Mysore News: ಮೈಸೂರಿನ ಜೀವನಾಡಿ ಕುಕ್ಕರಹಳ್ಳಿ ಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್
May 27, 2023 10:51 AM IST
ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್ ಅವರ ತಂಡ ಕುಕ್ಕರಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿತ್ತು.
- ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್ ಟ್ರ್ಯಾಕ್ ಅಭಿವೃದ್ಧಿಗೆ, ಕಸ, ಬಲೆ ಹಾಗೂ ತ್ಯಾಜ್ಯ ವಿಲೇವಾರಿ, ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತುವುದು ಹಾಗೂ ಕೆರೆ ಸ್ವಚ್ಛಗೊಳಿಸಲು, ಬೋಟ್ ದುರಸ್ತಿ ಮಾಡಿಸಿ ಅದರ ಚಾಲನೆಗೆ ಹೆಚ್ಚು ಒತ್ತು ಕೊಡಬೇಕು ಎನ್ನುವುದು ಸ್ಥಳೀಯರ ಸಲಹೆ.
ಮೈಸೂರು: ಕುಕ್ಕರಹಳ್ಳಿಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಹಾಗೂ ಸೂಕ್ಷ್ಮ ಯೋಜನೆ ತಯಾರಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಕೆರೆ ಅಭಿವೃದ್ದಿಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ನಗರ ಪಾಲಿಕೆ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಕೆರೆ ಸಂರಕ್ಷಣಾ ಪ್ರಾಧಿಕಾರದ ನೆರವು ಪಡೆದು ಕೆರೆ ಅಭಿವೃದ್ದಿ ಪಡಿಸಿದ್ದರೂ ಸಮಗ್ರ ಅಭಿವೃದ್ದಿಯ ಯೋಜನೆ ರೂಪಿಸಿರಲಿಲ್ಲ. ಈಗ ಜಿಲ್ಲಾಡಳಿತ ಅಂತಹ ಪ್ರಯತ್ನಕ್ಕೆ ಮೊದಲ ಬಾರಿಗೆ ಮುಂದಾಗಿದೆ. ನಿತ್ಯ ಕುಕ್ಕರಹಳ್ಳಿ ಕೆರೆಗೆ ಬರುವ ವಾಯು ವಿಹಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆದು ಮಾಸ್ಟರ್ ಪ್ಲಾನ್ ರೂಪಿಸುವುದು ಜಿಲ್ಲಾಡಳಿತದ ಯೋಚನೆ.
ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಶನಿವಾರ ಭೇಟಿ ನೀಡಿ, ಕೆರೆ ಅಭಿವೃದ್ಧಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಜನರಿಂದ ವ್ಯಕ್ತವಾದ ಅಭಿಪ್ರಾಯದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ,ಮೈಕ್ರೋ ಪ್ಲಾಂಟ್ಸ್ ನಿರ್ವಹಣೆ ಮತ್ತು ಇಂಪ್ರೂವ್ಮೆಂಟ್ ಗೆ ವಿಶ್ವವಿದ್ಯಾನಿಲಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಳ್ಳಲು ಕ್ರಮವಹಿಸಲಾಗುವುದು. ಕೆರೆಯ ಅಭಿವೃದ್ಧಿ ಮತ್ತು ಸರಿಯಾದ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದ್ದು ಸಾರ್ವಜನಿಕರು ಕೆರೆಯನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್ ಟ್ರ್ಯಾಕ್ ಅಭಿವೃದ್ಧಿಗೆ, ಕಸ, ಬಲೆ ಹಾಗೂ ತ್ಯಾಜ್ಯ ವಿಲೇವಾರಿ, ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತುವುದು ಹಾಗೂ ಕೆರೆ ಸ್ವಚ್ಛಗೊಳಿಸಲು, ಬೋಟ್ ದುರಸ್ತಿ ಮಾಡಿಸಿ ಅದರ ಚಾಲನೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.
ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ವಾಯು ವಿಹಾರ ಮಾರ್ಗದ ಸೇತುವೆ ಕಬ್ಬಿಣಕ್ಕೆ ಫೇಯಿಂಟ್ ಮಾಡಿಸಬೇಕು. ವಾಯುವಿಹಾರಿಗಳ ಅನುಕೂಲಕ್ಕಾಗಿ ಬೇಕಾಗುವ ಸೌಕರ್ಯಗಳ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಈ ಕೆರೆಯು ಹಲವಾರು ಜೀವ ವೈವಿಧ್ಯತೆಗಳಿಂದ ಕೂಡಿದ್ದು, ಇಲ್ಲಿನ ಪರಿಸರ ವ್ಯವಸ್ಥೆ ಬಹಳ ಸ್ವಾಭಾವಿಕವಾಗಿ ರೂಪುಗೊಂಡಿದೆ. ಇವುಗಳಿಗೆ ಅಡಚಣೆಯಾಗದಂತೆ ಹಾಗೂ ಸಾರ್ವಜನಿಕರಿಗೂ ಉಪಯುಕ್ತವಾಗುವಂತೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದು ಪರಿಸರವಾದಿ ಪ್ರೊ.ಯು.ಎನ್. ರವಿಕುಮಾರ್ ಸಲಹೆ ನೀಡಿದರು.
ಕುಕ್ಕರಳ್ಳಿ ಕೆರೆಯು ಬಹಳ ವಿಶಾಲವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಜಾಗಿಂಗ್ ವಾತಾವರಣವನ್ನು ನೀಡಿದೆ. ಆದರೆ ಕೆರೆಯ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಿದೆ. ನಿಗದಿತ ಸಮಯದ ನಂತರ ಅಂದರೆ ಬೆಳಗ್ಗೆ 9 ಗಂಟೆಯ ನಂತರ ಸಂಜೆ ಐದು ಗಂಟೆಯವರೆಗೆ ನಿಗದಿತ ಶುಲ್ಕದೊಂದಿಗೆ ಕೆರೆ ಬೇಟಿಗೆ ಅವಕಾಶ ನೀಡಬೇಕು ಇದರಿಂದ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮಕ್ಕಾಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಮತ್ತು ಕೆರೆ ವೀಕ್ಷಣೆ ಮಾಡಲು ಬರುವವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹಲವರು ಅನಿಸಿಕೆ ಹಂಚಿಕೊಂಡರು.
ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಲೋಕನಾಥ್ ಎನ್ ಕೆ, ಕುಲಸಚಿವರಾದ ಶೈಲಜಾ ಹಾಗೂ ಇತರರು ಹಾಜರಿದ್ದರು.
ವಿಭಾಗ