logo
ಕನ್ನಡ ಸುದ್ದಿ  /  latest news  /  Kannada Latest News Updates Feb 16: ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು
ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು

Kannada Latest News Updates Feb 16: ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು

Feb 16, 2023 10:07 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Feb 16, 2023 10:07 PM IST

ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು

  • ತೀವ್ರವಾದ ಋತುಚಕ್ರದ ನೋವು ಅನುಭವಿಸುವ ಮಹಿಳೆಯರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡುವ ಕಾನೂನಿಗೆ ಸ್ಪ್ಯಾನಿಷ್‌ನ ಶಾಸಕರು ಇಂದು ಅಂತಿಮ ಅನುಮೋದನೆ ನೀಡಿದ್ದಾರೆ.
  • ಇಂತಹ ಕಾನೂನಿಗೆ ಅನುಮೋದನೆ ನೀಡಿದ ಯುರೋಪ್‌ನ ಮೊದಲ ದೇಶವಾಗಿ ಸ್ಪೇನ್‌ ಹೊರಹೊಮ್ಮಿದೆ.
  • ಈ ಕಾನೂನಿನ ಪರವಾಗಿ 185 ಮತಗಳು, ಮತ್ತು 154 ವಿರೋಧ ಮತಗಳು ಬಿದ್ದಿವೆ.
  • ಮುಟ್ಟಿನ ರಜೆಯನ್ನು ಜಗತ್ತಿನಾದ್ಯಂತ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ನೀಡಲಾಗುತ್ತದೆ. ಜಪಾನ್, ಇಂಡೋನೇಷಿಯಾ ಮತ್ತು ಜಾಂಬಿಯಾಗಳಲ್ಲಿ ಮುಟ್ಟಿನ ರಜೆ ನೀಡಲಾಗುತ್ತಿದೆ.

ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು
ಐತಿಹಾಸಿಕ, ಸ್ಪೇನ್‌ನಲ್ಲಿ ಋತುಚಕ್ರದ ರಜೆಗೆ ಅನುಮೋದನೆ, ಯುರೋಪ್‌ನಲ್ಲೇ ಮೊದಲ ಕಾನೂನು

Feb 16, 2023 09:17 PM IST

ಗೋವಿಂದರಾಜ ನಗರ ಎಂ.ಸಿ.ಬಡಾವಣೆಯಲ್ಲಿ ನಿರ್ಮಿಸಿರುವ “ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ” ಲೋಕಾರ್ಪಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ.ಬಡಾವಣೆಯಲ್ಲಿ ನಿರ್ಮಿಸಿರುವ "ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ” ಯ ಲೋಕಾರ್ಪಣೆಯನ್ನು ಸನ್ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರು ನೆರವೇರಿಸಿದರು.

ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿ ರವರು, ಸಿದ್ದಗಂಗಾ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ರವರು, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ|| ನಂಜಾವದೂತ ಸ್ವಾಮೀಜಿ ರವರು, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ರವರು, ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಮಾನ್ಯ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ವಿ.ಸೋಮಣ್ಣ, ಮಾನ್ಯ ಸಚಿವರುಗಳಾದ ಶ್ರೀ ಆರ್. ಅಶೋಕ, ಶ್ರೀ ಕೆ.ಗೋಪಾಲಯ್ಯ, ಡಾ. ಕೆ. ಸುಧಾಕರ್, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಮಾನ್ಯ ಆಡಳಿತಗಾರರಾದ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಹಾಗೂ ಇನ್ನಿತರೆ ಗಣ್ಯರು/ಅಧಿಕಾರಿಗಳು ಉಪಸ್ಥಿತರಿದ್ದರು.

Feb 16, 2023 09:15 PM IST

ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ, ಯಕ್ಷರಂಗದ ಕಂಬನಿ

ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಪ್ರಧಾನ ಭಾಗವತ, ತೆಂಕುತಿಟ್ಟು ಯಕ್ಷರಂಗದ ಭೀಷ್ಮನೆಂದು ಖ್ಯಾತಿ ಪಡೆದಿದ್ದ ಬಲಿಪ ನಾರಾಯಣ ಭಾಗವತರು (85) ಇಂಧು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಇಂದು ಸಂಜೆ ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಇವರು ನಿಧನರಾದರು. ಕಳೆದ ಎರಡು ವಾರಗಳಿಂದ ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 60 ವರ್ಷಗಳಿಂದ ಇವರು ಯಕ್ಷ ಲೋಕದಲ್ಲಿ ಕಲಾ ಸೇವೆ ಮಾಡುತ್ತಿದ್ದರು.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಗಂಟಾಲಕಟ್ಟೆ ಸಮೀಪ ನೂಯಿಯಲ್ಲಿ ವಾಸವಾಗಿದ್ದರು. ಇವರು ಕಟೀಲು ಮೇಳದಲ್ಲಿ 42 ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಬಲಿಪ ನಾರಾಯಣ ಭಾಗವತರು ಭಾಗವತಿಕೆ ಆರಂಭಿಸಿದ್ದರು.

ಅಂತಿಮ ವಿಧಿವಿಧಾನಗಳು ರಾತ್ರಿ 1.30 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ
Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ (Photo: Facebook)

Feb 16, 2023 07:20 PM IST

ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರರ ಮೀಸಲಾತಿ ಪರಿಶೀಲಿಸಲು ಕ್ರಮ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸ ನೇಮಕಾತಿಗಳಲ್ಲಿ ಮೀಸಲಾತಿ ಕೊಡುವುದರಲ್ಲಿ ಎರಡು ಮಾತಿಲ್ಲ. ನಿಯಮನುಸಾರ ಹೊಸ ನೇಮಕಾತಿಗಳಲ್ಲಿ ಮೀಸಲಾತಿ ನೀಡುವುದನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯರಾದ ಛಲವಾದಿ ಟಿ. ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 15ರನ್ವಯ ಸರ್ಕಾರದ ಇಲಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಗುತ್ತಿಗೆ ಆಧಾರದ ನೇಮಕಾತಿಯು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಮಾಡುವುದಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಒಟ್ಟಾರೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರ ಅಂಕಿ ಸಂಖ್ಯೆಗಳನ್ನು ಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುತ್ತಿಗೆ ಆಧಾರದ ಏಜೆನ್ಸಿಗಳಿಗೆ ಮೀಸಲಾತಿಯನ್ನು ಪಾಲನೆ ಮಾಡಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

Feb 16, 2023 07:19 PM IST

ಬ್ರಾಹ್ಮಣ ಮತ್ತು ಆರ್ಯ ವೈಶ್ಯ ಸಮುದಾಯಗಳಿಗೆ ಅನ್ಯಾಯವಾಗಿಲ್ಲ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಾಮಾನ್ಯ ವರ್ಗದ ಬ್ರಾಹ್ಮಣ ಮತ್ತು ಆರ್ಯ ವೈಶ್ಯ ಸಮುದಾಯಗಳಿಗೆ ಯಾವುದೇ ಅನ್ಯಾವಾಗಿರುವುದಿಲ್ಲ ಎರಡೂ ನಿಗಮದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಅನುದಾನ ಖರ್ಚಾಗದೇ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯರಾದ ಟಿ.ಎ. ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, 2022-23ನೇ ಸಾಲಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 60.00 ಕೋಟಿ ಹೆಚ್ಚುವರಿ ಅನುದಾನ ಕೊರಿಕೆಯ ಪ್ರಸ್ತಾವನೆಯು ಸ್ವೀಕೃತವಾಗಿದ್ದು, ಖಾತೆಯಲ್ಲಿ ರೂ. 6.15 ಕೋಟಿ ಇನ್ನೂ ವೆಚ್ಚವಾಗದೇ ಇದೆ. ಅದೇ ರೀತಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಇನ್ನೂ ರೂ 5.00 ಕೋಟಿ ವೆಚ್ವಾಗದೇ ಇದೆ. ಈ ಅನುದಾನವನ್ನು ಸಂಪೂರ್ಣ ವೆಚ್ಚ ಮಾಡಿದಲ್ಲಿ, ಹೆಚ್ಚುವರಿಯಾಗಿ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮವು ಚೆನ್ನಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ ವೇತನವನ್ನು ಮುಂದುವರೆಸಲು ಸಂಬಂಧಿಸಿದವರಿಂದ ಮಾಹಿತಿಯನ್ನು ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದು ಈ ಸಮಯದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

Feb 16, 2023 07:18 PM IST

ಪೃಥ್ವಿ ಶಾ ಕಾರಿನ ಮೇಲೆ ದಾಳಿ; ಎಫ್‌ಐಆರ್ ದಾಖಲು

ಮುಂಬೈನ ಪಂಚತಾರಾ ಹೋಟೆಲ್‌ನ ಹೊರಭಾಗದಲ್ಲಿ ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಕಿರಿಕ್ ಮಾಡಿಕೊಂಡಿದ್ದು ಪೃಥ್ವಿ ಶಾ ಸ್ನೇಹಿತನ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ 8 ಮಂದಿಯ ವಿರುದ್ಧ ಪೃಥ್ವಿ ಶಾ ಸ್ನೇಹಿತ ಎಫ್‌ಐಆರ್ ದಾಖಲಿಸಿದ್ದಾರೆ.

Feb 16, 2023 07:16 PM IST

ತ್ರಿಪುರ ಚುನಾವಣೆ, ಸಂಜೆ 4 ಗಂಟೆ ವೇಳೆಗೆ ಶೇಕಡ 81.1 ಮತದಾನ

ತ್ರಿಪುರ ಚುನಾವಣೆ, ಸಂಜೆ 4 ಗಂಟೆ ವೇಳೆಗೆ ಶೇಕಡ 81.1 ಮತದಾನವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ.

Feb 16, 2023 05:28 PM IST

ಚುನಾವಣೆ ದಿನದಂದು ಮತಯಾಚಿಸಿದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನೋಟಿಸ್‌

ಇಂದು ತ್ರಿಪುರದಲ್ಲಿ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಮತ ಯಾಚಿಸಿದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮುಖ್ಯ ಚುನಾವಣಾ ಅಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

Feb 16, 2023 04:10 PM IST

 ತ್ರಿಪುರ ಚುನಾವಣೆ: 3 ಗಂಟೆಯವರೆಗೆ ಶೇ. 69.60 ಮತ ಚಲಾವಣೆ, ವಿವಿಧೆಡೆ ಇವಿಎಂಗಳಲ್ಲಿ ದೋಷ

ತ್ರಿಪುರದಲ್ಲಿ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದು, ಇಂದು ಸಂಜೆ 3 ಗಂಟೆಯವರೆಗೆ ಶೇಕಡ 69.60 ಮತ ಚಲಾವಣೆಯಾಗಿದೆ.

ಹಲವು ಕಡೆಗಳಲ್ಲಿ ಇವಿಎಂನಲ್ಲಿ ದೋಷ ಕಂಡಿದೆ. ದೋಷಪೂರಿತ ಇವಿಎಂಗಳನ್ನು ತಕ್ಷಣ ಬದಲಾಯಿಸಲಾಗಿದೆ.

ಸುಮಾರು 40-45 ಕಡೆಗಳಲ್ಲಿ ಇವಿಎಂಗಳಲ್ಲಿ ದೋಷ ಕಂಡುಬಂದಿದೆ.

Feb 16, 2023 04:05 PM IST

ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ, ಒಟ್ಟು 46435 ಹುದ್ದೆಗಳ ಭರ್ತಿ, ಹುದ್ದೆಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ (ಜಿಟಿ) ಪರೀಕ್ಷೆ 2022ರ ತಾತ್ಕಾಲಿಕ ವೇಕ್ಸೆನ್ಸಿ ಲಿಸ್ಟ್‌ ಪ್ರಕಟಗೊಂಡಿದೆ. ssc.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಈ ತಾತ್ಕಾಲಿಕ ಹುದ್ದೆಗಳ ಪಟ್ಟಿಯನ್ನು ಪರಿಶೀಲಿಸಬಹುದು. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌),ಎಸ್‌ಎಸ್‌ಎಫ್‌, ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್‌ (ಜಿಡಿ), ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೊ ಎಗ್ಸಾಮಿನೇಷನ್‌ನಲ್ಲಿ ಸಫಾಯಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

Feb 16, 2023 03:20 PM IST

ದಾಳಿ, ಕೊಲೆ ಬಿಜೆಪಿ ಸಂಸ್ಕೃತಿ, ಅಶ್ವಥ್‌ ನಾರಾಯಣ್‌ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಮಂಡ್ಯದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ ರೀತಿ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ನೀವೆಲ್ಲ ನನ್ನನ್ನು ಹೊಡೆದುಹಾಕಲು ಬಿಡುತ್ತೀರ? ನಾನು ಟಿಪ್ಪು ಸುಲ್ತಾನ್‌, ಸಂಗೊಳ್ಳಿ ರಾಯಣ್ಣ, ಸಂತ ಸೇವಾಲಾಲ್‌, ಬಸವಣ್ಣ, ಕನಕದಾಸರು ಈ ಎಲ್ಲರನ್ನೂ ಗೌರವಿಸುತ್ತೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಜನರನ್ನು ಪ್ರೀತಿ ಮಾಡುತ್ತೇನೆ. ಬಿಜೆಪಿಯವರು ಸಮಾಜದಲ್ಲಿ ದ್ವೇಷ ಹುಟ್ಟುಹಾಕುವವರು, ದಯವಿಟ್ಟು ಇಂಥಾ ಸ್ವಾರ್ಥಿಗಳಿಗೆ ನಿಮ್ಮ ಮತ ನೀಡಬೇಡಿ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. 

Feb 16, 2023 02:58 PM IST

ನೇಪಾಳದಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟ, ಸಂಸದ ಚಂದ್ರ ಭಂಡಾರಿ ಗಂಭೀರ, ಚಿಕಿತ್ಸೆ ಫಲಿಸದೆ ತಾಯಿ ಮೃತ್ಯು

ನೇಪಾಳದ ಸಂಸದ ಚಂದ್ರ ಭಂಡಾರಿ ಅವರ ಮನೆಯಲ್ಲಿ ಗ್ಯಾಸ್‌ ಸ್ಪೋಟ ಸಂಭವಿಸಿದ್ದು, ತೀವ್ರ ಸುಟ್ಟಗಾಯಗಳಿಂದ ಸಂಸದರ ತಾಯಿ ಹರಿ ಕಲಾ ಭಂಡಾರಿ ಅವರು ಇಂದು ಬೆಳಗ್ಗೆ ಮೃತರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಸಂಸದ ಚಂದ್ರ ಭಂಡಾರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಕರೆತರಲು ನಿರ್ಧರಿಸಲಾಗಿದೆ.

"ಸಂಸದರ ಪರಿಸ್ಥಿತಿ ಉತ್ತಮವಾಗಿಲ್ಲ. ಭಂಡಾರಿ ಅವರ ಸುಟ್ಟ ಗಾಯಗಳಿಗೆ ಹೊರದೇಶದ ಸ್ಪೆಷಲಿಸ್ಟ್‌ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಇಲ್ಲಿ ಈ ಗಾಯಗಳಿಗೆ ಚಿಕಿತ್ದೆ ಸಾಧ್ಯವಿಲ್ಲʼʼ ಎಂದು ಕೀರ್ತಿಪುರ ಬರ್ನ್ಸ್‌ ಹಾಸ್ಪಿಟಲ್‌ನ ಅಧಿಕಾರಿಗಳು ಹೇಳಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳನ್ನು ಹೊಂದಿದ್ದ ಸಂಸದ ಚಂದ್ರ ಭಂಡಾರಿ ಮತ್ತು ಅವರ ತಾಯಿ ಹರಿಕಲಾ ಭಂಡಾರಿ ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಆಸ್ಪತ್ರೆಯ ಶಿಫಾರಸ್ಸಿನ ಮೇರೆಗೆ ಸಂಸದರನ್ನು ಮುಂಬೈನ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲು ನಿರ್ಧರಿಸಲಾಗಿದೆ. ನವಮುಂಬಯಿಯಲ್ಲಿರುವ ನ್ಯಾಷನಲ್‌ ಬರ್ನ್ಸ್‌ ಹಾಸ್ಪಿಟಲ್‌ನಲ್ಲಿ ಇವರಿಗೆ ಚಿಕಿತ್ಸೆ ಮುಂದುವರೆಸಲು ನಿರ್ಧರಿಸಲಾಗಿದೆ.

Feb 16, 2023 01:57 PM IST

ತ್ರಿಪುರಾ ವಿಧಾನಸಭಾ ಚುನಾವಣೆ: 1 ಗಂಟೆಯವರೆಗೆ ಶೇ. 51.35 ರಷ್ಟು ಮತದಾನ

ಇಂದು ಬೆಳಗ್ಗೆ 7 ಗಂಟೆಯಿಂದ ತ್ರಿಪುರಾ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ. 51.35 ರಷ್ಟು ಜನರು ವೋಟ್​ ಮಾಡಿದ್ದಾರೆ.

Feb 16, 2023 01:01 PM IST

ವಿಶ್ವವಿದ್ಯಾಲಯದ ಬಳಿ ಬಾಂಬ್‌ ಸ್ಫೋಟ

ಮಧ್ಯಪ್ರದೇಶದ ಜಬಲ್‌ಪುರದ ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ಕ್ಯಾಂಟೀನ್‌ನ ಹೊರಗೆ ಅಪರಿಚಿತ ವ್ಯಕ್ತಿಯೊಬ್ಬ ಎರಡು ಬಾಂಬ್‌ಗಳನ್ನು ಎಸೆದಿದ್ದು, ಅವು ಸ್ಫೋಟಗೊಂಡಿವೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಫೋಟದಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಿವಿಲ್ ಲೈನ್ ಎಸ್‌ಎಚ್‌ಒ ರಮೇಶ್ ಕೌರವ್ ಹೇಳಿದ್ದಾರೆ.

Feb 16, 2023 12:07 PM IST

ಹಕ್ಕು ಚಲಾಯಿಸಿದ ಮಾಣಿಕ್​ ಸರ್ಕಾರ್​

ತ್ರಿಪುರಾದಲ್ಲಿ ದೀರ್ಘಕಾಲದ ವರೆಗೆ ಮುಖ್ಯಮಂತ್ರಿಯಾಗಿದ್ದ ಮಾಣಿಕ್​ ಸರ್ಕಾರ್​ ಅಗರ್ತಲಾದಲ್ಲಿ ಇಂದು ತಮ್ಮ ಹಕ್ಕು ಚಲಾಯಿಸಿದರು. 

Feb 16, 2023 12:03 PM IST

ತ್ರಿಪುರಾ ವಿಧಾನಸಭಾ ಚುನಾವಣೆ: 11 ಗಂಟೆಯವರೆಗೆ ಶೇ. 31.23 ರಷ್ಟು ಮತದಾನ

ಇಂದು ಬೆಳಗ್ಗೆ 7 ಗಂಟೆಯಿಂದ ತ್ರಿಪುರಾ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, 11 ಗಂಟೆಯವರೆಗೆ ಶೇ. 31.23 ರಷ್ಟು ಜನರು ವೋಟ್​ ಮಾಡಿದ್ದಾರೆ.

Feb 16, 2023 12:02 PM IST

 ತ್ರಿಪುರಾ ವಿಧಾನಸಭಾ ಚುನಾವಣೆ: 9 ಗಂಟೆಯವರೆಗೆ ಶೇ. 13.23 ರಷ್ಟು ಮತದಾನ

ಇಂದು ಬೆಳಗ್ಗೆ 7 ಗಂಟೆಯಿಂದ ತ್ರಿಪುರಾ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, 9 ಗಂಟೆಯವರೆಗೆ ಶೇ. 13.23 ರಷ್ಟು ಜನರು ವೋಟ್​ ಮಾಡಿದ್ದಾರೆ.

Feb 16, 2023 10:00 AM IST

ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸಿ - ಪಿಎಂ ಮೋದಿ

ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸುವಂತೆ ತ್ರಿಪುರಾ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ವಿಶೇಷವಾಗಿ ಯುವಕರು ತಮ್ಮ ಹಕ್ಕು ಚಲಾಯಿಸುವಂತೆ ಕರೆ ನೀಡಿದ್ದಾರೆ.

Feb 16, 2023 08:47 AM IST

ಮತ ಚಲಾಯಿಸಿದ ತ್ರಿಪುರಾ ಮುಖ್ಯಮಂತ್ರಿ

ಟೌನ್ ಬೋರ್ಡೋವಲಿಯ ಬಿಜೆಪಿ ಅಭ್ಯರ್ಥಿಯಾಗಿರುವ ತ್ರಿಪುರಾ ಸಿಎಂ ಡಾ.ಮಾಣಿಕ್ ಸಹಾ ಅವರು ಅಗರ್ತಲಾದಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.

Feb 16, 2023 07:23 AM IST

ತ್ರಿಪುರಾ ವಿಧಾನಸಭಾ ಚುನಾವಣೆ: ಮತದಾನ ಆರಂಭ

ವಿಧಾನಸಭಾ ಚುನಾವಣೆಗೆ ತ್ರಿಪುರಾ ಸಜ್ಜಾಗಿದ್ದು, ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ವೋಟಿಂಗ್​ ನಡೆಯಲಿದೆ. 60 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 20 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 259 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದಕ್ಕಾಗಿ ರಾಜ್ಯ ಪೊಲೀಸ್‌ ಪಡೆಯ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 31,000 ಚುನಾವಣಾ ಸಿಬ್ಬಂದಿ ಮತ್ತು ಕೇಂದ್ರೀಯ ಭದ್ರತಾ ಸಂಸ್ಥೆಗಳ ಸುಮಾರು 25,000 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಒಟ್ಟು 3,337 ಮತಗಟ್ಟೆಗಳ ಪೈಕಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 28 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.

Feb 16, 2023 07:21 AM IST

ತ್ರಿಪುರಾದಲ್ಲಿ ತ್ರಿಕೋನ ಸ್ಫರ್ಧೆ

ಈ ಬಾರಿ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಮೈತ್ರಿಕೂಟ, ಭಾರತೀಯ ಕಮ್ಯೂನಿಸ್ಟ್ ಪಕ್ಷ -ಮಾರ್ಕ್​​​ವಾದ (ಸಿಪಿಐ-ಎಂ)–ಕಾಂಗ್ರೆಸ್‌ ಮೈತ್ರಿಕೂಟ ಮತ್ತು ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ರಾಜ್ಯದ ಹೊಸ ಪ್ರಾದೇಶಿಕ ಪಕ್ಷವಾದ ಟಿಪ್ರಮೋಥಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Feb 16, 2023 07:21 AM IST

ಫಿಜಿ ಪ್ರಧಾನಿಯೊಂದಿಗೆ ಜೈಶಂಕರ್ ದ್ವಿಪಕ್ಷೀಯ ಸಭೆ

ವಿಶ್ವ ಹಿಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಫಿಜಿಗೆ ತೆರಳಿದ್ದ ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಫಿಜಿ ಪ್ರಧಾನಿ ಸಿತಿವೇನಿ ರಬ್ಕಾ ನ್ಸುವಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

Feb 16, 2023 07:20 AM IST

ಚಾರ್ಟರ್ಡ್ ಅಕೌಂಟೆಂಟ್​ನ ಗುಂಡಿಕ್ಕಿ ಹತ್ಯೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಶ್ವೇತಾಭ್ ತಿವಾರಿ ಅವರನ್ನು ಅವರ ಕಚೇರಿಯ ಹೊರಗೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೊರಾದಾಬಾದ್ ಎಸ್‌ಎಸ್‌ಪಿ ಹೇಮರಾಜ್ ಮೀನಾ ಹೇಳಿದ್ದಾರೆ.

Feb 16, 2023 07:20 AM IST

ಫೆ.20 ರಂದು ಶೃಂಗೇರಿ ಶಾರದಾ ಮಠಕ್ಕೆ ನಡ್ಡಾ ಭೇಟಿ

ಫೆಬ್ರವರಿ 10 ರಂದು ರಾಜ್ಯ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಶಾರದಾಂಬೆ ದರ್ಶನದ ಬಳಿಕ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

    ಹಂಚಿಕೊಳ್ಳಲು ಲೇಖನಗಳು