Women Lead: ಸ್ಪರ್ಶ ಸಬಲ ಮಹಿಳಾ ಯೋಜನೆ; ಮಹಿಳೆಯರ ಸಶಕ್ತೀಕರಣದ ಕೆಲಸ ಎಂದ ಸಚಿವ ಡಾ.ಅಶ್ವಥ್ ನಾರಾಯಣ
Feb 03, 2023 10:10 PM IST
ಸಬಲ ಮಹಿಳೆ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿದರು.
Women Lead: ಮತ್ತಿಕೆರೆಯಲ್ಲಿ ಸ್ಪರ್ಶ ಸಂಸ್ಥೆಯ ಸಬಲ ಮಹಿಳಾ ಯೋಜನೆಯ ಮೂರನೇ ವರ್ಷದ ವಾರ್ಷಿಕ ಉತ್ಸವದಲ್ಲಿ "ವ್ಯಾಪಾರ ಅಭಿವೃದ್ಧಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ"ದಲ್ಲಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಭಾಗವಹಿಸಿದರು.
ಬೆಂಗಳೂರು: ಎಲ್ಲರಿಗೂ ಕೆಲಸ ಒದಗಿಸುವಂತಹ ಊರು ಬೆಂಗಳೂರು. ನಮ್ಮ ಸಾಮರ್ಥ್ಯ ಮತ್ತು ಕೌಶಲ ವೃದ್ಧಿಸಿಕೊಂಡರೆ ಇಲ್ಲಿ ಕೆಲಸ ಪಡೆಯಬಹುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಅವರು ಶುಕ್ರವಾರ ಮತ್ತಿಕೆರೆಯಲ್ಲಿ ಸ್ಪರ್ಶ ಸಂಸ್ಥೆಯ ಸಬಲ ಮಹಿಳಾ ಯೋಜನೆಯ ಮೂರನೇ ವರ್ಷದ ವಾರ್ಷಿಕ ಉತ್ಸವದಲ್ಲಿ "ವ್ಯಾಪಾರ ಅಭಿವೃದ್ಧಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ"ದಲ್ಲಿ ಭಾಗವಹಿಸಿ ಮಾತನಾಡಿದರು.
ನಗರ ಜೀವನ ಬಲು ಕಠಿಣ. ಇಲ್ಲಿ ಎಲ್ಲದಕ್ಕೂ ಹಣ ಬೇಕು. ಸಂಪಾದನೆ ಇಲ್ಲದೆ ಇಲ್ಲಿ ಬದುಕಿಲ್ಲ. ಸ್ಪರ್ಶ ಸಂಸ್ಥೆ ಹಾಗೂ ಗೋಪಿನಾಥ್ ರವರ ತಂಡ ಮಹಿಳೆಯರ ಸಬಲೀಕರಣ ಹಾಗೂ ಸಶಕ್ತೀಕರಣದ ಕೆಲಸ ಮಾಡುತ್ತಿರೋದು ಶ್ಲಾಘನೀಯ.
ಬೆಂಗಳೂರಿನಲ್ಲಿ ಎಲ್ಲರಿಗೂ ಕೆಲಸ ಕೊಡಬಹುದು. ನಮ್ಮ ಸಾಮರ್ಥ್ಯ ಹಾಗೂ ಕೌಶಲ್ಯ ವೃದ್ಧಿಸಿಕೊಂಡರೆ ಕೆಲಸ ಪಡೆಯಬಹುದು. ಸ್ಪರ್ಶ ಸಂಸ್ಥೆ ಎಷ್ಟು ಜನಗಳಿಗೆ ಬೇಕಾದರೂ ಕೌಶಲ್ಯಾಭಿವೃದ್ಧಿ ನೆರವು ನೀಡಲು ಮುಂದಾಗಲಿ ನಾವು ನಮ್ಮ ಸರ್ಕಾರದ ವತಿಯಿಂದ ಸಂಪೂರ್ಣ ಬೆಂಬಲ ಕೊಡ್ತೇವೆ ಎಂದು ಸಚಿವರು ಹೇಳಿದರು.
ಬೀದಿಬದಿಯ ವ್ಯಾಪಾರಿ ಹೆಣ್ಣು ಮಕ್ಕಳಿಗೆ ಒಂದು ಉತ್ತಮ ವ್ಯಾಪಾರ ವಹಿವಾಟು ನಡೆಸಲು ನೆರವು ನೀಡುತ್ತಿರುವ ನಿಮ್ಮೊಂದಿಗೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲುತ್ತದೆ. ಈಗಿನ ಕಾಲದಲ್ಲಿ ತಂದೆ ತಾಯಿಯರೂ ಮಕ್ಕಳನ್ನ ದಾರಿ ತಪ್ಪದಂತೆ ಸರಿ ದಾರಿಯಲ್ಲಿ ಮುನ್ನಡೆಸಲು ಶ್ರಮ ಪಡುತ್ತಿರುವಾಗ ಅಸಹಾಯಕ ನಿರ್ಗತಿಕ ಮಕ್ಕಳಿಗೆ ದಾರಿ ತೋರಿಸುತ್ತಿರುವ ಸ್ಪರ್ಶ ಸಂಸ್ಥೆಗೆ ಮತ್ತು ಗೋಪಿನಾಥ್ ಅವರಿಗೆ ತುಂಬು ಹೃದಯದ ಅಭಿನಂದನೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.
ನಮ್ಮಲ್ಲಿ ಹೆಚ್ಚು ಜನ ಯಾವಾಗಲೂ ಎಷ್ಟು ಹಣ ದುಡಿಯೋದು ಎಷ್ಟು ಸಂಪಾದನೆ ಮಾಡೋದು ಅಂತ ಯೋಚನೆ ಮಾಡುತ್ತಿರುತ್ತೇವೆ. ಆದರೆ ಸಮಾಜಕ್ಕೆ ಸೇವೆ ಸಲ್ಲಿಸುವುದು ಮುಖ್ಯ. ಇದನ್ನು ನಾವು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.
ಸ್ಟಾಲ್ಗಳಿಗೆ ಭೇಟಿ ನೀಡಿದ ಸಚಿವರು ಮತ್ತು ಗಣ್ಯರು
ಮಾನ್ಯ ಸಚಿವರು ಸಬಲ ಮಹಿಳೆಯರು ಕಾರ್ಯಕ್ರಮದ ಸ್ಥಳದಲ್ಲಿ ಹಾಕಿದ್ದ ಅವರ ವ್ಯಾಪಾರದ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿ ಪ್ರತಿ ಮಹಿಳೆಯನ್ನೂ ಮುತುವರ್ಜಿಯಿಂದ ಮಾತನಾಡಿಸಿ ಅವರು ಮಾಡುತ್ತಿರುವ ವ್ಯಾಪಾರದ ಕುರಿತು ಮಾಹಿತಿ ಪಡೆದರು.
ಸಬಲ ಮಹಿಳಾ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಪ್ರತಿ ಮಹಿಳೆಗೂ 20,000 ರೂಪಾಯಿ ಚೆಕ್ ಅನ್ನು ಸಚಿವರು ವಿತರಿಸಿದರು.
ಬದುಕಿನಲ್ಲಿ ಭರವಸೆ ಇರಲಿ…
ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಮಧಿಅಳಗನ್ ಮಾತನಾಡಿ, ಬದುಕಿನಲ್ಲಿ ಭರವಸೆ ಮತ್ತು ವಿಶ್ವಾಸ ಇರಲಿ. ಬಡತನ ಎದುರಿಸುವ ಶಕ್ತಿ ಇರುವಂಥವರು ಏನು ಬೇಕಾದರೂ ಎದುರಿಸಬಲ್ಲರು. ನಾವೇ ಹಾಕಿಕೊಂಡಿರುವ ಬಡತನ ಎನ್ನುವ ಬೇಲಿ ತೊರೆದು ಎಲ್ಲರೂ ಅಭಿವೃದ್ಧಿ ಪಥದಲ್ಲಿ ನಡೆಯೋಣ. ನಿಮ್ಮ ನ್ಯಾಯ ಸಮ್ಮತವಾದ ಬದುಕಿನ ರೀತಿಗೆ ಅಭಿನಂದನೆ. ನಿಮ್ಮ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು. ದುಡಿಮೆ ಎನ್ನುವುದೊಂದೇ ದೇವರು ಎನ್ನುವುದನ್ನು ನಾವೆಲ್ಲರೂ ಅರಿತು ಬದುಕೋಣ ಎಂದರು.
ಏನಿದು ಸಬಲ ಮಹಿಳೆ ಯೋಜನೆ? ಇಲ್ಲಿದೆ ವಿಡಿಯೋ ಗಮನಿಸಿ -