Salman Butt: 'ತಪ್ಪು ಬಿಸಿಸಿಐ ಆಯ್ಕೆ ಸಮಿತಿಯದ್ದು'; 'ಬಾಬರ್ ಅನ್ನು ನೋಡಿ' ಎಂದು ಕೆಎಲ್ ಸಮರ್ಥಿಸಿದ ಪಾಕ್ ಮಾಜಿ ಕ್ರಿಕೆಟಿಗ
Mar 19, 2023 01:38 PM IST
ಬಾಬರ್, ರಾಹುಲ್
- ರಾಹುಲ್ ಜೊತೆ ಬಿಸಿಸಿಐ ಸರಿಯಾದ ಸಂವಹನ ನಡೆಸಬೇಕಿತ್ತು. ಫಾರ್ಮ್ನಲ್ಲಿ ಇಲ್ಲದಿದ್ದಾಗಲೂ ಅವರನ್ನು ಆಡಿಸಿ, ಆನಂತರ ದೂರುವುದು ಸರಿಯಲ್ಲ ಎಂದು ಬಟ್ ತಿಳಿಸಿದ್ದಾರೆ.
ಮುಂಬೈನಲ್ಲಿ ಪ್ರವಾಸಿ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯಿತು. ತಂಡವು ಆಸ್ಟ್ರೇಲಿಯಾವನ್ನು 188 ರನ್ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಪ್ರತಿಯಾಗಿ ಇನ್ನೂ 10 ಓವರ್ಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು. ಫಾರ್ಮ್ ಸಮಸ್ಯೆಯಿಂದ ಗಮನಾರ್ಹ ಟೀಕೆಗಳನ್ನು ಎದುರಿಸುತ್ತಿದ್ದ ಕೆಎಲ್ ರಾಹುಲ್, 91 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ಭಾರತವನ್ನು ಕಠಿಣ ಸನ್ನಿವೇಶದಿಂದ ಸನ್ನಿವೇಶದಿಂದ ಪಾರು ಮಾಡಿದರು. ರವೀಂದ್ರ ಜಡೇಜಾ ಅಜೇಯ 45 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.
ಆಟದ ನಂತರ, ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ರಾಹುಲ್ ಅವರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ ಫಾರ್ಮ್ಗೆ ಪುನರಾಗಮನ ಮಾಡಿದ್ದಕ್ಕಾಗಿ ಕೊಂಡಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಅವರು, ಬಿಸಿಸಿಐ ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ ಮೇಲೆ ಬಿಸಿಸಿಐ ಅನಗತ್ಯ ಒತ್ತಡ ಹೇರಿದೆ ಎಂದು ಅವರು ಆರೋಪಿಸಿದ್ದಾರೆ
ರಾಹುಲ್ ಜೊತೆ ಬಿಸಿಸಿಐ ಸರಿಯಾದ ಸಂವಹನ ನಡೆಸಬೇಕಿತ್ತು. ಫಾರ್ಮ್ನಲ್ಲಿ ಇಲ್ಲದಿದ್ದಾಗಲೂ ಅವರನ್ನು ಆಡಿಸಿ, ಆನಂತರ ದೂರುವುದು ಸರಿಯಲ್ಲ ಎಂದು ಬಟ್ ತಿಳಿಸಿದ್ದಾರೆ.
“ಯಾವಾಗಲೂ ಟೀಕೆ ಇದ್ದೇ ಇರುತ್ತದೆ. ನೀವು ಚೆನ್ನಾಗಿ ಆಡಿದಾಗ ಜನ ನಿಮ್ಮನ್ನು ಹೊಗಳಲು ಕಾಯುತ್ತಿರುತ್ತಾರೆ. ಅದೇ ರೀತಿ ನೀವು ಚೆನ್ನಾಗಿ ಆಡದಿದ್ದರೆ, ನೀವು ಟೀಕೆಗೆ ಗುರಿಯಾಗುತ್ತೀರಿ. ನೀವು ಬಾಬರ್ ಆಜಮ್ ಅವರನ್ನು ನೋಡಿ. ಆತ ಏನೇ ಮಾಡಿದರೂ ಜನರು ಅವನನ್ನು ಟೀಕಿಸುತ್ತಲೇ ಇರುತ್ತಾರೆ. ಕೆಲವರಿಗೆ ಟೀಕಿಸುವುದನ್ನು ಬಿಟ್ಟು ಬೇರೇನೂ ಗೊತ್ತೇ ಇರುವುದಿಲ್ಲ.” ಎಂದು ರಾಹುಲ್ ಬಗ್ಗೆ ಮಾತನಾಡುತ್ತಾ ಬಟ್ ಹೇಳಿದ್ದಾರೆ.
“ರಾಹುಲ್ ಪ್ರಕರಣದಲ್ಲಿ ಬಿಸಿಸಿಐ ಆಯ್ಕೆ ಸಮಿತಿಯನ್ನೂ ದೂಷಿಸಬೇಕು ಎಂದು ನಾನು ಭಾವಿಸುತ್ತೇನೆ. ನೀವು ಫಾರ್ಮ್ನಲ್ಲಿ ಇಲ್ಲದ ರಾಹುಲ್ ಅವರನ್ನು ಆಡಿಸುತ್ತಲೇ ಬಂದಿದ್ದೀರಿ. ಉತ್ತಮ ಫಾರ್ಮ್ನಲ್ಲಿದ್ದ ಶುಬ್ಮನ್ ಗಿಲ್ ಅವರನ್ನು ಬೆಂಚ್ನಲ್ಲಿ ಕೂರಿಸಿದ್ರಿ. ಆಗಲೂ ರಾಹುಲ್ ಅವರನ್ನು ಆಡಿಸಿ ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ನಡೆಸಿದಿರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಅಲ್ಲಿ ಇತರ ಕೆಲ ಉತ್ತಮ ಮಾರ್ಗಗಳು ಕೂಡಾ ಇತ್ತು. ನೀವು ಅವರೊಂದಿಗೆ ಸರಿಯಾಗಿ ಸಂವಹನ ಮಾಡಬೇಕಿತ್ತು. ಒಂದು ವೇಳೆ ಸರಿಯಾದ ಮಾತುಕತೆ ನಡೆಸಿದ್ದರೆ, ನೀವು ಅವರನ್ನು ಅನಗತ್ಯ ಟೀಕೆಗಳಿಂದ ರಕ್ಷಿಸಬಹುದಿತ್ತು” ಎಂದು ಬಟ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದರು.
ರಾಹುಲ್ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ಗಳಲ್ಲಿ ಆಡಿದ್ದರು. ಕಳಪೆ ಪ್ರದರ್ಶನದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು.