Border Dispute: ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ; ಸುಪ್ರೀಂ ಕೋರ್ಟ್ನಲ್ಲಿ ನಾಳೆ ವಿಚಾರಣೆ
Nov 29, 2022 11:45 AM IST
ಸುಪ್ರೀಂ ಕೋರ್ಟ್
- ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ನಾಳೆ (ನವೆಂಬರ್ 30) ವಿಚಾರಣೆಗೆ ಬರಲಿದ್ದು, ಈ ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಾಡುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿ: ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ನಾಳೆ (ನವೆಂಬರ್ 30) ವಿಚಾರಣೆಗೆ ಬರಲಿದ್ದು, ಈ ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಾಡುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ನವದೆಹಲಿಯಲ್ಲಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಭೇಟಿಯಾಗಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಕುಲ್ ರೋಹಟಗಿ ಹಿರಿಯ ವಕೀಲರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಂಬಂಧಪಟ್ಟ ಹಾಗೆ ಈಗಾಗಲೇ ಎಲ್ಲ ವಿಷಯವನ್ನು ನಮ್ಮ ಅಡ್ವೋಕೇಟ್ ಜನರಲ್ ವಿವರಿಸಿದ್ದಾರೆ. ನಾನು ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಬಗ್ಗೆ ರೋಹಟಗಿ ಅವರಿಗೆ ವಿವರಣೆ ನೀಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿರುವುದಾಗಿ ಹೇಳಿದರು.
ಮಹಾರಾಷ್ಟ್ರ ಸರ್ಕಾರ ಹಾಕಿರುವ ಮೇಂಟೈನೆಬಿಲಿಟಿ ಕುರಿತಾಗಿ ವಿಚಾರಣೆ ನಡೆಯಲಿದೆ. ಹಿಂದಿನ ಸಿಜೆಐ ದೀಪಕ್ ಮಿಶ್ರ ಅವರು ಮೇಂಟೈನೆಬಿಲಿಟಿ ವಿಚಾರವನ್ನು ಸಿದ್ದಪಡಿಸಿದ್ದರು. ಅದಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದರ ಬಗ್ಗೆ ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮಹಾರಾಷ್ಟ್ರದ ನಾಯಕರುಗಳು, ನಾವು ಗಂಭೀರವಾಗಿ ಇದೀವಿ ಅಂತ ತೋರಿಸಿಕೊಳ್ಳಲು ಆ ರೀತಿ ಮಾಡುತ್ತಿದ್ದಾರೆ ಎಂದರು.
ಕರ್ನಾಟಕಕ್ಕೆ ಸೇರಲು ಗ್ರಾಮಸ್ಥರ ನಿರ್ಧಾರ: ನಿಯಮಗಳಿವೆ
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿರುವ ಮಹಾರಾಷ್ಟ್ರದ ಕೆಲವು ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಳ್ಳಿಗಳು ಸೇರ್ಪಡೆಯಾಗಲು ನಿಯಮಗಳಿವೆ. ಜತ್ ತಾಲೂಕಿನ 42 ಗ್ರಾಮಸ್ಥರು ಸಿಎಂ ಭೇಟಿಗೆ ಅವಕಾಶ ಕೇಳಿರುವ ಬಗ್ಗೆ ಉತ್ತರಿಸಿ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಸರಿಯಾದ ಸೌಲಭ್ಯ ದೊರಕದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ಬಹಳಷ್ಟು ವರ್ಷದಿಂದ ನೀಡುತ್ತಿದ್ದಾರೆ. ಆದರೆ ವಿಚಾರ ಸುಪ್ರೀಂಕೋರ್ಟ್ ನಲ್ಲಿದ್ದು, ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಾಗುವುದು. ಕಾನೂನು ಸಲಹೆ ಪಡೆದು ಮುಂದುವರೆಯುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ರಾಜಕೀಯ ಹೇಳಿಕೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಬಗ್ಗೆ ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಕುಡಿಯುವ ನೀರು ನೀಡುವ ನಿರ್ಣಯ ಮಾಡಿದ್ದರು. ಅವರು ಯಾಕೆ ಸೇರಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು. ಜವಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲವನ್ನೂ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿ: ಪರಿಸ್ಥಿತಿ ನಿಯಂತ್ರಣದಲ್ಲಿದೆ
ರಾಜ್ಯಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಗೃಹ ಇಲಾಖೆಗೆ ಜೊತೆಗೆ ಈಗಾಗಲೇ ರಾಜ್ಯದ ಅಧಿಕಾರಿಗಳು ಮಾತನಾಡಿದ್ದಾರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.