್ಟಿಸಿದ್ದಾರೆ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌ ಆಗುವ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಪಾತ್ರವಹಿಸಿದೆ.

ಅವಲೋಕನ - ನಿಶಾಂತ್‌ ರಂಜನ್‌, ಹಿಂದುಸ್ತಾನ್‌ ಟೈಮ್ಸ್

ಅನುವಾದ: ಉಮೇಶ್ ಕುಮಾರ್ ಶಿಮ್ಲಡ್ಕ‌, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ

ಮೂಲ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿ: Number theory: A SWOT analysis of the BJP in Karnataka

    ಹಂಚಿಕೊಳ್ಳಲು ಲೇಖನಗಳು