logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather Today: ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತ, ಕರ್ನಾಟಕದ ವಿವಿಧೆಡೆ ಗುಡುಗುಮಿಂಚು ಸಹಿತ ಮಳೆ, ಇಂದಿನ ಹವಾಮಾನ ವರದಿ

Karnataka Weather Today: ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತ, ಕರ್ನಾಟಕದ ವಿವಿಧೆಡೆ ಗುಡುಗುಮಿಂಚು ಸಹಿತ ಮಳೆ, ಇಂದಿನ ಹವಾಮಾನ ವರದಿ

Praveen Chandra B HT Kannada

May 06, 2023 06:04 AM IST

Karnataka Weather Today: ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತ, ಕರ್ನಾಟಕದ ವಿವಿಧೆಡೆ ಇಂದೂ ಮಳೆ, ಇಂದಿನ ಹವಾಮಾನ ವರದಿ

  • ಭಾರತದ ಹವಾಮಾನ ಇಲಾಖೆ (IMD)ಯ ಬೆಂಗಳೂರು ವಿಭಾಗವು (Met Centre Bengaluru) ಇಂದಿನ ಹವಾಮಾನ ವರದಿ (IMD weather forecast karnataka) ಪ್ರಕಟಿಸಿದೆ. ರಾಜ್ಯದ ವಿವಿಧೆಡೆ ಇಂದು ಹಗುರ/ಸಾಧಾರಣ ಮಳೆಯಾಗಲಿದೆ. 

Karnataka Weather Today: ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತ, ಕರ್ನಾಟಕದ ವಿವಿಧೆಡೆ ಇಂದೂ ಮಳೆ, ಇಂದಿನ ಹವಾಮಾನ ವರದಿ
Karnataka Weather Today: ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತ, ಕರ್ನಾಟಕದ ವಿವಿಧೆಡೆ ಇಂದೂ ಮಳೆ, ಇಂದಿನ ಹವಾಮಾನ ವರದಿ (AFP)

ಭಾರತದ ಹವಾಮಾನ ಇಲಾಖೆ (IMD)ಯ ಬೆಂಗಳೂರು ವಿಭಾಗವು (Met Centre Bengaluru) ಇಂದಿನ ಹವಾಮಾನ ವರದಿ (IMD weather forecast karnataka) ಪ್ರಕಟಿಸಿದ್ದು, ರಾಜ್ಯದ ವಿವಿಧೆಡೆ ಇಂದು ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಇದೇ ಸಮಯದಲ್ಲಿ ಭಾರತೀಯ ಹವಾಮಾನ ಇಲಾಖೆಯು ಪ್ರಕಟಿಸಿದ ಹವಾಮಾನ ವರದಿಯಲ್ಲಿ ಮೋಚಾ ಚಂಡಮಾರುತ ಪ್ರೇರಿತವಾಗಿ ವಿವಿಧ ರಾಜ್ಯಗಳಲ್ಲಿ ಮಿಂಚು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನಾಳೆಯವರೆಗೆ ಭಾರತದ ಬಹುತೇಕ ಭಾಗಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಪಶ್ಚಿಮ ಹಿಮಾಲಯ ಪ್ರದೇಶಗಳು ಸೇರಿದಂತೆ ವಾಯುವ್ಯ ಭಾರತದಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ದಕ್ಷಿಣ ಕನ್ನಡದ ವಿವಿಧೆಡೆ ಅನಿರೀಕ್ಷಿತವಾಗಿ ಮಳೆಯಾಗಿದ್ದು, ಕಾದ ನೆಲ ತಂಪಾಗಿದೆ. ಆದರೆ, ಮಂಗಳೂರು ಸೇರಿದಂತೆ ವಿವಿಧೆಡೆ ಮಳೆಯಾಗದೆ ಇರುವುದರಿಂದ ನೀರಿನ ತತ್ವಾರ ಮುಂದುವರೆದಿದೆ. ಹವಾಮಾನ ಇಲಾಖೆಯ ಇಂದಿನ ಮುನ್ಸೂಚನೆ ಪ್ರಕಾರ ಇಂದು ಬಿಸಿಲ ಬೇಗೆಯಲ್ಲಿರುವ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಹವಾಮಾನ ವರದಿ

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇಂದು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡದಲ್ಲಿಯೂ ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ ಪ್ರಕಾರ, ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್‌, ಕಲಬುರ್ಗಿ, ವಿಜಯಪುರದಲ್ಲಿ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರಿನಲ್ಲಿಯೂ ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಯಾದಗಿರಿ, ಕೊಪ್ಪಳದಲ್ಲಿ ಒಣಹವೆ ಮುಂದುವರೆಯಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ ನಿರೀಕ್ಷೆ

ಇಂದು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶವು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಯಿದೆ.

ಇತರೆ ರಾಜ್ಯಗಳಲ್ಲಿಯೂ ಮಳೆ ಮುನ್ಸೂಚನೆ

ಮೇ 7 ರವರೆಗೆ ಪಂಜಾಬ್ ಮತ್ತು ಹರಿಯಾಣದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೇ 7 ಮತ್ತು 8 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಮೋಚಾ - ಸೈಕ್ಲೋನಿಕ್ ಚಂಡಮಾರುತದ ರಚನೆಯ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ. ಇದರಿಂದ ಮೇ 7 ಮತ್ತು ಮೇ 9 ರ ನಡುವೆ ದೇಶದ ಪೂರ್ವ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಸೈಕ್ಲೋನಿಕ್ ಚಂಡಮಾರುತದ ರಚನೆಯ ಸಾಧ್ಯತೆಯ ಹಿನ್ನೆಲೆಯಲ್ಲಿ, ಭಾನುವಾರದಿಂದ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳದಂತೆ ಹವಾಮಾನ ತಜ್ಞರು ಮೀನುಗಾರರಿಗೆ ಎಚ್ಚರಿಕೆ ನೀಡಿದ್ದಾರೆ. "ಮೀನುಗಾರರು, ಸಣ್ಣ ಹಡಗುಗಳು, ದೋಣಿಗಳು ಮತ್ತು ಟ್ರಾಲರ್‌ಗಳು ಮೇ 7 ರಿಂದ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪ್ರದೇಶಗಳಿಗೆ ಮತ್ತು ಮೇ 9 ರಿಂದ ಪಕ್ಕದ ಕೇಂದ್ರ ಬಿಒಬಿಗೆ ಹೋಗದಂತೆ ಸೂಚಿಸಲಾಗಿದೆ" ಎಂದು ಭುವನೇಶ್ವರದ ಹವಾಮಾನ ಕೇಂದ್ರದ ಮುಖ್ಯಸ್ಥ ಮತ್ತು ವಿಜ್ಞಾನಿ ಎಚ್‌ಆರ್ ಬಿಸ್ವಾಸ್ ಹೇಳಿದ್ದಾರೆ. ಎಲ್ಲಾ ಚಂಡಮಾರುತ ಪೀಡಿತ ಜಿಲ್ಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎನ್‌ಡಿಆರ್‌ಎಫ್, ಒಡಿಆರ್‌ಎಫ್ ಮತ್ತು ಇತರರೊಂದಿಗೆ ಜಿಲ್ಲಾಡಳಿತಗಳು ಯಾವುದೇ ಸಂಭವನೀಯ ಘಟನೆ ಎದುರಿಸಲು ಸನ್ನದ್ಧವಾಗಿವೆ.

    ಹಂಚಿಕೊಳ್ಳಲು ಲೇಖನಗಳು