ಜನಪದ ವಿವಿಗೆ ಕ್ಯಾಂಪಸ್ ಇಲ್ಲ, ಪ್ರೊಫೆಸರ್ಗಳು ಜನರ ನಡುವೆ ಹೋಗಲಿ: ಸಿಎಂ ಬೊಮ್ಮಾಯಿ
Mar 22, 2023 10:02 PM IST
ಜನಪದ ವಿವಿಗೆ ಕ್ಯಾಂಪಸ್ ಇಲ್ಲ, ಪ್ರೊಫೆಸರ್ಗಳು ಜನರ ನಡುವೆ ಹೋಗಲಿ: ಸಿಎಂ ಬೊಮ್ಮಾಯಿ
ಜಾನಪದ ವಿವಿಗೆ ಕ್ಯಾಂಪಸ್ ಇಲ್ಲ. ಕ್ಯಾಂಪಸ್ ರಹಿತ ವಿಶ್ವವಿದ್ಯಾಲಯ ಇದು. ಜನ ಸಮುದಾಯ ಇರುವ ಕಡೆಯೇ ಈ ವಿಶ್ವವಿದ್ಯಾಲಯ ಇದೆ. ಪ್ರೊಫೆಸರ್ ಗಳು ಜನರ ನಡುವೆ ಹೋಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ: ಜಾನಪದ ವಿವಿಗೆ ಕ್ಯಾಂಪಸ್ ಇಲ್ಲ. ಕ್ಯಾಂಪಸ್ ರಹಿತ ವಿಶ್ವವಿದ್ಯಾಲಯ ಇದು. ಜನ ಸಮುದಾಯ ಇರುವ ಕಡೆಯೇ ಈ ವಿಶ್ವವಿದ್ಯಾಲಯ ಇದೆ. ಪ್ರೊಫೆಸರ್ ಗಳು ಜನರ ನಡುವೆ ಹೋಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವ ವಿದ್ಯಾಲಯದಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯದ ಶಂಕು ಸ್ಥಾಪನೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಕಲಾಭವನ ಉದ್ಘಾಟನೆ, ಶೈಕ್ಷಣಿಕ ಭವನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ.
ನಮ್ಮ ಹತ್ತಿರ ಏನಿದೆ ಅದು ನಾಗರಿಕತೆ. ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ಅಂತಹ ಸಂಸ್ಕೃತಿಯನ್ನು ಉಳಿಸುವ ಕೆಲಸ ಜಾನಪದ ವಿಶ್ವವಿದ್ಯಾಲಯದಿಂದ ಆಗಲಿ. ಈ ವಿಶ್ವವಿದ್ಯಾಲಯ ಭಾರತಕ್ಕೆ ಪ್ರಸಿದ್ದಿ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಂತರಾಷ್ಟ್ರೀಯ ಮಟ್ಟದ ಎಲ್ಲ ವಿಷಯಗಳ ಸಂಗ್ರಹ ಆಗಬೇಕು ಎನ್ನುವ ಉದ್ದೇಶದಿಂದ ಜಾನಪದ ವಿವಿ ಮಾಡಲಾಗಿದೆ. ಬರುವ ದಿನಗಳಲ್ಲಿ ಯಾವುದೇ ದೇಶದ ಜಾನಪದದ ವಿಷಯ ಇಲ್ಲಿ ಸಿಗಬೇಕು. ಮನುಷ್ಯನ ಬೆಳವಣಿಗೆ ಸಂಪೂರ್ಣವಾಗಿ ವ್ಯಕ್ತ ಆಗಿದ್ದರೆ, ಅದು ಜನಪದದಿಂದ ಮಾತ್ರ. ಆಡು ಭಾಷೆಯಲ್ಲಿರುವ ಹಾಡು, ಸಂಗೀತ ಅವತ್ತಿನ ಕಾಲದ ಬದುಕಿನ ಕಥೆ ಹೇಳುತ್ತವೆ ಎಂದರು.
ರೈತಾಪಿ ವರ್ಗ, ನೇಕಾರರು, ದುಡಿಯುವ ವರ್ಗದ ವಿಷಯಗಳನ್ನು ಸಂಗ್ರಹ ಮಾಡಲಾಗಿದೆ. ನಾಗರಿಕತೆಯ ಬದಲಾವಣೆ, ಜಾನಪದ ಹೇಗೆ ಅದಕ್ಕೆ ಹೊಂದಿಕೊಂಡಿತ್ತು ಎಂಬುದರ ಸಂಗ್ರಹ ಆಗಿದೆ. ಇಡೀ ಉತ್ತರ ಕರ್ನಾಟದ ಕಲಾವಿದರಿಗೆ ಇಲ್ಲಿ ಅವಕಾಶ ಸಿಗಬೇಕು. ಕಲೆ ಜೀವಂತವಾಗಿರಬೇಕು ಅಂತ ಇಷ್ಟು ದೊಡ್ಡ ಕಲಾಮಂದಿರ ನಿರ್ಮಾಣ ಮಾಡಿದ್ದೇವೆ. ಇನ್ನೊಂದು ಹದಿನೈದು ದಿನಗಳಲ್ಲಿ ಕಲಾ ಮಂದಿರಕ್ಕೆ ಪೀಠೋಪಕರಣ ಮತ್ತು ಕೇಂದ್ರದ 1 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಮ್ ನಿರ್ಮಾಣ ಮಾಡಲಾಗುತ್ತದೆ. ಜಾನಪದ ವಿವಿ ಪ್ರವಾಸಿ ತಾಣವಾಗಬೇಕು. ಅದಕ್ಕಾಗಿ ವಿಭಿನ್ನವಾದ ಮ್ಯೂಸಿಯಮ್ ಸಿದ್ದಪಡಿಸಲು ಹೇಳಿದ್ದೇನೆ ಎಂದರು.
ಜಾನಪದ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ನಾವೇ ಹಾಕಿದ್ದೇವು. ಬಹಳ ಸಂತೋಷದಿಂದ ಕಲಾಭವನ ಇಂದು ಉದ್ಘಾಟನೆ ಮಾಡಿದ್ದೇವೆ. ಜನರ ಮಧ್ಯೆ ಇದ್ದು, ತಿಳಿದುಕೊಂಡು ಕಾರ್ಯ ನಿರ್ವಹಿಸುವ ಕುಲಪತಿ ಇಲ್ಲಿದ್ದಾರೆ. ಈ ವಿಶ್ವವಿದ್ಯಾಲಯ ನೌಕರಿ ಸೃಷ್ಟಿ ಮಾಡುವ ವಿಶ್ವವಿದ್ಯಾಲಯ ಅಲ್ಲ. ನಮ್ಮ ಸಂಸ್ಕೃತಿ ಶ್ರೀಮಂತ ಮಾಡುವ ವಿಶ್ವವಿದ್ಯಾಲಯ.
ಜಾನಪದ ವಿಶ್ವವಿದ್ಯಾಲಯದಲ್ಲಿ ಓದಿದ ಮಕ್ಕಳಿಗೆ ವಿಶೇಷ ಕೆಲಸ ಮಾಡಲು ಆರ್ಥಿಕ ನೆರವು ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಎರಡನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಏನು ಬೇಕು ಅದಕ್ಕೆ ಮಂಜೂರಾತಿ ನೀಡುವೆ.
ಜಾನಪದ ವಿವಿ ಕ್ಯಾಂಪಸ್ ಇಲ್ಲ. ಕ್ಯಾಂಪಸ್ ರಹಿತ ವಿಶ್ವವಿದ್ಯಾಲಯ ಇದು. ಜನ ಸಮುದಾಯ ಇರುವ ಕಡೆಯೇ ಈ ವಿಶ್ವವಿದ್ಯಾಲಯ ಇದೆ. ಪ್ರೊಫೆಸರ್ ಗಳು ಜನರ ನಡುವೆ ಹೋಗಲಿ. ಮನೆಯಲ್ಲಿ ಮೊದಲು ಒನಕೆ, ಬೀಸುವಕಲ್ಲು ಇತ್ತು. ಈಗ ಬೀಸುವ ಕಲ್ಲು ಇಲ್ಲ, ಹಾಡು ಇಲ್ಲ ಎಂದರು.