CM Bommai: ಬೆಂಗಳೂರು ಐಕಿಯಾ ಸ್ಟೋರ್ನಲ್ಲಿ ಸ್ಥಳೀಯರಿಗೆ ಶೇ 75 ಉದ್ಯೋಗಾವಕಾಶ ಎಂದ ಸಿಎಂ
Jun 22, 2022 02:02 PM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಂಗಳೂರಿನ ನಾಗಸಂದ್ರದಲ್ಲಿ ಬುಧವಾರ ಐಕಿಯಾ ಸ್ಟೋರ್ ಅನ್ನು ಲೋಕಾರ್ಪಣೆ ಮಾಡಿದರು. ಸಚಿವ ಮುರುಗೇಶ್ ನಿರಾಣಿ ಮತ್ತು ಐಕಿಯಾ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಂಗಳೂರಿನ ನಾಗಸಂದ್ರದಲ್ಲಿ ಬುಧವಾರ ಐಕಿಯಾ ಸ್ಟೋರ್ ಅನ್ನು ಲೋಕಾರ್ಪಣೆ ಮಾಡಿದರು. ಈ ಮಳಿಗೆಯಲ್ಲಿ ಸ್ಥಳೀಯರಿಗೆ ಶೇಕಡ 75 ಉದ್ಯೋಗವಾಕಾಶದ ಭರವಸೆಯನ್ನು ಕಂಪನಿ ನೀಡಿದೆ ಎಂದು ಅವರು ಹೇಳಿದರು.
ಬೆಂಗಳೂರು: ಐಕಿಯಾ ಪೀಠೋಪಕರಣ ಮಳಿಗೆ ಇಲ್ಲಿ ಆರಂಭವಾದ ಕಾರಣ ಸ್ಥಳೀಯರಿಗೆ ಅತಿ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಸ್ಥಳೀಯರಿಗೆ ಶೇ 75 ರಷ್ಟು ಉದ್ಯೋಗ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬುಧವಾರ ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ 'ಐಕಿಯಾ' ದ ಅತಿದೊಡ್ಡ ಮಳಿಗೆಯನ್ನು ನಗರದ ನಾಗಸಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಮಳಿಗೆಯು ತುಮಕೂರು ರಸ್ತೆ ನಾಗಸಂದ್ರದ ಮಂಜುನಾಥ ನಗರದಲ್ಲಿದೆ.
ಬೆಂಗಳೂರಿನಲ್ಲಿಯೇ ಮೊದಲ ಮಳಿಗೆ ಪ್ರಾರಂಭಿಸಬೇಕೆಂಬ ಉದ್ದೇಶ ಐಕಿಯಾ ಸಂಸ್ಥೆಗೆ ಇತ್ತು. ಆದರೆ ಸಹಕಾರ ದೊರೆತಿರಲಿಲ್ಲ. ನಂತರ ಬಹಳ ಕಷ್ಟಪಟ್ಟು ಈ ಸ್ಥಳವನ್ನು ಪಡೆದಿದ್ದಾರೆ. ದಾವೋಸ್ ಶೃಂಗದ ವೇಳೆ ಐಕಿಯಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಜತೆಗೆ ರಾಜ್ಯದಲ್ಲಿ ಹೂಡಿಕೆ ವಿಚಾರ ಚರ್ಚಿಸಲಾಗಿತ್ತು. ಸುಮಾರು 3000 ಕೋಟಿ ರೂಪಾಯಿ ಹೂಡಿಕೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಮಳಿಗೆ ಪ್ರಾರಂಭವಾದ್ದರಿಂದ ಸ್ಥಳೀಯ ಕುಶಲಕರ್ಮಿಗಳಾದ ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಅವಕಾಶ ದೊರೆಯುತ್ತದೆ. ಇವರ ಉತ್ಪನ್ನಗಳಿಗೆ ಶೇ 27 ರಷ್ಟು ಅವಕಾಶ ನೀಡುವುದಾಗಿ ಕಂಪನಿ ಹೇಳಿದೆ. ಅದನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಈ ರೀತಿ ಅವಕಾಶಗಳು ಇನ್ನಷ್ಟು ಹೆಚ್ಚಾಗಬೇಕು ಎಂದರೆ ಇನ್ನಷ್ಟು ಮಳಿಗೆಗಳು ಪ್ರಮುಖ ಪ್ರದೇಶಗಳಲ್ಲಿ ವ್ಯಾಪಾರ ಆರಂಭಿಸಬೇಕು. ಇದರೊಂದಿಗೆ ಉದ್ಯೋಗಾವಕಾಶವಲ್ಲದೆ, ವ್ಯಾಪಾರ ವೃದ್ಧಿ, ಸಹಕಾರ, ಪಾಲುದಾರಿಕೆಯ ಅವಕಾಶವೂ ಹೆಚ್ಚಾಗುತ್ತದೆ. ಇವೆಲ್ಲದರ ಒಟ್ಟು ಪರಿಣಾಮ ರಾಜ್ಯದ ಅರ್ಥ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತ ಸಾಗುತ್ತದೆ. ದೇಶದ ಅರ್ಥ ವ್ಯವಸ್ಥೆಗೆ ಪೂರಕವಾಗಿ ರಾಜ್ಯವೂ ಬೆಳೆಯುವುದು ಇಂತಹ ಕ್ರಮಗಳಿಂದ ಸಾಧ್ಯವಿದೆ.
ಇಂತಹ ಒಂದು ಮಳಿಗೆಯಲ್ಲಿ 1,000 ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಇನ್ನಷ್ಟು ಮಳಿಗೆಗಳನ್ನು ರಾಜ್ಯದಲ್ಲಿ ತೆೆರೆಯಬೇಕು. ಬೆಂಗಳೂರು ಅಭಿವೃದ್ಧಿ ಪಥದಲ್ಲಿ ಕ್ಷಿಪ್ರ ವೇಗದೊಂದಿಗೆ ಮುನ್ನಡೆಯುತ್ತಿದೆ. ಇಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಅವಕಾಶವೂ ಇದೆ. ಬೆಂಗಳೂರಿಗೆ ಅಂತಹ ಸಾಮರ್ಥ್ಯವೂ ಇದೆ. ಆದ್ದರಿಂದ ದಕ್ಷಿಣ ಬೆಂಗಳೂರಿನಲ್ಲೂ ಒಂದು ಮಳಿಗೆ ತೆರೆಯುವಂತೆ ಕಂಪನಿ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿವರ ನೀಡಿದರು.
ಐಕಿಯಾದಲ್ಲಿ ಉತ್ತಮ ಗುಣಮಟ್ಟದ, ಬಾಳಿಕೆ ಬರುವ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಸಾಮಾನ್ಯ ಜನರಿಗೆ, ಮಧ್ಯಮವರ್ಗದವರ ಕನಸು ನನಸಾಗಿಸಲು ಇದು ಸಹಕಾರಿಯಾಗಿದೆ. ಉದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶಗಳು ಹೆಚ್ಚಬೇಕು. ಈ ರೀತಿ ಪ್ರೋತ್ಸಾಹ ಕೊಡುವುದರಿಂದಾಗಿ ಸ್ಥಳೀಯರ ಬೆಳವಣಿಗೆಗೂ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದಲೇ, ನಾವು ಕೂಡ ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡಲೇಬೇಕು ಎಂದು ಸಿಎಂ ಹೇಳಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್, ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್ ಪುಲ್ವೇಲರ್, ಐಕಿಯಾ ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪಕ ಆಂಜೆ ಹಿಮ್ ಮತ್ತು ಇತರೆ ಪ್ರಮುಖರು ಉಪಸ್ಥಿತರಿದ್ದರು.