Sharad Yadav's death Condolences: ಶರದ್ ಯಾದವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರ ಸಂತಾಪ, ಯಾರು ಏನೆಂದರು?
Jan 13, 2023 06:54 AM IST
Sharad Yadav's death Condolences: ಶರದ್ ಯಾದವ್ ನಿಧನಕ್ಕೆ ಗಣ್ಯರ ಸಂತಾಪ
- ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಯಾದವ್ ಅವರ ನಿಧನದ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ, ಅವರ ನಿಧನವು "ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನು ಉಂಟುಮಾಡಿದೆ" ಎಂದು ಹೇಳಿದ್ದಾರೆ.
ನವದೆಹಲಿ: ನಿನ್ನೆ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವ ಶರದ್ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶರದ್ ಯಾದವ್ ನಿಧನ ಸುದ್ದಿ ಕೇಳಿ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಯಾದವ್ ಅವರ ನಿಧನದ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ, ಅವರ ನಿಧನವು "ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನು ಉಂಟುಮಾಡಿದೆ" ಎಂದು ಹೇಳಿದ್ದಾರೆ.
“ಶ್ರೀ ಶರದ್ ಯಾದವ್ ಜಿಯವರ ನಿಧನದಿಂದ ನೋವಾಗಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅವರು ಸಂಸದ ಮತ್ತು ಸಚಿವರಾಗಿ ಗುರುತಿಸಿಕೊಂಡಿದ್ದರು. ಅವರು ಡಾ. ಲೋಹಿಯಾ ಅವರ ಆದರ್ಶಗಳಿಂದ ಬಹಳ ಪ್ರೇರಿತರಾಗಿದ್ದರು. ಅವರ ಜತೆ ನಡೆದ ಸಂವಹನಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರ ನಿಧನದಿಂದ ದುಃಖವಾಗಿದೆ. ನಾನು ಶರದ್ ಯಾದವ್ ಜೀ ಅವರೊಂದಿಗೆ ಬಹಳ ಆಳವಾದ ಸಂಬಂಧವನ್ನು ಹೊಂದಿದ್ದೆ. ಅವರ ನಿಧನದ ಸುದ್ದಿಯಿಂದ ನನಗೆ ಆಘಾತ ಮತ್ತು ದುಃಖವಾಗಿದೆ. ಅವರು ಪ್ರಬಲ ಸಮಾಜವಾದಿ ನಾಯಕರಾಗಿದ್ದರು. ಅವರ ನಿಧನದಿಂದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಿತೀಶ್ ಕುಮಾರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆರ್ಜೆಡಿ ನಾಯಕರಾದ ತೇಜಸ್ವಿ ಯಾದವ್ ಕೂಡ ಶರದ್ ಯಾದವ್ ನಿಧನಕ್ಕೆ ವಿಡಿಯೋ ಮೂಲಕ ಶೋಕ ಸಂದೇಶ ಕಳುಹಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಆರ್ಜೆಡಿ ಮತ್ತು ಲೋಕ್ತಾಂತ್ರಿಕ್ ಜನತಾ ದಳ ವಿಲೀನವಾಗಿತ್ತು.
"ನೇತಾಜಿ (ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್) ಅವರ ನಿಧನದ ಬಳಿಕ ಸಮಾಜವಾದಿ ಸಹೋದರ ಸಹೋದರಿಯರಿಗೆ ಇದು ದೊಡ್ಡ ನಷ್ಟವಾಗಿದೆ" ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಮಧ್ಯಪ್ರದೇಶದಲ್ಲಿರುವ ಶರದ್ ಯಾದವ್ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ಯಾದವ್ ಅಳಿಯ ರಾಜ್ ಕಮಾಲ್ ರಾವ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರದ್ ಯಾದವ್ ನಿಧಣನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವರು, ಜೆಡಿಯು ಮಾಜಿ ಅಧ್ಯಕ್ಷರಾದ ಶರದ್ ಯಾದವ್ ಅವರ ಅಗಲಿಕೆ ದುಃಖ ಉಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ವಿಭಾಗ