Mangaluru News: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ಸಾವು
May 31, 2023 04:08 PM IST
ಸಾಲಿಯತ್
- Belthangady News: ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ ಪಡೆದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ನಿಧನರಾಗಿದ್ದಾರೆ.
ಮಂಗಳೂರು: ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಕೂಟಗಳಲ್ಲಿ ಪ್ರತಿನಿಧಿಸಿದ್ದ ಆಟಗಾರ್ತಿ ಸಾಲಿಯತ್ (saliat) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಾಲಿಯತ್ ಅವರಿಗೆ ಕೇವಲ 24 ವರ್ಷವಾಗಿತ್ತು.
ಉಜಿರೆ ಎಸ್ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯೂ ಆಗಿದ್ದ ಸಾಲಿಯತ್, ಮೂಲತಃ ಬೆಳ್ತಂಗಡಿ ತಾಲೂಕಿನ ಪಡಂಗಡಿ ಪೊಯ್ಯೇಗುಡ್ಡೆ ನಿವಾಸಿ. ಪ್ರಸ್ತುತ ವಿವಾಹವಾಗಿ ಒಂದು ವರ್ಷವಾಗಿ ಚಿಕ್ಕಮಗಳೂರಿನ ಪತಿಯ ಮನೆಯಲ್ಲಿದ್ದರು. ಹೃದಯಬೇನೆಯಿಂದ ಮಂಗಳೂರು ಖಾಸಗಿ ಆಸ್ಪತ್ತೆಗೆ ದಾಖಲಾಗಿದ್ದರು. ಆದರೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ.
ಕ್ರೀಡಾಸಾಧಕಿ
ಪಡಂಗಡಿಯಲ್ಲಿ ಪ್ರಾಥಮಿಕ, ಎಸ್ಡಿಎಂ ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9ನೇ ತರಗತಿ, ಮುಂಡಾಜೆಯಲ್ಲಿ 10ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿದ ಅವರು, ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು. ಆಗಿನಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಹೈದರ್ ಪಡಂಗಡಿ ಅವರ ಮಾರ್ಗದರ್ಶನದಲ್ಲಿ ಆರಂಭದ ತರಬೇತಿಯನ್ನು ಪಡೆದ ಸಾಲಿಯತ್, ಮುಂದೆ ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಆ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂಎಸ್ ಅವರ ಮಾರ್ಗದರ್ಶನದಲ್ಲಿ ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿದರು. ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ, ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತರುವಲ್ಲಿ ಇವರ ಕೊಡುಗೆ ಅಪಾರ.
ಮುಂದೆ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್ಡಿಎಂ ಕಾಲೇಜು ಉಜಿರೆಯಲ್ಲಿ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಮನ್ನಣೆ ಗಳಿಸಿದ್ದರು. ತರಬೇತುದಾರರಾದ ಉಜಿರೆ ಎಸ್ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಮಾರ್ಗದರ್ಶನದಲ್ಲಿ ರಾಜ್ಯ ತಂಡದ ಆಟಗಾರ್ತಿಯಾಗಿ ಮಿಂಚಿದ್ದರು.
ರಾಷ್ಟ್ರಮಟ್ಟದ ವಾಲಿಬಾಲ್ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಸಾಧನೆಯ ಪಟ್ಟಿಯಲ್ಲಿ ಸೇರಿದೆ. ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆದ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರಶಂಸಿಸಿ ಗೌರವಿಸಿದ್ದರು.
ವರದಿ: ಹರೀಶ ಮಾಂಬಾಡಿ, ಮಂಗಳೂರು
ಇದನ್ನೂ ಓದಿ : Mangaluru Airport: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗೆ ಒತ್ತು; 2.4 ಕಿ.ಮೀ. ಉದ್ದ ರನ್ವೇ 75 ದಿನಗಳಲ್ಲಿ ಮರು ನಿರ್ಮಾಣ
ಕಾಂಕ್ರೀಟ್ ರನ್ವೇ ಮೇಲೆ ಡಾಂಬರು ಅಳವಡಿಸುವುದು ಭಾರತದಲ್ಲಿಯೇ ಮೊದಲು. ಮರುನಿರ್ಮಾಣ ಕಾರ್ಯಾಚರಣೆಯ ಸಮಯದಲ್ಲಿ ರನ್ವೇಯಲ್ಲಿ ಪ್ರತಿದಿನ ಸರಾಸರಿ 36 ವಿಮಾನ ಚಲನೆಗಳಿಗೆ ಅವಕಾಶ. 81696 ಟನ್ ಡಾಂಬರು. 2.51 ಲಕ್ಷ ಮಾನವ ಗಂಟೆಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.4 ಕಿ.ಮೀ ಉದ್ದದ ರನ್ ವೇಯನ್ನು 75 ದಿನಗಳಲ್ಲಿ ಮರುನಿರ್ಮಾಣ ಮಾಡಿದ ಸಂದರ್ಭದ ವೈಶಿಷ್ಟ್ಯಗಳಿವು. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ