Sourav Ganguly: ತೆರೆ ಮೇಲೆ ಬರ್ತಿದೆ ದಾದಾ ಬಯೋಪಿಕ್; ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಟಾರ್ ನಟ; ಧೋನಿ ಕೂಡಾ ಇರ್ತಾರಂತೆ
Feb 22, 2023 07:27 PM IST
ಸೌರವ್ ಗಂಗೂಲಿ (ಸಾಂದರ್ಭಿಕ ಚಿತ್ರ)
Sourav Ganguly: ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್, 3 ಐಸಿಸಿ ಟ್ರೋಫಿ ಗೆದ್ದ MS ಧೋನಿ ಚಿತ್ರವಂತೂ ಸೂಪರ್ ಡೂಪರ್ ಹಿಟ್ ಆಗಿ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಸೂಪರ್ ಸ್ಟಾರ್ ಆಗಿಸಿದ್ದೂ ಆಯ್ತು. ಇಷ್ಟೆಲ್ಲಾ ಆದ ಮೇಲೆ ದಾದಾರ ಬಯೋಪಿಕ್ ಯಾಕೆ ಬರ್ತಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆ ನಿರೀಕ್ಷೆ ಸವಿಯಾಗುವ ಸಮಯ ಬಂದಾಗಿದೆ.
ಸೌರವ್ ಗಂಗೂಲಿ (Sourav Ganguly) .. ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ನಾಯಕ.. ಈ ಹೆಸರು ಕೇಳಿದರೆ ಸಾಕು ಇಂದಿಗೂ ಒಂದು ಜನರೇಶನ್ ಕ್ರಿಕೆಟ್ ಪ್ರೇಮಿಗಳ ಎದೆ ಉಬ್ಬುತ್ತದೆ. ರೋಮಾಂಚನವಾಗುತ್ತದೆ. ಎಲೆ ಎತ್ತಿ ಹೇಳುತ್ತಾರೆ ಗಂಗೂಲಿ ಗತ್ತು ಹೇಗಿತ್ತು ಅಂತ.!! ಸೋತು ಸುಣ್ಣವಾಗಿದ್ದ ಭಾರತೀಯ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದ ಎಂಟೆದೆಯ ಭಂಟ.. ವಿದೇಶದಲ್ಲೂ ಸರಣಿಗಳನ್ನು ಗೆದ್ದು ನಾವ್ಯಾರಿಗೂ ಕಡಿಮೆ ಇಲ್ಲ ಎನ್ನುವ ಅದಮ್ಯ ಆತ್ಮವಿಶ್ವಾಸ ತುಂಬಿದ್ದು ಕೂಡ ಇದೇ ಬಂಗಾಳದ ಹುಲಿ ದಾದಾ.!!
ಭಾರತೀಯ ಕ್ರಿಕೆಟ್ ಹಣೆಬರಹವನ್ನೇ ಬದಲಿಸಿದ ಈ ಬಂಗಾಳದ ಮಹಾರಾಜ ಭಾರತದಲ್ಲಿ ಕ್ರಿಕೆಟ್ ಹುಚ್ಚು ಹೆಚ್ಚಿಸಿದ್ದರು. 2000ರ ಅವಧಿಯಲ್ಲಿ ಟೀಮ್ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಅವಮಾನಕ್ಕೆ ಒಳಗಾಗಿತ್ತು. ಅಂತಹ ಸಂಕಷ್ಟದ ಸಂದರ್ಭದಲ್ಲಿ ತಂಡದ ಜವಾಬ್ದಾರಿ ಹೊತ್ತ ಗಂಗೂಲಿ, ಹೊಸ ಭಾಷ್ಯ ಬರೆದರು. ಇದೆಲ್ಲದರ ಜೊತೆಗೆ ಕ್ರಿಕೆಟ್ ನಲ್ಲಿ ಹೊಸ ಕ್ರಾಂತಿಕಾರಿಯನ್ನು ಸೃಷ್ಟಿಸಿದ ದಾದಾ, ಲೆಜೆಂಡರಿ ಕ್ರಿಕೆಟರ್ ಗಳನ್ನೂ ಹುಟ್ಟುಹಾಕಿದ್ದರು. ಅತ್ಯಂತ ಯಶಸ್ವಿ ನಾಯಕ ಕೂಡ ಹೌದು.
ಆದರೆ ಇಂಥ ಸೌರವ್ ಗಂಗೂಲಿಯನ್ನೇ ನಾಯಕ ಸ್ಥಾನದಿಂದ ಕೆಳಗಿಳಿಸಿ, ತಂಡದಿಂದ ಕೈ ಬಿಟ್ಟಾಗ ಕಣ್ಣೀರು ಹಾಕದೇ ಇದ್ದ ಕ್ರಿಕೆಟ್ ಪ್ರೇಮಿಯೇ ಇರಲಿಲ್ಲ.
ಇಂಥ ದಾದಾ ಬಿಸಿಸಿಐ ಅಧ್ಯಕ್ಷರಾಗಿಯೂ ಮತ್ತೆ ಟೀಮ್ ಇಂಡಿಯಾಕ್ಕೆ ಅಂಥದ್ದೇ ಖದರ್ ತಂದಿದ್ದರು. ಅವರ ಕ್ರಿಕೆಟ್ ಜರ್ನಿ ಕೇಳುತ್ತಾ ಹೋದರೆ ಯಾವ ಸಿನಿಮಾಗೂ ಕಡಿಮೆಯೇ ಇಲ್ಲ. ಆದರೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ಎಂ.ಎಸ್ ಧೋನಿ ಇವರೆಲ್ಲರ ಆತ್ಮಚರಿತ್ರೆ ಚಲನಚಿತ್ರವಾಗಿ ಬಂದಿದ್ದೂ ಆಯ್ತು.. ಅದರಲ್ಲೂ ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್, ಮೂರು ಐಸಿಸಿ ಟ್ರೋಫಿ ಗೆದ್ದ MS ಧೋನಿ ಚಿತ್ರವಂತೂ ಸೂಪರ್ ಡೂಪರ್ ಹಿಟ್ ಆಗಿ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಸೂಪರ್ ಸ್ಟಾರ್ ಆಗಿಸಿದ್ದೂ ಆಯ್ತು. ಇಷ್ಟೆಲ್ಲಾ ಆದ ಮೇಲೆ ದಾದಾರ ಬಯೋಪಿಕ್ ಯಾಕೆ ಬರ್ತಿಲ್ಲ ಅಂತಾ ಅವರ ಅಭಿಮಾನಿಗಳಿಗೆ ಪ್ರಶ್ನೆ ಕಾಡುತ್ತಲೇ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆ ನಿರೀಕ್ಷೆ ಸವಿಯಾಗುವ ಸಮಯ ಬಂದಾಗಿದೆ.
ಹೌದು..! ದಾದಾರ ಬಯೋಪಿಕ್ ಶೀಘ್ರದಲ್ಲೇ ಸೆಟ್ಟೇರಲಿದೆ. ಮತ್ತೊಂದು ವಿಶೇಷ ಅಂದರೆ, ಬಾಲಿವುಡ್ ಸ್ಟಾರ್ ನಟ ಬಯೋಪಿಕ್ನಲ್ಲಿ ಗಂಗೂಲಿ ಪಾತ್ರದಲ್ಲಿ ನಟಿಸಲಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಆಪ್ತ ಮೂಲಗಳ ಪ್ರಕಾರ ರಣಬೀರ್ ಕಪೂರ್, ದಾದಾ ಕ್ರಿಕೆಟ್ ಜರ್ನಿಗೆ ಹೀರೋ ಆಗಲಿದ್ದಾರೆ ಎಂಬುದು ಖಚಿತವಾಗಿದೆ. ಈ ಹಿಂದೆ ರಣಬೀರ್ ಕಪೂರ್ ಡೇಟ್ ಸಮಸ್ಯೆಗಳಿಂದ, ಬಯೋಪಿಕ್ ನಿಂದ ಹಿಂದೆ ಸರಿದಿದ್ದರಂತೆ. ಬಳಿಕ ಅವರೇ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರ ಬಂದಿಲ್ಲ.
2019ರಲ್ಲಿ ಗಂಗೂಲಿ ಬಯೋಪಿಕ್ ನಲ್ಲಿ ಹೃತಿಷ್ ರೋಷನ್, ರಣಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿ ಬಾಲಿವುಡ್ ಟಾಪ್ ನಟರು ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಅಂತಿಮವಾಗಿ ರಣಬೀರ್ ಹೆಸರು ಫೈನಲ್ ಆಗಿದೆ. ಇನ್ನೂ ಈ ಬಯೋಪಿಕ್ ನಲ್ಲಿ ಧೋನಿಯೂ ಇರಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಆದರೆ ನಿರ್ದೇಶಕ, ನಿರ್ಮಾಪಕ ಯಾರು ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಕೊಲ್ಕತ್ತಾದಲ್ಲಿ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ರಣಬೀರ್ ಕಪೂರ್, ಕೊಲ್ಕತ್ತಾದಲ್ಲಿರುವ ಸೌರವ್ ಗಂಗೂಲಿ ಅವರ ಮನೆಗೆ, ಐಕಾನಿಕ್ ಈಡನ್ ಗಾರ್ಡನ್, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಸ್ಟಾರ್ ನಟಿ ಕರೀನಾ ಕಪೂರ್ ಸಹ ಸ್ಕ್ರಿಪ್ಟ್ ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಟೌನ್ ಮೂಲಗಳು ಹೇಳುತ್ತಿವೆ. ದೊಡ್ಡ ತಾರಾಗಣವನ್ನೇ ಹುಡುಕುತ್ತಿದ್ದಾರಂತೆ ನಿರ್ಮಾಪಕರು.
ದಾದಾ ಬಯೋಪಿಕ್ ದೊಡ್ಡ ಬಜೆಟ್ ನಲ್ಲಿ ತಯಾರಾಗಲಿದ್ದು, ದೊಡ್ಡ ಪ್ರೌಡಕ್ಷನ್ ಹೌಸ್ವೊಂದು 200-250 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದೇಳಲಾಗುತ್ತಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಮುಗಿದಿವೆ. ಈ ಹಿಂದೆ ತಮ್ಮ ಬಯೋಪಿಕ್ ಸಿನಿಮಾಗೆ ಖುದ್ದು ದಾದಾನೇ ಅನುಮತಿ ನೀಡಿರುವ ಬಗ್ಗೆ ಸ್ಪಷ್ಟಪಡಿಸಿದ್ದರು. ಒಟ್ನಲ್ಲಿ ಈ ಸುದ್ದಿ ಕೇಳಿ ದಾದಾರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ತಮ್ಮ ನೆಚ್ಚಿನ ಆಟಗಾರನ ರೋಚಕ ಕ್ರಿಕೆಟ್ ಜರ್ನಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರೋದಂತೂ ಸುಳ್ಳಲ್ಲ.