Mangalore Rain: ಕರಾವಳಿಯಲ್ಲಿ ಚಂಡಮಾರುತ ಸಾಧ್ಯತೆ:ಸಿಡಿಲು ಬಡಿದು ಮಗುವಿಗೆ ಗಾಯ, ಯಲ್ಲೊ ಅಲರ್ಟ್
Oct 17, 2023 09:24 AM IST
ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಚಂಡ ಮಾರುತದ ಅಲರ್ಟ್ ನೀಡಲಾಗಿದೆ.
- Coastal weather updates ಕರ್ನಾಟಕದ ಕರಾವಳಿ ಭಾಗದಲ್ಲಿ ಚಂಡ ಮಾರುತದ ಅಲರ್ಟ್ ನೀಡಲಾಗಿದೆ. ಈಗಾಗಲೇ ಮಳೆಯ ವಾತಾವರಣವಿದ್ದು, ಮಿಂಚಿಗೆ ಐದು ವರ್ಷದ ಮಗು ಗಾಯಗೊಂಡಿದೆ.
ಮಂಗಳೂರು: ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ, ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ರಾತ್ರಿ ಸಿಡಿಲು ಬಡಿದು ಮಂಗಳೂರು ಹೊರವಲಯದಲ್ಲಿ ಮಗುವಿನ ಕಿವಿಗೆ ಗಾಯಗಳಾಗಿವೆ. ಸಿಡಿಲು ಬಡಿದು ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ದುರಂತ ಸಂಭವಿಸಿದೆ. ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ನಡೆದ ಘಟನೆ ಇದು. ಸಿಡಿಲಿನ ಆರ್ಭಟಕ್ಕೆ ಮನೆಯ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಶಾರ್ಟ್ ಸರ್ಕ್ಯುಟ್ ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಹುಡಿಯಾಗಿವೆ. ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಗಾಯಗಳಾಗಿದೆ.
ಕರಾವಳಿಗೆ ಯಲ್ಲೋ ಅಲರ್ಟ್ ನೀಡಲಾಗಿದ್ದು, ಗುಡುಗು ಸಹಿತ ಮಂಗಳವಾರ ಮಳೆಯಾಗುವ ಸಾಧ್ಯತೆ ಇದ್ದು, ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ, ಮಂಗಳೂರು ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು ಬಳಕೆದಾರರು, ಸ್ಟೇಕ್ ಹೋಲ್ಡರ್ ಗಳು ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ನವಮಂಗಳೂರು ಬಂದರಿನಲ್ಲಿ ಎಲ್ಲ ರೀತಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.
ಕರಾವಳಿಯಲ್ಲಿ ಸಿಡಿಲು ಸಹಿತ ಮಳೆ
ಈಗಾಗಲೇ ಸಿಡಿಲು ಸಹಿತ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ಬಂಟ್ವಾಳ ಪರಿಸರದಲ್ಲಿ ಸೋಮವಾರ ಗುಡುಗು ಸಿಡಿಲಿನ ಮಳೆಯಾದ ವರದಿಯಾಗಿದೆ.
ಸುಳ್ಯ ನಗರ, ಜಾಲ್ಸೂರು, ಪುತ್ತೂರು, ಅರಂತೋಡು, ಮಂಡೆಕೋಲು, ಎಡಮಂಗಲ ಭಾಗಗಳಲ್ಲಿ ಮಳೆಯಾಗಿದ್ದರೆ, ಕಾಸರಗೋಡಿನ ಬದಿಯಡ್ಕದಲ್ಲಿ ಸಿಡಿಲು ಬಡಿದು ಕಾಡಮನೆ ಮುಚ್ಚಿಲಕವೆಯಲ್ಲಿ ಶ್ರೀ ಕೊರಗಜ್ಜ ದೈವದ ಗುಡಿಗೆ ಹಾಗೂ ಸಮೀಪದ ಬಾಬು ಅವರ ಮನೆಗೆ ಹಾನಿ ಉಂಟಾಗಿದೆ.