Selfie kills four girls: ಸೆಲ್ಫಿ ತೆಗೆದುಕೊಳ್ಳುವಾಗ ಬೆಳಗಾವಿಯ ಕಿತವಾಡ ಜಲಪಾತಕ್ಕೆ ಬಿದ್ದು ನಾಲ್ವರು ಯುವತಿಯರ ಸಾವು
Nov 26, 2022 05:45 PM IST
ಸೆಲ್ಫಿ ತೆಗೆದುಕೊಳ್ಳುವಾಗ ಬೆಳಗಾವಿಯ ಕಿತವಾಡ ಜಲಪಾತಕ್ಕೆ ಬಿದ್ದು ನಾಲ್ವರು ಯುವತಿಯರ ಸಾವು
- ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನೊಬ್ಬಳು ಯುವತಿಯ ಸ್ಥಿತಿ ಗಂಭೀರವಾಗಿದೆ. ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಈ ದುರಂತ ಸಂಭವಿಸಿದೆ.
ಬೆಳಗಾವಿ: ಒಂದೆಡೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ನಡೆಯುತ್ತಿದ್ದರೆ, ಇನ್ನೊಂದೆಡೆ ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಕಿತವಾಡ ಫಾಲ್ಸ್ನಲ್ಲಿ ದುರಂತವೊಂದು ನಡೆದಿದೆ. ಕಿತವಾಡ ಫಾಲ್ಸ್ ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನೊಬ್ಬಳು ಯುವತಿಯ ಸ್ಥಿತಿ ಗಂಭೀರವಾಗಿದೆ. ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಈ ದುರಂತ ಸಂಭವಿಸಿದೆ.
ಬಾಶಿಬಾನ್ ಮದರಸ ಶಾಲೆಯಲ್ಲಿ ಓದುತ್ತಿದ್ದ 40 ಯುವತಿಯರ ತಂಡ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿತ್ತು. ಬೆಳಗಾವಿ ನಗರದಿಂದ 26 ಕಿಮೀ ದೂರದಲ್ಲಿರುವ ಮಹಾರಾಷ್ಟ್ರ-ಕರ್ನಾಟಕದ ಗಡಿಯಲ್ಲಿರುವ ಕಿತ್ವಾಡ್ ಅಣೆಕಟ್ಟು ಮತ್ತು ಜಲಪಾತ ವೀಕ್ಷಣೆಗೆ ಈ ತಂಡ ತೆರಳಿತ್ತು. ಜಲಪಾತದ ಸೆಲ್ಫಿ ತೆಗೆದುಕೊಳ್ಳಲು ಯುವತಿಯ ತಂಡ ಮುಂದಾಗಿತ್ತು. ಈ ವೇಳೆ ಐವರು ಯುವತಿಯರು ಕಾಲು ಜಾರಿ ಫಾಲ್ಸ್ಗೆ ಬಿದ್ದಿದ್ದಾರೆ.
ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಶನಿವಾರ ಮಧ್ಯಾಹ್ನ ಆಸ್ಪತ್ರೆ ಬಳಿ ವಿದ್ಯಾರ್ಥಿಗಳ ಸಂಬಂಧಿಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಉಜ್ವಲ್ ನಗರ ನಿವಾಸಿ 17 ವರ್ಷದ ಆಸೀಯಾ ಮುಜಾವರ್, ಅನಗೋಳದ 20 ವರ್ಷದ ಕುದ್ಶೀಯಾ ಹಾಸಂ ಪಟೇಲ್, ಝಟ್ಪಟ್ ಕಾಲೋನಿಯ 20 ವರ್ಷದ ರುಕ್ಕಶಾರ್ ಭಿಸ್ತಿ ಹಾಗೂ 20 ವರ್ಷದ ತಸ್ಮಿಯಾ ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಕೆಯ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆಯು ಕಳೆದ ತಿಂಗಳು ಕೂಡ ನಡೆದಿತ್ತು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಒಂದೇ ಕುಟುಂಬದ ನಾಲ್ವರು ಹುಡುಗಿಯರು ವೈತರ್ಣಾ ನದಿಯಲ್ಲಿ ಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಈ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಸೆಲ್ಫಿ ತೆಗೆದುಕೊಳ್ಳುವಾಗ, ರೀಲ್ಸ್ ಮಾಡುವಾಗ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ
ಸೆಲ್ಫಿ, ರೀಲ್ಸ್ ಕ್ರೇಜ್ನಿಂದ ಪ್ರಾಣ ಕಳೆದುಕೊಳ್ಳುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತದೆ. ಫೋನ್ ಮುಂದೆ ಪೋಸ್ ನೀಡಿ ಫೋಟೊ ತೆಗೆದು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಬಯಸುತ್ತಾರೆ. ಆದರೆ, ಅಪಾಯಕಾರಿ ಪ್ರದೇಶಗಳಲ್ಲಿ ಅಥವಾ ನೀರು, ಬೆಂಕಿ, ವಾಹನ, ರೈಲುಗಳ ಮುಂದೆ ಸೆಲ್ಫಿ ತೆಗೆದುಕೊಂಡರೆ, ರೀಲ್ಸ್ ಮಾಡಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸೆಲ್ಫಿ ಕ್ರೇಜ್ನಿಂದ ಭಾರತದಲ್ಲಿ ಮೃತಪಡುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಈ ರೀತಿ ಸೆಲ್ಫಿ ಸಾವಿನಲ್ಲಿ ಜಗತ್ತಿನಲ್ಲೇ ಭಾರತ ಅಗ್ರ ಸ್ಥಾನದಲ್ಲಿದೆ ಎಂದು ವರದಿಗಳು ಹೇಳಿವೆ.
ಭಾರತದಲ್ಲಿ ಸಮುದ್ರ, ಕೆರೆ, ನದಿ, ಬೆಟ್ಟಗುಡ್ಡಗಳು ಹೇರಳವಾಗಿರುವುದರಿಂದ ಸಾಕಷ್ಟು ಜನರು ಆಗಾಗ ತಮ್ಮ ಸೆಲ್ಫಿ ಕ್ರೇಜ್ನಿಂದ ಬಲಿಯಾಗುತ್ತಿದ್ದಾರೆ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತ ಇರುತ್ತವೆ. ಮಳೆಗಾಲದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಕಲ್ಲುಬಂಡೆಗಳು ಮೊದಲ ನೋಟಕ್ಕೆ ಸುರಕ್ಷಿತವಾಗಿ ಕಂಡರೂ ಅವುಗಳು ಜಾರುವ ಗುಣ ಹೊಂದಿರುತ್ತವೆ. ನೀರಿನ ಸುಳಿಗಳೂ ಪ್ರಾಣಕ್ಕೆ ಮುಳುವಾಗುತ್ತವೆ. ಈ ಕುರಿತು ಎಚ್ಚರಿಕೆ ಅಗತ್ಯ.
ಜಲಾನಯನ ಪ್ರದೇಶಗಳು, ಸಮುದ್ರ, ನದಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನಿಂತಿರುವ ಸ್ಥಳದ ಕುರಿತು ಎಚ್ಚರಿಕೆ ಅಗತ್ಯ. ನೆಲ ಜಾರಬಹುದು. ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಹೆಚ್ಚಿನ ಜಾಗೃತಿ ವಹಿಸಬೇಕು. ಅಪರಿಚಿತ ಸ್ಥಳಗಳಿಗೆ ಪ್ರವಾಸ ಹೋಗುವಾಗ ಅಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಎಚ್ಚರಿಕೆ ಅಗತ್ಯ. ಸೆಲ್ಫಿ ತೆಗೆದುಕೊಳ್ಳುವ ಮೊದಲು ನಿಂತಿರುವ ಸ್ಥಳ, ಸುತ್ತಮುತ್ತಲಿನ ಪ್ರದೇಶಗಳತ್ತ ಕಣ್ಣಾಡಿಸಿ. ಏನಾದರೂ ಅಪಾಯಕಾರಿ ಅಂಶಗಳಿವೆಯೇ ಎಂದು ಗಮನಿಸಬೇಕು.
ಮದ್ಯಪಾನ ಮಾಡಿದ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳಬೇಡಿ. ಪ್ರವಾಸದ ಸಂದರ್ಭದಲ್ಲಿ ಮದ್ಯ ಸೇವಿಸಿದವರಿಗೆ ತಮ್ಮ ಮೇಲೆ ನಿಯಂತ್ರಣ ಇರುವುದಿಲ್ಲ. ಜಾರಿ ಬಿದ್ದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದು. ಜಾರು ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳಬಾರದು. ಇದೇ ರೀತಿ ರಸ್ತೆ ದಾಟುವಾಗ, ರೈಲ್ವೆ ಹಳಿಗಳ ಮೇಲೆ, ಸಾಹಸ, ಅಡ್ವೆಂಚರ್ ಚಟುವಟಿಕೆಗಳಲ್ಲಿ ತೊಡಗಿರುವಾಗ ಸೆಲ್ಫಿ ತೆಗೆದುಕೊಳ್ಳಬಾರದು. ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳು ರೀಲ್ಸ್ ಗಾಗಿ ವಿಡಿಯೋ ಮಾಡುವಾಗಲೂ ಅನ್ವಯವಾಗುತ್ತದೆ.