Udupi News: ಪಾತ್ರ ಮುಗಿಸಿ, ಬಣ್ಣ ತೆಗೆಯುವಾಗಲೇ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ್ ಪುತ್ತೂರು
May 02, 2024 09:09 AM IST
ಪಾತ್ರ ಮುಗಿಸಿ, ಬಣ್ಣ ತೆಗೆಯುವಾಗಲೇಯಕ್ಷಗಾನ ಕಲಾವಿದ ಗಂಗಾಧರ್ ಪುತ್ತೂರು ಇಹಲೋಕ ತ್ಯಜಿಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
- ತನ್ನ ಪಾತ್ರ ಮುಗಿಸಿದ ಬಣ್ಣ ತೆಗೆಯುತ್ತಿರುವಾಗಲೇ ಯಕ್ಷಗಾನ ಕಲಾವಿದ ಗಂಗಾಧರ್ ಪುತ್ತೂರು ಇಹಲೋಕ ತ್ಯಜಿಸಿರುವ ಘಟನೆ ಉಡುಪಿಯನಲ್ಲಿ ನಡೆದಿದೆ. ಇವರಿಗೆ 59 ವರ್ಷ ವಯಸ್ಸಾಗಿತ್ತು. (ವರದಿ: ಹರೀಶ್ ಮಾಂಬಾಡಿ)
ಉಡುಪಿ: ಯಕ್ಷಗಾನ ಕಲಾವಿದರೊಬ್ಬರು (Yakshagana Artist) ವೇಷ ಕಳಚಿ, ಬಣ್ಣ ತೆಗೆಯುವಾಗಲೇ ಹೃದಯಾಘಾತದಿಂದ ಚೌಕಿಯಲ್ಲಿ (ಯಕ್ಷಗಾನದ ಗ್ರೀನ್ ರೂಮ್) ಮೃತಪಟ್ಟ ಘಟನೆ ಉಡುಪಿ (Udupi News) ಜಿಲ್ಲೆಯ ಕೋಟ ಗಾಂಧಿ ಮೈದಾನದಲ್ಲಿ ನಡೆದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದ ಗಂಗಾಧರ ಪುತ್ತೂರು (Gangadhar Puttur) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ, ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ಮಂಗಳ ಆಗುವ ವೇಳೆಗೇ ತೀವ್ರ ಹೃದಯಾಘಾತದಿಂದ ನಿಧನರಾದರು.
ಯಾವ ಪಾತ್ರ ಕೊಟ್ಟರೂ ನಿರ್ವಹಿಸಬಲ್ಲ ಸವ್ಯಸಾಚಿ
ಪುತ್ತೂರು ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ಸವ್ಯಸಾಚಿ ಕಲಾವಿದ ಕಲಾವಿದ. ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಅವರು ತಯಾರಾಗುತ್ತಿದ್ದರು. ಹೆಣ್ಣುವೇಷಗಳಲ್ಲಿ ಬಣ್ಣದ ವೇಷಗಳನ್ನೂ ನಿರ್ವಹಿಸುತ್ತಿದ್ದರು. ಹೀಗಾಗಿ ಮೇಳಕ್ಕೆ ಅನಿವಾರ್ಯ ಕಲಾವಿದರಾಗಿದ್ದರೂ ಪ್ರಸಿದ್ಧಿಗೆ ಮಾರುಹೋಗದೆ, ಅಜ್ಞಾತರಾಗಿ ಉಳಿದಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 42 ವರ್ಷಕ್ಕೂ ಅಧಿಕ ಕಾಲ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದವರು.
ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ಓದಿ ಬಳಿಕ ಕುಂಬಳೆ ಶ್ರೀಧರ ರಾಯರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿದರು. ಅಲ್ಲಿ ಹಿರಿಯರಾದ ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಹೆಜ್ಜೆಗಾರಿಕೆಯನ್ನು ಕಲಿತು, ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾದರು. ಹಂತ ಹಂತವಾಗಿ ಬೆಳೆದು ಬಂದ ಅವರು, ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮಾಲತಿ ಪಾತ್ರ ಸಹಿತ, ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿ ಪ್ರಮುಖ ಕಲಾವಿದರೊಂದಿಗೆ ಕೆಲಸ ಮಾಡಿದರು. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 26 ವರ್ಷ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಭಾಗವಹಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ರಂಗದಲ್ಲಿ ಅಭಿನಯ ಮಾಡುತ್ತಿರುವಾಗಲೇ ರಂಗಸ್ಥಳದಲ್ಲೇ ಕಲಾವಿದರು ಸಾವನ್ನಪ್ಪಿದ ಉದಾಹರಣೆಗಳಿವೆ. ಗಂಗಾಧರ ಪುತ್ತೂರು ಅವರು ವೇಷ ನಿರ್ವಹಿಸಿ, ಯಕ್ಷಗಾನ ಪ್ರಸಂಗ ಮುಗಿದು ಮಂಗಳಪದ್ಯ ಹಾಡುವಾಗ ಚೌಕಿಯಲ್ಲಿ ವೇಷ ಕಳಚಿ, ಬಣ್ಣ ತೆಗೆಯುವ ವೇಳೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಕುಸಿದುಬಿದ್ದಿದ್ದಾರೆ. ಕರಾವಳಿಯಲ್ಲಿ ಬಿಸಿಗಾಳಿ, ತೀವ್ರ ಸೆಖೆಯ ವಾತಾವರಣ ಹಾಗೂ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ಆಗುವ ಬದಲಾವಣೆಗಳಿಂದಾಗಿ ಜನರ ಆರೋಗ್ಯದಲ್ಲೂ ಏರುಪೇರಾಗುತ್ತಿರುವುದು ಕಂಡುಬರುತ್ತಿದೆ. (ಹರೀಶ ಮಾಂಬಾಡಿ, ಮಂಗಳೂರು)