India vs Sri Lanka 3rd T20I: ಸೂರ್ಯಕುಮಾರ್ ಭರ್ಜರಿ ಶತಕ; ಲಂಕಾ ಸರಣಿ ಗೆಲುವಿಗೆ ಬೃಹತ್ ಗುರಿ ನೀಡಿದ ಭಾರತ
Jan 07, 2023 10:37 PM IST
ಸೂರ್ಯಕುಮಾರ್ ಯಾದವ್
- ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ ಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ.
ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದಾರೆ. ಲಂಕಾ ವಿರುದ್ಧ ಸ್ಫೋಟಕವಾಗಿ ಆಡಿದ ಸೂರ್ಯ ಟಿ20ಯಲ್ಲಿ ಮೂರನೇ ಶತಕ ಸಿಡಿಸಿ ಮಿಂಚಿದರು.
ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ ಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ. ಸರಣಿ ಗೆಲ್ಲಲು ಉಭಯ ತಂಡಗಳಿಗೆ ಇಂದು ಮಾಡಿ ಇಲ್ಲವೇ ಮಡಿ ಪಂದ್ಯವಾಗಿದ್ದು, ಭಾರತ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿದೆ. ಆ ಮೂಲಕ ಲಂಕಾ ಗೆಲುವಿಗೆ 229 ರನ್ಗಳ ಬೃಹತ್ ಗುರಿ ನೀಡಿದೆ.
ಇದು ಸೂರ್ಯಕುಮಾರ್ ಯಾದವ್ಗೆ ಟಿ20ಯಲ್ಲಿ ಮೂರನೇ ಶತಕ. ಅಲ್ಲದೆ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ವೇಗದ ಶತಕ ದಾಖಲಿಸಿದ ಖ್ಯಾತಿಗೆ ಸೂರ್ಯ ಪಾತ್ರರಾಗಿದ್ದಾರೆ. ದೇಶದ ಪರ ವೇಗದ ಶತಕ ದಾಖಲಿಸಿದ ಕೀರ್ತಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಲ್ಲುತ್ತದೆ.
ಭಾರತದ ಪರ ಅತಿ ವೇಗದ ಟಿ20 ಶತಕಗಳು
ರೋಹಿತ್ ಶರ್ಮಾ - 35 ಎಸೆತ (2017)
ಸೂರ್ಯಕುಮಾರ್ ಯಾದವ್ - 45 (2023) ಇಂದು
ಕೆ ಎಲ್ ರಾಹುಲ್ - 46 (2016)
ಸೂರ್ಯಕುಮಾರ್ ಯಾದವ್ - 48 (2022)
ಸೂರ್ಯಕುಮಾರ್ ಯಾದವ್ - 49 (2022)
ವಿಶೇಷವೆಂದರೆ, ಸೂರ್ಯ ಸಿಡಿಸಿದ ಮೂರೂ ಶತಕಗಳು ಈ ಪಟ್ಟಿಯಲ್ಲಿವೆ.
ಅತಿಥೇಯ ಭಾರತದ ವಿರುದ್ಧ ಇದುವರೆಗೂ ಲಂಕಾ ಭಾರತದಲ್ಲಿ ಸರಣಿ ಗೆದ್ದಿಲ್ಲ. ಹೀಗಾಗಿ ತಮ್ಮ ಮೊದಲ ಸರಣಿ ಗೆಲುವಿನ ಮೇಲೆ ಶನಕ ನೇತೃತ್ವದ ತಂಡ ಕಣ್ಣಿಟ್ಟಿದೆ. ಇದಕ್ಕೆ ಅಡ್ಡಿಪಡಿಸಿರುವ ಭಾರತ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಅಮೋಘ ಆಟ ಪ್ರದರ್ಶಿಸಿದೆ. ಯಾದವ್ 51 ಎಸೆತಗಳಲ್ಲಿ 112 ರನ್ ಸಿಡಿಸಿ ಅಜೇಯರಾಗಿ ಉಳಿದರು. ಡೆತ್ ಓವರ್ಗಳಲ್ಲಿ ಯಾದವ್ ಜತೆಗೂಡಿದ ಅಕ್ಷರ್ ಪಟೇಲ್, 9 ಎಸೆತಗಳಲ್ಲಿ ನಿರ್ಣಾಯಕ 21 ರನ್ ಗಳಿಸಿದರು.
ಟಿ20ಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತೀಯ ಬ್ಯಾಟರ್, ಭಾರತ 52 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಕ್ರೀಸ್ಗೆ ಬಂದರು. ಆರಂಭದಲ್ಲಿ ಶುಭಮನ್ ಗಿಲ್ ಜತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಕೇವಲ 26 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದ ಸೂರ್ಯ, ಬಳಿಕ ಅದೇ ವೇಗದಲ್ಲಿ ಶತಕ ಗಳಿಸಿದರು.
ಕೆ ಎಲ್ ರಾಹುಲ್ ಸ್ಟೇಟಸ್ ಅರ್ಥವೇನು?
ಭಾರತದ ಇನ್ನಿಂಗ್ಸ್ ಮುಗಿಯುತ್ತಿದ್ದಂತೆಯೇ, ಕನ್ನಡಿಗ ಕೆ ಎಲ್ ರಾಹುಲ್ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದಾರೆ. ಇಂಗ್ಲೀಷ್ ಅಕ್ಷರಗಳಲ್ಲಿ ಹಾಕಿರುವ ಇದರ ಬರಹವನ್ನು ಓದಿದ ಹಲವರಿಗೆ ಅದರ ಅರ್ಥ ಏನೆಂಬುದು ಗೊತ್ತಾಗಿಲ್ಲ. ‘Baari yedde gobbiya’ ಎಂದು ರಾಹುಲ್ ಬರೆದಿರುವ ಈ ವಾಕ್ಯದ ಅರ್ಥ ತಿಳಿಯಲು ಹಲವರು ಪ್ರಯತ್ಮ ಪಟ್ಟಿದ್ದಾರೆ.
ಇದು ತುಳು ವಾಕ್ಯವಾಗಿದ್ದು, ಇದರ ಅರ್ಥ ‘ತುಂಬಾ ಚೆನ್ನಾಗಿ ಆಡಿದ್ದೀಯಾ’ ಎಂದಾಗಿದೆ. ಈ ಸ್ಟೇಟಸ್ನಲ್ಲಿ ರಾಹುಲ್ ಅವರು ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿಯವರನ್ನು ಟ್ಯಾಗ್ ಮಾಡಿದ್ದಾರೆ. ದೇವಿಶಾ ಉಡುಪಿ ಮೂಲದವರಾಗಿದ್ದು, ತುಳು ಮಾತನಾಡಬಲ್ಲರು. ಅಲ್ಲದೆ ರಾಹುಲ್ ಕೂಡಾ ಮಂಗಳೂರು ಮೂಲದವರು. ಇವರು ಕೂಡಾ ತುಳು ಬಲ್ಲರು. ಪತ್ನಿ ಹಾಗೂ ರಾಹುಲ್ ಜತೆಗೂಡಿ ಸೂರ್ಯ ಕೂಡಾ ಅಲ್ಪಸ್ವಲ್ಪ ತುಳು ಮಾತನಾಡುತ್ತಾರೆ. ಹೀಗಾಗಿ ರಾಹುಲ್ ತುಳು ಭಾಷೆಯಲ್ಲಿ ಬರೆದು ಸ್ಟೇಟಸ್ ಹಾಕಿದ್ದಾರೆ.