IND vs SA 2nd T20: 'ಏನ್ ಕರ್ಮ ಗುರು; ಮೊದಲು ಹಾವು ಬಂತು, ಆಮೇಲೆ ಲೈಟ್ ಹಾಳಾಯ್ತು' -ನೆಟ್ಟಿಗರು ಗರಂ
Oct 03, 2022 09:09 AM IST
ಗುವಾಹಟಿ ಮೈದಾನದಲ್ಲಿ ಎರಡೆರಡು ದೋಷ
- ನಿನ್ನೆಯ ಪಂದ್ಯವನ್ನು ಮನೆಯಲ್ಲಿ ಕುಳಿತು ಲೈವ್ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಹೆಚ್ಚು ಕೋಪ ಬಂದಿರುವಂತಿದೆ. ಇದನ್ನು ವ್ಯಕ್ತಪಡಿಸಲು ಜನರು ಟ್ವಿಟರ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಹರಿಬಿಟ್ಟಿದ್ದಾರೆ.
ಗುವಾಹಟಿ: ಇಲ್ಲಿನ ಬರ್ಸಾಪರಾ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದ ಲೈವ್ ವೀಕ್ಷಿಸಿದವರಿಗೆ, ಪಂದ್ಯದ ಹೊರತಾಗಿ ಎರಡು ವಿಚಾರಗಳು ಗಮನಕ್ಕೆ ಬಂದಿರುತ್ತದೆ. ಇದೇ ವಿಚಾರವಾಗಿ ಈಗ ನೆಟ್ಟಿಗರು ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅತ್ತ ಗುವಾಹಟಿ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ರನ್ ಮಳೆ ಸುರಿದರೆ, ಆ ಎರಡು ಘಟನೆಯಿಂದ ಅಭಿಮಾನಿಗಳು ಕೆಲಕಾಲ ತಾಳ್ಮೆ ಕಳೆದುಕೊಂಡರು. ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈದಾನದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳಿಗಿಂತ, ಮನೆಯಲ್ಲಿ ಕುಳಿತು ಲೈವ್ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಹೆಚ್ಚು ಕೋಪ ಬಂದಿರುವಂತಿದೆ. ಇದನ್ನು ವ್ಯಕ್ತಪಡಿಸಲು ಜನರು ಟ್ವಿಟರ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಹರಿಬಿಟ್ಟಿದ್ದಾರೆ.
ಮೈದಾನದಲ್ಲಿ ಹಾವು ಪ್ರತ್ಯಕ್ಷ
ಮೊದಲು ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮೈದಾನಕ್ಕೆ ಅಪರೂಪದ ಅತಿಥಿಯೊಂದು ಬಂದಿತು. ಮೈದಾನದಲ್ಲಿ ನಿರ್ಭೀತಿಯಿಂದ ಓಡಾಡಿದ ಹಾವಿನ ಮರಿಯೊಂದು, ಕೆಲಕಾಲ ಆಟ ಸ್ಥಗಿತಗೊಳ್ಳುವಂತೆ ಮಾಡಿತು. ಕೊನೆಗೆ ಮೈದಾನದ ಸಿಬ್ಬಂದಿ ಬಕೆಟ್ ಹಾಗೂ ಕೋಲು ಸಮೇತರಾಗಿ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದು ಹೊರಬಿಟ್ಟರು. ಒಂದು ಲೆಕ್ಕದಲ್ಲಿ ಹಾವಿನ ಪ್ರವೇಶ ಭಾರತಕ್ಕೆ ಶುಭವಾದಂತೆ ತೋರುತ್ತಿದೆ. ಆ ಬಳಿಕ ಭಾರತ ದೊಡ್ಡ ಇನ್ನಿಂಗ್ಸ್ ಕಟ್ಟಿತು.
ಲೈಟ್ ಆಫ್
ಇದಾದ ಬಳಿಕ ಭಾರತ ಗಳಿಸಿದ ಬೃಹತ್ ಮೊತ್ತವನ್ನು ಚೇಸ್ ಮಾಡಲು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಆರಂಭಿಸಿತು. ದಕ್ಷಿಣ ಆಫ್ರಿಕಾದ ರನ್ ಚೇಸ್ನ ಮೂರನೇ ಓವರ್ನಲ್ಲಿ ಮತ್ತೊಮ್ಮೆ ಪಂದ್ಯ ಮೊಟಕುಗೊಂಡಿತು. 2.1 ಓವರ್ಗಳಿಗೆ ಹರಿಣಗಳು 5/2ರಲ್ಲಿ ರನ್ ಗಳಿಸಿ ಅಪಾಯದ ಹಂತದಲ್ಲಿದ್ದರು. ಈ ವೇಳೆ ಮೈದಾನದ ಒಂದು ಲೈಟ್ ಟವರ್ ಕೆಟ್ಟು ಹೋಯ್ತು. ಇದರಿಂದಾಗಿ ಮೈದಾನಕ್ಕೆ ಬೆಳಕು ಕಡಿಮೆಯಾಯ್ತು. ಟವರ್ನ ಎಲ್ಲಾ ಲೈಟ್ಗಳು ಆಫ್ ಆಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆ ಬಳಿಕ ಅದನ್ನು ಸರಿಪಡಿಸಲಾಗಿ ಪಂದ್ಯ ಮತ್ತೆ ಆರಂಭವಾಯ್ತು.
ಮೈದಾನದ ಫ್ಲಡ್ ಲೈಟ್ ಟವರ್ನಲ್ಲಿನ ವೈಫಲ್ಯ ಮತ್ತು ಹಾವಿನ ಹಠಾತ್ ಆಗಮನದಿಂದ ಆಟ ಕೆಲಹೊತ್ತು ನಿಂತಿದ್ದಕ್ಕೆ, ಟ್ವಿಟ್ಟರ್ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು. ಮೈದಾನದಲ್ಲಿನ ವ್ಯವಸ್ಥೆಗಾಗಿ ಬಿಸಿಸಿಐ ಅನ್ನು ಟ್ರೋಲ್ ಮಾಡಿದರು.
ಭಾರತಕ್ಕೆ ಜಯ
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕೆ ಎಲ್ ರಾಹುಲ್ ವೈಭವದ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಕಳೆದುಕೊಂಡು 237 ರನ್ ಸಿಡಿಸಿತು. ಆರಂಭಿಕ ಆಘಾತದ ನಡುವೆ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಹರಿಣಗಳು, ಆದರೆ, ಹರಿಣಗಳ ಇನ್ನಿಂಗ್ಸ್ ಆರಂಭದಲ್ಲಿ ಸಪ್ಪೆಯಾಗಿದ್ದ ಕಾರಣ ದೊಡ್ಡ ರನ್ ಪೇರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ಮೂಲಕ ಭಾರತ 16 ರನ್ಗಳ ರೋಚಕ ಜಯ ಸಾಧಿಸಿತು.
ನಾಲ್ಕನೇ ವಿಕೆಟ್ಗೆ 174 ರನ್ಗಳ ಜೊತೆಯಾಟ ನೀಡಿದ ಡೇವಿಡ್ ಮಿಲ್ಲರ್ ಹಾಗೂ ಕ್ವಿಂಟನ್ ಡಿ ಕಾಕ್, ಭಾರತದಿಂದ ಜಯವನ್ನು ಕಿತ್ತುಕೊಳ್ಳುವಲ್ಲಿ ವಿಫಲರಾದರು. ಆರ್ಭಟಿಸಿದ ಮಿಲ್ಲರ್ ಶತಕ ವ್ಯರ್ಥವಾಯ್ತು.
ವಿಭಾಗ