SVYM Wednesday Webinar: ಸೌರಮಂಡಲದಾಚೆಗೊಂದು ಚಾರಣ ..!
Sep 29, 2022 01:31 PM IST
ಶಾಲಾ ಮಕ್ಕಳಿಗೆ ಸೌರಮಂಡಲದಾಚೆಗಿನ ಲೋಕವನ್ನು ಪರಿಚಯಿಸುವ ಪ್ರಯತ್ನ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠದಲ್ಲಿ ಬುಧವಾರ ನಡೆಯಿತು.
- SVYM Wednesday Webinar: ಖಗೋಳ ಎಂಬುದು ಹಲವು ವಿಸ್ಮಯಗಳ ಮಾಂತ್ರಿಕ ಲೋಕ. ಇದನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಪ್ರಯತ್ನ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠದಲ್ಲಿ ಬುಧವಾರ ನಡೆಯಿತು.
ಧಾರವಾಡ: ಖಗೋಳವದು ಹಲವಾರು ವಿಸ್ಮಯಗಳನ್ನು ಒಳಗೊಂಡ ಮಾಂತ್ರಿಕ ಮಡಿಕೆಯೇ ಸರಿ. ಅಷ್ಟ ಗ್ರಹಗಳಲ್ಲಿ ಒಂದಾದ ಭೂಮಿಯ ಮೇಲಿನ ವಿಸ್ಮಯಗಳ ಹುಡುಕಾಟದಲ್ಲಿ ಕೊಂಚ ಯಶಸ್ವಿಯಾಗಿದ್ದರೂ, ಮನುಷ್ಯನ ಸಾಧನೆ ಸಾಸಿವೆ ಕಾಳಿಗೂ ಸಮವಲ್ಲ ಬಿಡಿ ಎಂದು ನವನಗರದ ಕರ್ನಾಟಕ ಪಬ್ಲಿಕ್ ಸ್ಕುಲ್ನ ವಿಜ್ಞಾನ ಶಿಕ್ಷಕ ಸಂತೋಷ ಸುತಾರ ಹೇಳಿದರು.
ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.
ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರಗಳನ್ನು ಸಂಘಟಿಸುತ್ತಿದೆ.
ಸೌರಮಂಡಲದ ರಹಸ್ಯಗಳು ಎಂಬ ವಿಷಯದ ಮೇಲೆ ಹಲವಾರು ಕುತೂಹಲಕಾರಿ ಅಂಶಗಳನ್ನು ವಿವರಿಸಿದ ಅವರು, ಬ್ರಹ್ಮಾಂಡ ಅದು ಸುಮಾರು ಎರಡು ನೂರು ಮಿಲಿಯನ್ ಗ್ಯಾಲಕ್ಸಿಗಳ ಗುಚ್ಛ ಎಂದುಕೊಂಡರೆ ಅದರಲ್ಲಿನ ಒಂದು ಗ್ಯಾಲಕ್ಸಿ ನಾವಿರುವ ಹಾಲು ಹಾದಿ ಅಥವಾ ಮಿಲ್ಕಿ ವೇ ಯನ್ನು ನಾವು ಒಂದು ಜಗತ್ತು ಎಂದು ಕಲ್ಪಿಸಿಕೊಳ್ಳೋಣ.
ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿರುವ ಒಂದು ಚಿಕ್ಕ ವಠಾರವೇ ನಮ್ಮ ಸೌರಮಂಡಲ. ಈ ವಠಾರದಲ್ಲಿನ ಪ್ರತಿಯೊಂದು ಕುಟುಂಬವನ್ನು ಒಂದು ಗ್ರಹ ಎಂದುಕೊಂಡರೆ, ಉಳಿದ ಕುಟುಂಬ ಸದಸ್ಯರೇ, ಅದರ ಸುತ್ತ ಸುತ್ತುವ ಗ್ಯಾನಿಮೀಡ, ಟೈಟಾನ್ ಮತ್ತು ಚಂದ್ರನಂತಹ ಉಪಗ್ರಹಗಳು. ಈ ವಠಾರದ ಅಧಿಪತಿಯೇ ಅಥವಾ ಮುಖ್ಯಸ್ಥನೇ ಸೂರ್ಯ ಎಂಬುದನ್ನು ವಿಶಿಷ್ಟವಾಗಿ ತಿಳಿಯಪಡಿಸಿದರು.
ಸೌರಮಂಡಲದ ಆಚೆಗಿರುವ ಕೈಪರ್ ಬೆಲ್ಟ್ ಮತ್ತು ಅದರಲ್ಲಿ ಬರುವ ಪ್ಲೂಟೋ ವನ್ನು ಗ್ರಹದ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಕುಬ್ಜಗ್ರಹ ಎಂದು ಪರಿಗಣಿಸಲಾಗಿದೆ. ಅನಂತರ ಬರುವ ಬಾಹ್ಯ ತಾರಾಮಂಡಲದ ಕುರಿತು ತಿಳಿಸಿದರು.
ಅನೇಕ ಜಲಜನಕದ ಕಣಗಳ ಸಮ್ಮಿಲನದಿಂದ ದೈತ್ಯ ಹೀಲಿಯಂ ಕಣಗಳಾಗಿ ಅಗಾಧ ಪ್ರಮಾಣದ ಶಾಖ ಶಕ್ತಿಯು ಬಿಡುಗಡೆಯಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸೂರ್ಯ.
ಅತಿ ಚಿಕ್ಕ ಗ್ರಹವಾದ ಬುಧ, ಬೆಳ್ಳಿ ಚುಕ್ಕೆ ಎಂದು ಕರೆಯಲ್ಪಡುವ ಶುಕ್ರ, ಅತಿಯಾದ ಕಬ್ಬಿಣದ ಆಕ್ಸೈಡ ಹೊಂದಿರುವುದರಿಂದ ಕೆಂಪು ಗ್ರಹ, ಕುಜಗ್ರಹ ಅಥವಾ ಅಂಗಾರಕ ಎಂದು ಕರೆಯಲ್ಪಡುವ ಮಂಗಳ ಗ್ರಹ, ಅನಿಲದೈತ್ಯನಾದ ಗುರುಗ್ರಹ, ತನ್ನ ಸುತ್ತಲಿನ ಬಳೆಗಳಿಂದ ಸೌರಮಂಡಲದ ಸುಂದರ ಗ್ರಹವಾದ ಶನಿ, ತಂಪಾದ ಗ್ರಹ ಯುರೇನಸ್, ನೀಲಿ ಗ್ರಹ ನೆಪ್ಚೂನ್ ಮತ್ತು ಮನುಕುಲವಿರುವ ಭೂಮಿಯ ಹಲವಾರು ಕುತೂಹಲಕಾರಿ ಅಂಶಗಳನ್ನು ತಿಳಿಯಪಡಿಸಿದರು.
ನಿನ್ನೆ ನಡೆದ ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 568 ವಿದ್ಯಾರ್ಥಿಗಳು ಮತ್ತು 994 ವಿದ್ಯಾರ್ಥಿನಿಯರು ಸೇರಿದಂತೆ 1562 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ವೆಬಿನಾರ್ ಯಶಸ್ವಿಗೊಳಿಸಿದರು.