Bengaluru News: ಬೆಂಗಳೂರಿನಲ್ಲಿ ಗಗನಸಖಿ ಅರ್ಚನಾ ಸಾವು, ಕೊಲೆ ಆರೋಪದಡಿ ಪ್ರಿಯಕರ ಆದೇಶ್ ಬಂಧನ
Mar 14, 2023 05:58 AM IST
Bengaluru News: ಬೆಂಗಳೂರಿನಲ್ಲಿ ಗಗನಸಖಿ ಅರ್ಚನಾ ಸಾವು, ಕೊಲೆ ಆರೋಪದಡಿ ಪ್ರಿಯಕರನ ಬಂಧನ
- ಗಗನಸಖಿಯ ಪೋಷಕರು ಬೆಂಗಳೂರಿಗೆ ಆಗಮಿಸಿ ದೂರು ನೀಡಿದ ಬಳಿಕ ಪೊಲೀಸರು ಕೇರಳ ಮೂಲದ ಆದೇಶ್ನನ್ನು ಬಂಧಿಸಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಕೋರಮಂಗಲ ಉಪನಗರದ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಗಗನಸಖಿ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಆಕೆಯ ಪೋಷಕರು ಬೆಂಗಳೂರಿಗೆ ಆಗಮಿಸಿ ದೂರು ನೀಡಿದ ಬಳಿಕ ಪೊಲೀಸರು ಕೇರಳ ಮೂಲದ ಆದೇಶ್ನನ್ನು ಬಂಧಿಸಿದ್ದಾರೆ.
ಹಿಮಾಚಲ ಮೂಲದ ಯುವತಿ ಅರ್ಚನಾ ಧೀಮನ್ (28) ದುಬೈನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ತನ್ನ ಪ್ರಿಯಕರ ಆದೇಶ್ನನ್ನು ಭೇಟಿಯಾಗಲು ಅವರು ಆಗಾಗ ಬೆಂಗಳೂರಿಗೆ ಬರುತ್ತಿದ್ದರು.
ಕಳೆದ ಶುಕ್ರವಾರವೂ ಆದೇಶ್ನನ್ನು ಭೇಟಿಯಾಗಲು ಅರ್ಚನಾ ಆಗಮಿಸಿದ್ದರು. ಕಳೆದ ಭಾನುವಾರ ಅವರು ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಆಕೆಯೇ ಜಾರಿ ಬಿದ್ದಿದ್ದಾರೆಯೇ? ಉದ್ದೇಶಪೂರ್ವಕವಾಗಿ ಆದೇಶ್ ಈಕೆಯನ್ನು ಕೆಳಕ್ಕೆ ತಳ್ಳಿದ್ದಾನೋ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಅರ್ಚನಾ ಅವರನ್ನು ಆಕೆಯ ಪ್ರಿಯಕರನೇ ಹತ್ಯೆ ಮಾಡಿದ್ದಾನೆ. ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಕೊಲೆ ಮಾಡುವ ಉದ್ದೇಶದಿಂದ ಈಕೆಯನ್ನು ತಳ್ಳಲಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಇವರಿಬ್ಬರು ರಿಲೇಷನ್ನಲ್ಲಿದ್ದರು. ಪೊಲೀಸರಿಗೂ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಸಂದಿಗ್ಧತೆ ಇತ್ತು. ಇದು ಕೊಲೆಯಾಗಿರಬಹುದು ಎಂಬ ಅನುಮಾನವೂ ಗಾಢವಾಗಿತ್ತು. ಇದೀಗ ಈತನ ಬಂಧನವಾಗಿರುವುದರಿಂದ ಹೆಚ್ಚಿನ ತನಿಖೆ ನಡೆದು ಸತ್ಯ ತಿಳಿದುಬರಲಿದೆ.
ಈಕೆಯ ತಂದೆ ಹಿಮಾಚಲ ಪ್ರದೇಶದಿಂದ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ.
ದುಬೈನಲ್ಲಿ ಅರ್ಚನಾ ಗಗನಸಖಿಯಾಗಿ ಉದ್ಯೋಗಿಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣಿಸುತ್ತದೆ. ಆದರೆ, ಆದೇಶ್ ಈಕೆಯನ್ನು ಮೇಲಿನಿಂದ ತಳ್ಳಿರುವ ಸಾಧ್ಯತೆಯೂ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಈ ಹಿಂದೆಯೇ ಹೇಳಿದ್ದರು.
ಘಟನೆ ನಡೆದ ಸಮಯದಲ್ಲಿ ಆದೇಶ್ ಅದೇ ಫ್ಲಾಟ್ನಲ್ಲಿದ್ದ. ಆತನೇ ಪೊಲೀಸರಿಗೆ ಕರೆ ಮಾಡಿ ಅರ್ಚನಾ ಮಹಡಿಯಿಂದ ಬಿದ್ದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದ.
ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್ ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
ಆದೇಶ್ಗೂ ಅರ್ಚನಾ ಧಿಮಾನ್ಗೂ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಆದೇಶ್ನನ್ನು ಭೇಟಿಯಾಗಲು ಅರ್ಚನಾ ಬೆಂಗಳೂರಿಗೆ ಆಗಮಿಸುತ್ತಿದ್ದರು. ಆದರೆ, ಈ ಬಾರಿಯ ಭೇಟಿ ಗಗನಸಖಿಯ ಸಾವಿನಲ್ಲಿ ಅಂತ್ಯವಾಗಿತ್ತು.
ಕರ್ನಾಟಕ ರಾಜ್ಯ ಮುಕ್ತ ವಿವಿ; ಪ್ರವೇಶಾತಿ ಆರಂಭ
ಮಡಿಕೇರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ವಿವಿಧ ವಿಷಯಗಳಿಗೆ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ಇದರ ಸದುಪಯೋಗವನ್ನು ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕೋರಿದೆ.
ಪ್ರಾದೇಶಿಕ ಕೇಂದ್ರ ಕಚೇರಿಯು ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಸಹ ಕಾರ್ಯನಿರ್ವಹಿಸುತ್ತದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಆಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಮಕ್ಕಳಿಗೆ ಶೇ.30, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶೇ.15, ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.15 ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಮೃತರಾದ ಪೋಷಕರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿಎಡ್-ಎಂಬಿಎ ಹೊರತುಪಡಿಸಿ) ಪೂರ್ಣಶುಲ್ಕ ವಿನಾಯಿತಿ ನೀಡಲಾಗಿದೆ.
ಸ್ನಾತಕ ಕೋರ್ಸ್ಗಳುು ಬಿ.ಎ., ಬಿ.ಕಾಂ, ಬಿ.ಲಿಬ್, ಬಿಬಿಎ, ಬಿಸಿಎ, ಬಿಎಸ್ಸಿ. ಸ್ನಾತಕೋತ್ತರ ಕೋರ್ಸ್ಗಳು ಎಂಎ, ಎಂಕಾಂ, ಎಂಬಿಎ, ಎಂಲಿಬ್, ಎಂಎಸ್ಸಿ ಹಾಗೂ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು.
ಪೂರ್ಣಾವಧಿಯಲ್ಲಿ (ಭೌತಿಕಶಿಕ್ಷಣ) ರೆಗ್ಯುಲರ್) ಒಂದು ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ (ಓಪನ್ ಯುನಿವರ್ಸಿಟಿ) ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ 08272-201147, 9141938803, 8296215714 ನ್ನು ಸಂಪರ್ಕಿಸಬಹುದು