Congress Guarantee: ಗ್ಯಾರಂಟಿ ಜಾರಿಗೆ ಬರದಿದ್ದರೆ ಪ್ರತಿಭಟನೆ ಗ್ಯಾರಂಟಿ; ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
May 25, 2023 10:42 PM IST
ಸಂಸದ ಪ್ರತಾಪ್ ಸಿಂಹ
- MP Pratap Simha: ಮಾತಿಗೆ ತಪ್ಪಿದರೆ ಜನರು ತಿರುಗಿ ಬೀಳಲಿದ್ದಾರೆ. ಗ್ಯಾರೆಂಟಿಗಳು ಜಾರಿಗೆ ಬರದಿದ್ದರೆ ನಾವು ಖಂಡಿತವಾಗಿಯೂ ಉಗ್ರ ಹೋರಾಟ ಮಾಡಲಿದ್ದೇವೆ ಎಂಬುದನ್ನು ಆಡಳಿತ ಪಕ್ಷ ಮರೆಯಬಾರದು ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಮೈಸೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಚುನಾವಣಾ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು (Congress Guarantee) ಜೂನ್ 1 ರಿಂದ ಜಾರಿಗೆ ತರದಿದ್ದರೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಎಚ್ಚರಿಕೆ ನೀಡಿದ್ದಾರೆ.
ಇಂದು ( ಮೇ 25) ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಸಂಪುಟ ಸಭೆ ನಡೆದು ಒಂದು ವಾರ ಕಳೆದಿದೆ. ಆದರೆ ಸರ್ಕಾರ ಮಾತ್ರ ಯಾವ ಗ್ಯಾರಂಟಿಗಳ ಬಗ್ಗೆಯೂ ಇನ್ನೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಬೇಕು. ಗ್ಯಾರಂಟಿಗಳನ್ನು ಜಾರಿಗೆ ತಂದು ಜನರ ನಂಬಿಕೆ ಉಳಿಸಿಕೊಳ್ಳಬೇಕು. ಮಾತಿಗೆ ತಪ್ಪಿದರೆ ಜನರು ತಿರುಗಿ ಬೀಳಲಿದ್ದಾರೆ. ಗ್ಯಾರೆಂಟಿಗಳು ಜಾರಿಗೆ ಬರದಿದ್ದರೆ ನಾವು ಖಂಡಿತವಾಗಿಯೂ ಉಗ್ರ ಹೋರಾಟ ಮಾಡಲಿದ್ದೇವೆ ಎಂಬುದನ್ನು ಆಡಳಿತ ಪಕ್ಷ ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ 5-ಗ್ಯಾರಂಟಿಗಳ ಭಿತ್ತಿಪತ್ರವನ್ನು ತಮ್ಮ ಫೋನಿನಲ್ಲಿ ಪ್ರದರ್ಶಿಸಿದ ಅವರು, ಅವುಗಳ ಜಾರಿಗೆ ಷರತ್ತುಗಳು ಅನ್ವಯವಾಗುವ ಬಗ್ಗೆ ಇಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ರಾಜ್ಯದ ಎಲ್ಲ ಕುಟುಂಬಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಹಾಗಾಗಿ ಜೂನ್ ನಿಂದ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯ ಇಲ್ಲ. 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸಿದವರು ಮಾತ್ರ ಕೇವಲ ಹೆಚ್ಚುವರಿ ಯೂನಿಟ್ ಗಳಿಗೆ ಲೆಕ್ಕ ಹಾಕಿ ಹಣ ಪಾವತಿಸಬೇಕು. ಈ ಬಗ್ಗೆ ಇಲ್ಲಿ ಯಾವ ಷರತ್ತೂ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಚುನಾವಣೆಗಾಗಿ ಕಾಂಗ್ರೆಸ್ ಭರವಸೆ ನೀಡಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ - ಈ ನಾಲ್ಕು ಗ್ಯಾರಂಟಿಗಳಿಗೆ ವಾರ್ಷಿಕ ಅಂದಾಜು 64,000 ಕೋಟಿ ವೆಚ್ಚವಾಗಲಿದೆ.
ಮತ್ತೊಂದೆಡೆ ಈ ಹಿಂದೆ ಸಿದ್ದರಾಮಯ್ಯ ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರು ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆ ಇರುವುದರಿಂದ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಮಾಡುತ್ತಿದ್ದೇವೆ. ಅಶ್ವತ್ಥ್ ನಾರಾಯಣ ವಿರುದ್ಧ ನೀಡಿದ್ದ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆಗ್ರಹಿಸಿದ್ದೇವೆ ಎಂದರು.
‘ಉರಿಗೌಡ, ನಂಜೇಗೌಡ ಟಿಪ್ಪು ಸುಲ್ತಾನ್ ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು’ ಎಂದು ಅಶ್ವತ್ಥ್ ನಾರಾಯಣ ಮಂಡ್ಯ ತಾಲೂಕಿನ ಸಾತನೂರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯಗೆ ಏನೇ ಆದರೂ ಅದಕ್ಕೆ ಬಿಜೆಪಿ, ಅಶ್ವತ್ಥ್ ನಾರಾಯಣ್ ಹೊಣೆ. ಈ ಹಿಂದೆ ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸಿದ್ದರು. ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಕೂಡಲೇ ಡಾ.ಅಶ್ವತ್ಥ್ ನಾರಾಯಣರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು. ದೂರಿನ ಮೇರೆಗೆ ಇಂದು ಅಶ್ವತ್ಥ್ ನಾರಾಯಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿದೆ.