ಕನ್ನಡ ಸುದ್ದಿ  /  ಮನರಂಜನೆ  /  Choo Mantar Poster: ಶರಣ್-ಅದಿತಿ ಪ್ರಭುದೇವ ಅಭಿನಯದ ಹಾರರ್‌ ಕಾಮಿಡಿ 'ಛೂ ಮಂತರ್' ಪೋಸ್ಟರ್‌ ರಿಲೀಸ್‌

Choo Mantar Poster: ಶರಣ್-ಅದಿತಿ ಪ್ರಭುದೇವ ಅಭಿನಯದ ಹಾರರ್‌ ಕಾಮಿಡಿ 'ಛೂ ಮಂತರ್' ಪೋಸ್ಟರ್‌ ರಿಲೀಸ್‌

ಚಿಕ್ಕ ವಯಸ್ಸಿನಿಂದಲೂ ಹಾರರ್ ಸಿನಿಮಾಗಳೆಂದರೆ ಇಷ್ಟ. ಸಾಕಷ್ಟು ಹಾರರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ‌ ಪ್ರೇಕ್ಷಕರಿಗೆ ಬಹಳ ನಿರೀಕ್ಷೆ ಇರುತ್ತದೆ‌.

 'ಛೂ ಮಂತರ್' ಪೋಸ್ಟರ್‌ ರಿಲೀಸ್‌
'ಛೂ ಮಂತರ್' ಪೋಸ್ಟರ್‌ ರಿಲೀಸ್‌

ವಿಭಿನ್ನ ಹಾಸ್ಯದ ಮೂಲಕವೇ ಸಿನಿಪ್ರಿಯರನ್ನು ನಕ್ಕು ನಗಿಸುವ ನಟ ಶರಣ್‌ ಹಾಗೂ ಚಿಕ್ಕಣ್ಣ ಮತ್ತೆ ಜೊತೆಯಾಗಿರುವುದು ತಿಳಿದಿರುವ ವಿಚಾರ. ಇಬ್ಬರೂ 'ಛೂ ಮಂತರ್' ಚಿತ್ರಕ್ಕಾಗಿ ಮತ್ತೆ ಜೊತೆಯಾಗಿದ್ದು, ಚಿತ್ರದ ಪೋಸ್ಟರ್‌ ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಚಿತ್ರತಂಡ ಹೊಸ ಅಪ್‌ಡೇಟ್‌ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, ''ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾ. ನಾನು ಹಾಗೂ ಮಾನಸ ತರುಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ನಿರ್ದೇಶಕ ನವನೀತ್ ಹಾಗೂ ನಾನು, ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರದಿಂದ ಆ ಚಿತ್ರ ಸ್ವಲ್ಪ ಮುಂದೆ ಹೋಯಿತು. ಅಷ್ಟರಲ್ಲಿ ನವನೀತ್, ಹಾರರ್‌ ಕಾಮಿಡಿ ಕಥಾ ಹಂದರ ಹೊಂದಿರುವ ಈ ಸ್ಕ್ರಿಪ್ಟ್‌ ರೆಡಿ ಮಾಡಿದ್ದರು. ಶರಣ್ ಹಾಗೂ ತರುಣ್ ಸುಧೀರ್ ಅವರ ಬಳಿ ಕಥೆ ಹೇಳಿದ್ದರು. ಇಬ್ಬರಿಗೂ ಕಥೆ ಹಿಡಿಸಿದ್ದರಿಂದ ಈ ಚಿತ್ರ ಆರಂಭವಾಯಿತು. ಬೆಂಗಳೂರು, ಮೈಸೂರು, ಉತ್ತರ ಕನ್ನಡ ಹಾಗೂ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶರಣ್ ಹಾಗೂ ಚಿಕ್ಕಣ್ಣ ಅವರೊಂದಿಗೆ ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. 'ಛೂ ಮಂತರ್' ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ'' ಎಂದರು.

ಚಿತ್ರದ ನಿರ್ದೇಶಕ ನವನೀತ್‌ ಮಾತನಾಡಿ, ''ಶರಣ್ ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ಇದೆ‌. 'ಛೂ ಮಂತರ್' ಎಂದರೆ ಫ್ಯಾನ್ಸಿ ವರ್ಡ್. ಈ ಪದ ಬಹಳ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿವೆ. ಎಲ್ಲಾ ಕಥೆಗಳಿಗೂ ನಾಯಕನೇ ಮೂಲ. ನನ್ನ ಕಥೆ ಕೇಳಿ ಶರಣ್ ಹಾಗೂ ತರುಣ್ ಸುಧೀರ್ ಇಷ್ಟಪಟ್ಟರು. ಇದೇ ಮೊದಲ ಬಾರಿಗೆ ಶರಣ್‌ ಹಾರರ್‌ ಚಿತ್ರದಲ್ಲಿ ನಟಿಸಿದ್ದಾರೆ. ‌ನಮ್ಮ ಚಿತ್ರದಲ್ಲಿ ಹಾರರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡಾ ಇದೆ'' ಎಂದರು.

 'ಛೂ ಮಂತರ್' ಪೋಸ್ಟರ್‌
'ಛೂ ಮಂತರ್' ಪೋಸ್ಟರ್‌

''ನನಗೆ ಚಿಕ್ಕ ವಯಸ್ಸಿನಿಂದಲೂ ಹಾರರ್ ಸಿನಿಮಾಗಳೆಂದರೆ ಇಷ್ಟ. ಸಾಕಷ್ಟು ಹಾರರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ‌ ಪ್ರೇಕ್ಷಕರಿಗೆ ಬಹಳ ನಿರೀಕ್ಷೆ ಇರುತ್ತದೆ‌. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಅನೂಪ್ ಅವರ ಛಾಯಾಗ್ರಹಣ ಈ ಚಿತ್ರದ ಮತ್ತೊಂದು ಹೈಲೆಟ್'' ಎಂದು ಶರಣ್‌ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

''ತರುಣ್ ಶಿವಪ್ಪ ನಿರ್ಮಾಣದ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು ಆದರೆ, ಸಾಧ್ಯವಾಗಿರಲಿಲ್ಲ, ಈ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ, ಚಿತ್ರದಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ'' ಎಂದು ಮೇಘನಾ ಗಾಂವ್ಕರ್‌ ಹೇಳಿದರೆ, ಚಿತ್ರದ ಮತ್ತೊಬ್ಬ ನಾಯಕಿ ಅದಿತಿ ಪ್ರಭುದೇವ ಮಾತನಾಡಿ, ''ನವನೀತ್ ಅವರ 'ಕರ್ವ' ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಶರಣ್ ಅವರೊಂದಿಗೆ ನಟಿಸುತ್ತಿರುವುದು ಬಹಳ ಖುಷಿ ಆಗುತ್ತಿದೆ. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ'' ಎಂದು ಇಬ್ಬರಿಗೂ ಧನ್ಯವಾದ ಅರ್ಪಿಸಿದರು. ರಜನಿ ಭಾರಧ್ವಾಜ್‌ ಹಾಗೂ ಪ್ರಭು ಮುಂಡ್ಕರ್‌ ಕೂಡಾ ಮಾತನಾಡಿ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

IPL_Entry_Point