logo
ಕನ್ನಡ ಸುದ್ದಿ  /  ಕರ್ನಾಟಕ  /  ನಂದಿಕೂರು-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ಮಾರ್ಗವಿಲ್ಲವೇ?

ನಂದಿಕೂರು-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ಮಾರ್ಗವಿಲ್ಲವೇ?

HT Kannada Desk HT Kannada

Oct 19, 2023 04:57 PM IST

ನಂದಿಕೂರು-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ಮಾರ್ಗವಿಲ್ಲವೇ (ಸಾಂದರ್ಭಿಕ ಚಿತ್ರ, HT PHOTO )

    • ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿ, ಕಾಸರಗೋಡು ಜಿಲ್ಲೆಗೆ ಸಾಗುವ ನಂದಿಕೂರು ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಪ್ರಬಲ ಪ್ರತಿರೋಧವಿದೆ.
ನಂದಿಕೂರು-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ಮಾರ್ಗವಿಲ್ಲವೇ (ಸಾಂದರ್ಭಿಕ ಚಿತ್ರ, HT PHOTO )
ನಂದಿಕೂರು-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ಮಾರ್ಗವಿಲ್ಲವೇ (ಸಾಂದರ್ಭಿಕ ಚಿತ್ರ, HT PHOTO )

ಮಂಗಳೂರು: ಉಡುಪಿ ಜಿಲ್ಲೆಯ ನಂದಿಕೂರಿನಿಂದ ಕೇರಳಕ್ಕೆ ಸೆಂಟ್ರಲ್ ಗ್ರಿಡ್ ಮೂಲಕ ಸಾಗಲು ಉದ್ದೇಶಿಸಲಾಗಿರುವ 400 ಕೆ.ವಿ.ಎಚ್‌ಟಿ ವಿದ್ಯುತ್ ಲೈನ್ ರಚನೆಗೆ ಮತ್ತೊಮ್ಮೆ ರೈತರ ಬಲವಾದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದಶಕದ ಹಿಂದಿನ ಯೋಜನೆಗೆ ಪರ್ಯಾಯ ಮಾರ್ಗ ಹುಡುಕಬೇಕಾದ ಅನಿವಾರ್ಯತೆ ಚರ್ಚೆಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ನಂದಿಕೂರಿನಿಂದ ಕಾಸರಗೋಡು ಮೂಲಕ ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡುವ ಸೆಂಟ್ರಲ್ ಗ್ರಿಡ್‌ನ ಯೋಜನೆ ಇದಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ, ಮಂಗಳೂರು ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ 400 ಕೆ.ವಿ. ಎಚ್‌ಟಿ ಲೈನ್ ಅಳವಡಿಸಿ ಆ ಮೂಲಕ ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದೆ.

ದಶಕದ ಹಿಂದೆ ಯೋಜನೆಗೆ ರೂಪು ನೀಡಲಾಗಿದ್ದರೂ, ಕಾಲಾನುಕ್ರಮದಲ್ಲಿ ಉಂಟಾದ ಪ್ರತಿರೋಧದ ಪರಿಣಾಮ ಅನುಷ್ಠಾನಗೊಂಡಿಲ್ಲ. ಕೆಲ ವರ್ಷಗಳ ಹಿಂದೆ ಯೋಜನಾ ಮಾರ್ಗದ ಸಮೀಕ್ಷೆ ಕಾರ್ಯ ಕೈಗೊಳ್ಳಲು ಗುತ್ತಿಗೆ ನೀಡಲಾಗಿದ್ದರೂ, ಗುತ್ತಿಗೆದಾರರಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ.

ಕೇರಳ ಭಾಗದಲ್ಲಿ ಸಮೀಕ್ಷೆ ಕಾರ್ಯ ನಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿಲ್ಲ. ದೀರ್ಘ ಸಮಯದ ಮೌನದ ಬಳಿಕ ಅಕ್ಟೋಬರ್ 10ರಂದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕೊಲ್ಲಪದವು ಎಂಬಲ್ಲಿ ಗುತ್ತಿಗೆದಾರರು ಸಮೀಕ್ಷೆ ಕಾರ್ಯಕ್ಕೆ ಬಂದಾಗ ರೈತ ಸಂಘ ಸೇರಿದಂತೆ ಸಾರ್ವಜನಿಕರು ಪ್ರತಿರೋಧ ಒಡ್ಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದಲೇ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಸಮೀಕ್ಷೆ ಕಾರ್ಯ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಒಬ್ಬ ರೈತರು ತಮ್ಮ ಜಮೀನಿನಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿದ್ದೇ ಗುತ್ತಿಗೆದಾರರು ಬರಲು ಕಾರಣ ಎಂದು ರೈತರು ಹೇಳುತ್ತಿದ್ದಾರೆ.

ಜಿಲ್ಲಾಧಿಕಾರಿ ಸಭೆ ನಡೆಸಿದ್ದರು..

ಹಿಂದಿನ ಸರಕಾರದ ಅವಧಿಯಲ್ಲಿ 400 ಕೆ.ವಿ. ಲೈನ್ ಸಮೀಕ್ಷೆ ಕಾರ್ಯಕ್ಕೆ ಮುಂದಾದಾಗ ಅಂದಿನ ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಧ್ಯಪ್ರವೇಶ ಮಾಡಿ ತಡೆ ಹಿಡಿದಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರ ಕೆ.ವಿ. ಸಮಾಲೋಚನಾ ಸಭೆ ನಡೆಸಿದ್ದರು. ಯೋಜನೆಯ ರೂಪುರೇಶೆ, ಲೈನ್ ಹೊಗುವ ಮಾರ್ಗದಲ್ಲಿ ಕೃಷಿ ಪ್ರದೇಶಕ್ಕೆ ಆಗುವ ತೊಂದರೆ, ರೈತರಿಗೆ ನೀಡಬೇಕಾದ ಪರಿಹಾರ ಇತ್ಯಾದಿಗಳ ಬಗ್ಗೆ ಯಾವುದೇ ಸಮೀಕ್ಷೆ ಮಾಡದೆ ಏಕಾಏಕಿ ಕಾಮಗಾರಿಯ ಬಗ್ಗೆ ಹೆಜ್ಜೆ ಇಡುವುದಕ್ಕೆ ವಿರೋಧ ಬಂದ ಕಾರಣ ಜಿಲ್ಲಾಧಿಕಾರಿ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿರಲಿಲ್ಲ.

ಬೇರೆ ದಾರಿಗಳಿಲ್ಲವೇ?

ದ.ಕ., ಉಡುಪಿ ಭಾಗದಲ್ಲಿ ಇದೇ ಮೊದಲ ಬಾರಿಗೆ 400 ಕೆ.ವಿ.ಯ ಎಚ್‌ಟಿ ಲೈನ್ ಎಳೆಯುವ ಉದ್ದೇಶಿತ ಕಾಮಗಾರಿ ಇದಾಗಿದೆ. ಈ ಲೈನ್ ವಿಚಾರದಲ್ಲಿ ವಿಶೇಷವಾಗಿ ರೈತ ಸಮುದಾಯದಲ್ಲಿ ಆತಂಕವಿದೆ. ಕೃಷಿ ತೋಟದ ಮೇಲ್ಭಾಗದಲ್ಲಿ ಹಾದು ಹೋಗುವ ತಂತಿಗಳಿಂದಾಗಿ ತೋಟಕ್ಕೆ ತೊಂದರೆಯಾಗಬಹುದು ಎಂಬ ಭಯವಿದೆ. ಹೀಗಾಗಿ ಈ ಲೈನ್ ಹಾದು ಹೋಗುವ ಮಾರ್ಗ ಬದಲಾಯಿಸಬೇಕು ಎಂಬ ಆಗ್ರಹವಿದೆ. ಸಮುದ್ರದ ದಂಡೆಯಲ್ಲಿ ಕೊಂಡೊಯ್ಯಬಹುದೇ? ಹೆದ್ದಾರಿಯ ಪಕ್ಕದ ಮಾರ್ಜಿನ್ ಪ್ರದೇಶದಲ್ಲಿ ಕೊಂಡೊಯ್ಯಬಹುದೇ? ಕೃಷಿ ಪ್ರದೇಶವನ್ನು ಬಿಟ್ಟು ಬೆಟ್ಟ ಗುಡ್ಡ ಹಾದಿಯಲ್ಲಿ ಕೊಂಡೊಯ್ಯಬಹುದೇ ಎಂಬಿತ್ಯಾದಿ ಸಲಹೆಗಳು ರೈತ ವರ್ಗದಿಂದ ಕೇಳಿ ಬರುತ್ತಿವೆ.

ಇದು ಅಪಾಯಕಾರಿ ಲೈನ್

400 ಕೆ.ವಿ. ಲೈನ್ ಅಡಿಯಲ್ಲಿನ ಬದುಕು ಅತ್ಯಂತ ಅಪಾಯಕಾರಿ ಎಂಬ ಭಾವನೆ ಜನರಲ್ಲಿದೆ. ಇದರ ವೈಜ್ಞಾನಿಕ ಅಧ್ಯಯನವೂ ಆಗಿಲ್ಲ. ರೈತರಿಗೆ ಸಿಗಬಹುದಾದ ಪರಿಹಾರದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಹೀಗಾಗಿ ಕೃಷಿ ಜಮೀನಿನ ಮೇಲೆ ಲೈನ್ ಒಯ್ಯುವುದಕ್ಕೆ ನಮ್ಮ ವಿರೋಧವಿದೆ. ಹೆದ್ದಾರಿ ಪಕ್ಕದ ಮಣ್ಣಿನ ಅಡಿಯಲ್ಲಿ ಭೂಗತ ಕೇಬಲ್ ಅಳವಡಿಸಿ ಕೊಂಡೊಯ್ಯಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಲಿ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು. ನಂದಿಕೂರು ಕಾಸರಗೋಡು 400 ಕೆ. ವಿ. ವಿದ್ಯುತ್ ಪ್ರಸರಣ ಮಾರ್ಗಕ್ಕೆ ಬೆಂಬಲಿಸಿದರೆ ಶಾಸಕರು ಸಹಿತ ಜನಪ್ರತಿನಿಧಿಗಳಿಗೆ ಕಪ್ಪುಬಾವುಟ ತೋರಿ ಪ್ರತಿಭಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಂದಿಕೂರು ವಿದ್ಯುತ್ ಸ್ಥಾವರದಿಂದ ಸ್ಟೆರಿಲೈಟ್ ಕಂಪೆನಿಯು ಗುತ್ತಿಗೆ ಪಡೆದುಕೊಂಡು ಈ ಹೈಟೆನ್ಷನ್ ಲೈನ್ ಎಳೆಯುತ್ತಿದೆ. ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದೆ. ಆದರೆ ಈವರೆಗೆ ರೈತರನ್ನು ವಿಶ್ವಾಸಕ್ಕೆ ತರುವ ಕೆಲಸ ಆಗಿಲ್ಲ. ಈ ಭಾಗದ ರೈತರು ಅಡಿಕೆ, ಕರಿಮೆಣಸು ಬೆಳೆಯನ್ನು ನಂಬಿ ಬದುಕುವವರು. ಆದರೆ ಹೈಟೆನ್ಷನ್ ತಂತಿ ಇವರ ಜಮೀನು ಮೇಲೆ ಹಾದು ಹೋದರೆ ರೈತರ ಹಾಗೂ ಜಾನುವಾರುಗಳ ಜೀವಕಂಟಕವಾಗಲಿದೆ. ಆದ್ದರಿಂದ ಸರ್ಕಾರ ಹಾಗೂ ಗುತ್ತಿಗೆ ಕಂಪೆನಿಯು ರೈತರಿಗೆ ಬಾಧಕವಾಗದ ರೀತಿ ಪರ್ಯಾಯ ಮಾರ್ಗ ಅನುಸರಿಸಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ಒಂದು, ಎರಡು ಎಕರೆ ಇರುವ ಸಣ್ಣ ಹಿಡುವಳಿದಾರು ಇದ್ದಾರೆ. ಅದರಲ್ಲಿ 30 ಸೆಂಟ್ಸ್ ವಿದ್ಯುತ್ ಲೈನ್ ಹೋದಲ್ಲಿ ರೈತರಿಗೆ ಉಳಿಯುವುದೇನು. ಅಲ್ಲದೆ ಮಳೆಗಾಲದಲ್ಲಿ ಈ ವಿದ್ಯುತ್ ಲೈನ್ ನಡಿಯಲ್ಲಿ ಹೋಗಲು ಸಾಧ್ಯವಿಲ್ಲ. ಯಾವುದೇ ಮಾಹಿತಿ ಇಲ್ಲದೆ ಪ್ರಾಜೆಕ್ಟ್ ಮಾಡಲಾಗುತ್ತಿದೆ. ಯಾವುದೇ ಮಾಹಿತಿ ಇಲ್ಲದೆ ಈ ಪ್ರಾಜೆಕ್ಟ್ ತರಲಾಗುತ್ತಿದೆ. ಡಿಸಿಯವರ ಗಮನಕ್ಕೂ ತಂದಿದ್ದೇವೆ. ಆದರೆ ಈ ನಡುವೆ ಎರಡು - ಮೂರು ಡಿಸಿಗಳು ಬದಲಾದರೇ ವಿನಃ ನಮಗೆ ಯಾವ ಪ್ರಯೋಜನವೂ ಆಗಿಲ್ಲ. ಈ ವಿದ್ಯುತ್ ಲೈನ್ ಉಡುಪಿಯಿಂದ ಬಂಟ್ವಾಳದವರೆಗೆ 17 ಗ್ರಾಮವನ್ನು ಹಾದು ಹೋಗುತ್ತದೆ‌. 500 ರೈತ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ವೀರಕಂಭದಲ್ಲಿ ಸಿರಿಚಂದನವನ ೬೦೦ ಹೆಕ್ಟೇರ್ ಪ್ರದೇಶ ರಿಸರ್ವ್ಡ್ ಫಾರೆಸ್ಟ್ ಮಾಡಿ ಫೆನ್ಷಿಂಗ್ ಮಾಡಲಾಗಿದೆ. ಅಲ್ಲಿಯ ಮರವೂ ಇದೇ ಪ್ರಾಜೆಕ್ಟ್ ನಲ್ಲಿ ಹೋಗುತ್ತದೆ. ಕೇರಳಕ್ಕೆ ಪ್ರಯೋಜನ ಆಗುವ ಪ್ರಾಜೆಕ್ಟ್ ನಿಂದ ರೈತರಿಗೆ ಅನ್ಯಾಯವಾಗುವ ಹಾಗೆ ಮಾಡುವ ಬದಲು ಸಮುದ್ರದ ಮೂಲಕ ಕೇಬಲ್ ಹಾಯಿಸಬಹುದು ಎನ್ನುತ್ತಾರೆ 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ಸದಸ್ಯ ಶ್ಯಾಮ್ ಪ್ರಸಾದ್.

(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ