Kerala Bus Accident: ವಡಕಂಚೇರಿ ಸಮೀಪ ಭೀಕರ ರಸ್ತೆ ಅಪಘಾತ; 5 ಮಕ್ಕಳು ಸೇರಿ 9 ಪ್ರಯಾಣಿಕರ ದುರ್ಮರಣ; ಇಲ್ಲಿವೆ ಅಪಘಾತ ಸ್ಥಳದ ಫೋಟೋಗಳು
Oct 06, 2022 09:51 AM IST
ವಡಕಂಚೇರಿ ಸಮೀಪ ಭೀಕರ ರಸ್ತೆ ಅಪಘಾತ; ದುರಂತಕ್ಕೀಡಾಗಿ ಮಗುಚಿದ್ದ ಬಸ್ನಲ್ಲಿದ್ದವರನ್ನು ರಕ್ಷಿಸಿ, ಬಸ್ ಅನ್ನು ತೆರವುಗೊಳಿಸುವ ಕಾರ್ಯಾಚರಣೆ ನಿನ್ನೆ ತಡರಾತ್ರಿ ನಡೆಯಿತು.
- Vadakkencherry accident: ಅತಿವೇಗದಲ್ಲಿ ಬಂದ ಟೂರಿಸ್ಟ್ ಬಸ್ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಐದು ಮಕ್ಕಳು ಸೇರಿ 9 ಜನ ದುರ್ಮರಣಕ್ಕೀಡಾದರು.
ಪಾಲಕ್ಕಾಡ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಮತ್ತೊಂದು ಬಸ್ಗೆ ಪ್ರವಾಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಶಾಲಾ ಮಕ್ಕಳು ಸೇರಿ ಒಂಬತ್ತು ಜನರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ 12 ಗಂಟೆ ಸುಮಾರಿಗೆ ವಲಯಾರ್-ವಡಕಂಚೇರಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಐವರು ವಿದ್ಯಾರ್ಥಿಗಳು, ಮೂವರು ಕೆಎಸ್ಆರ್ಟಿಸಿ ಪ್ರಯಾಣಿಕರು ಮತ್ತು ಇನ್ನೊಬ್ಬರು ಬಸ್ ಉದ್ಯೋಗಿಯಾಗಿದ್ದಾರೆ. ಖಾಸಗಿ ಶಾಲೆಯ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸುತ್ತಿದ್ದಾಗ ಜಾರಿ ಬಸ್ ಹಿಂಬದಿಯಲ್ಲಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್ಗಳು ಪಲ್ಟಿಯಾಗಿವೆ. ನಜ್ಜುಗುಜ್ಜಾದ ಬಸ್ಗಳಲ್ಲಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ತ್ರಾಸಪಟ್ಟರು.
“ಇದೊಂದು ದುರದೃಷ್ಟಕರ ದುರ್ಘಟನೆ. ಮೃತದೇಹಗಳನ್ನು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಸರ್ಕಾರ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಿದೆ' ಎಂದು ಅಪಘಾತ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಚಿವ ಎಂ.ಬಿ.ರಾಜೇಶ್ ತಿಳಿಸಿದರು.
ಟೂರಿಸ್ಟ್ ಬಸ್ ಅತಿವೇಗದಲ್ಲಿದ್ದು, ಈ ಪ್ರದೇಶದಲ್ಲಿ ಸಣ್ಣಗೆ ತುಂತುರು ಮಳೆಯಾದ ಕಾರಣ ಬಸ್ ಜಾರಿಬಿದ್ದು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೊಟ್ಟಾರಕರದಿಂದ ಕೆಎಸ್ಆರ್ಟಿಸಿ ಸೂಪರ್ಫಾಸ್ಟ್ ಬಸ್ ಪಕ್ಕದ ತಮಿಳುನಾಡಿನ ಕೊಯಮತ್ತೂರಿಗೆ ತೆರಳುತ್ತಿತ್ತು. ಟೂರಿಸ್ಟ್ ಬಸ್ನಲ್ಲಿ ಎರ್ನಾಕುಲಂನ ಬಸೆಲಿಯೋಸ್ ಹೈಯರ್ ಸೆಕೆಂಡರಿ ಶಾಲೆಯ ಶಾಲಾ ಮಕ್ಕಳು ಊಟಿಗೆ ಪ್ರವಾಸಕ್ಕೆ ತೆರಳಿದ್ದರು.
ಅಪಘಾತಕ್ಕೀಡಾ ಬಸ್ನ ಚಿತ್ರಗಳು ಇಲ್ಲಿವೆ ಗಮನಿಸಿ