ಜೈಲಿನಲ್ಲಿದ್ದುಕೊಂಡೇ ಬೆದರಿಕೆ, ಸುಕೇಶ್ ಚಂದ್ರಶೇಖರ್ ವಿರುದ್ಧ ಕಿರುಕುಳ ದೂರು ನೀಡಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್
Jacqueline Fernandez: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜೈಲಲ್ಲಿದ್ದುಕೊಂಡು ನನಗೆ ಆರೋಪಿ ಕಿರುಕುಳ ಮತ್ತು ಬೆದರಿಕೆ ನೀಡುತ್ತಿದ್ದಾನೆ ಎಂದು ದೂರು ನೀಡಲಾಗಿದೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. ಜೈಲಿನೊಳಗಿನಿಂದ ಸುಕೇಶ್ ನನಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜಾಕ್ವೆಲಿನ್ ಈ ಪತ್ರವನ್ನು ವಿಶೇಷ ಪೊಲೀಸ್ ಆಯುಕ್ತರಿಗೆ (ಅಪರಾಧ ವಿಭಾಗ) ಕಳುಹಿಸಿದ್ದಾರೆ. ದೂರಿನ ಕುರಿತು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲು ವಿಶೇಷ ಘಟಕ ರಚಿಸಲಾಗುತ್ತಿದೆ.
ಟ್ರೆಂಡಿಂಗ್ ಸುದ್ದಿ
ಜಾಕ್ವೆಲಿನ್ ಫೆರ್ನಾಂಡಿಸ್ ಪತ್ರದಲ್ಲಿ ಏನಿದೆ?
ಪ್ರಾಸಿಕ್ಯೂಷನ್ ಸಾಕ್ಷಿ ರಕ್ಷಣೆಯಲ್ಲಿ ವ್ಯವಸ್ಥಿತ ವೈಫಲ್ಯ ಎಂಬ ಸಬ್ಜೆಕ್ಟ್ ಲೈನ್ ಇರುವ ಈ ಪತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಹೀಗೆ ಬರೆದಿದ್ದಾರೆ. "ನಾನು ಜವಾಬ್ದಾರಿಯುತ ಪ್ರಜೆ. ಕಾನೂನಿನ ನಿಯಮ ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆಯ ಪಾವಿತ್ರ್ಯತೆ ಮೇಲೆ ದೂರಗಾಮಿ ಪರಿಣಾಮ ಹೊಂದಿರುವಂತಹ ಪ್ರಕರಣದಲ್ಲಿ ಅಜಾಗರೂಕತೆಯಿಂದ ಸಿಲುಕಿಕೊಂಡಿರುವೆ. ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಮಾನಸಿಕ ಒತ್ತಡ ಮತ್ತು ಬೆದರಿಕೆಯ ಘೋರ ಅಗ್ನಿಪರೀಕ್ಷೆ ಎದುರಿಸುತ್ತಿದ್ದು, ಈ ಕುರಿತು ನಿಮಗೆ ಪತ್ರ ಬರೆಯುತ್ತಿದ್ದೇನೆ. ಮಂಡೋಲಿ ಜೈಲಿನ ಕಂಬಿಗಳ ಹಿಂದೆ ಇರುವ ಸುಕೇಶ್ ಎಂಬ ವ್ಯಕ್ತಿಯೊಬ್ಬ ಆರೋಪಿಯಾಗಿದ್ದಾರೆ. ಆತ ನನಗೆ ವಿವಿಧ ರೀತಿಯ ಬೆದರಿಕೆಗಳನ್ನು ಹಾಕುತ್ತಿದ್ದಾನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೂಕ್ತ ಕ್ರಮಕೈಗೊಳ್ಳುವಂತೆ ವಿನಂತಿಸಿದ ಜಾಕ್ವೆಲಿನ್
ಈ ವಿಚಾರದಲ್ಲಿ ಪೊಲೀಸ್ ಆಯುಕ್ತರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಜಾಕ್ವೆಲಿನ್ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇದು ತನ್ನ ಸುರಕ್ಷತೆಗೆ ಧಕ್ಕೆ ತರುತ್ತದೆ ಮತ್ತು ಕಾನೂನು ಪ್ರಕ್ರಿಯೆಗಳ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಕೊಕಾ) ಅಡಿಯಲ್ಲಿರುವ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಆಕೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸುಕೇಶ್ ವಿರುದ್ಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
"ಈ ಘಟನೆಯು ಕೇವಲ ನನ್ನ ವೈಯಕ್ತಿಕ ಹಕ್ಕುಗಳ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಇದು ನಮ್ಮ ನ್ಯಾಯ ವ್ಯವಸ್ಥೆಯ ಹೃದಯಕ್ಕೆ ಹೊಡೆತ ನೀಡುತ್ತದೆ. ಆರೋಪಿಯು ಜೈಲಿನ ಒಳಗಿನಿಂದಲೇ ಬೆದರಿಕೆ ನೀಡುತ್ತಿದ್ದಾನೆ. ಆತನಿಗೆ ಲಭ್ಯವಿರುವ ಎಲ್ಲಾ ಸಂವಹನ ಚಾನೆಲ್ಗಳನ್ನು ಪರಿಶೀಲಿಸಿ. ಇಂತಹ ದುರುಪಯೋಗ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕಿದೆ" ಎಂದು ಜಾಕ್ವೆಲಿನ್ ಫೆರ್ನಾಂಡಿಸ್ ಹೇಳಿದ್ದಾರೆ.
ಏನಿದು ಪ್ರಕರಣ
ಸುಕೇಶ್ ಚಂದ್ರಶೇಖರ್ ತನಗೆ ಪತ್ರ, ಸಂದೇಶ ಅಥವಾ ಹೇಳಿಕೆ ಕಳುಹಿಸದಂತೆ ನಿರ್ದೇಶನ ನೀಡಬೇಕೆಂದು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಸುಕೇಶ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ತನಿಖೆ ನಡೆಸುತ್ತಿರುವ ಎಫ್ಐಆರ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.