ಕನ್ನಡ ಸುದ್ದಿ  /  Karnataka  /  Bangalore News Nirmala Sitharaman Presenting Budget 2024 Includes Railway Karnataka Demand High On Railway Projects Kub

Railways: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚಿದ ಬೇಡಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುವ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ಕೂಡ ಇರಲಿದ್ದು, ಕರ್ನಾಟಕದ ಹಲವಾರು ರೈಲು ಯೋಜನೆಗಳಿಗೆ ಬೇಡಿಕೆ ವ್ಯಕ್ತವಾಗಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರೈಲ್ವೆ ಬಜೆಟ್‌ ಕೂಡ ಮಂಡಿಸುವರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರೈಲ್ವೆ ಬಜೆಟ್‌ ಕೂಡ ಮಂಡಿಸುವರು.

ಬೆಂಗಳೂರು: ಕೇಂದ್ರ ಬಜೆಟ್‌ ಜತೆಗೆ ರೈಲ್ವೆ ಬಜೆಟ್‌ ಕೂಡ ಸೇರಿರುವುದರಿಂದ ಕರ್ನಾಟಕದ ಹಲವಾರು ರೈಲ್ವೆ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಒತ್ತು ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದರಲ್ಲೂ ಕರ್ನಾಟಕದ ರೈಲ್ವೆ ಮಾರ್ಗಗಳ ಉನ್ನತೀಕರಣ, ಹೊಸ ರೈಲುಗಳ ಮಾರ್ಗಗಳ ಬೇಡಿಕೆ, ಅನುದಾನ ಹಂಚಿಕೆ, ಹೊಸ ರೈಲುಗಳ ಆರಂಭದ ಹಲವಾರು ಬೇಡಿಕೆಗಳನ್ನು ಈಗಾಗಲೇ ರೈಲ್ವೆ ಅಧಿಕಾರಿಗಳು ಸಲ್ಲಿಸಿದ್ಧಾರೆ. ರೈಲು ಪ್ರಯಾಣಿಕರಿಂದಲೂ ಸಾಕಷ್ಟು ಬೇಡಿಕೆಗಳಿವೆ.

ಬೆಂಗಳೂರಿನಿಂದ ಹುಬ್ಬಳ್ಳಿ ಹಾಗೂ ಕಲಬುರಗಿಗೆ ಹೆಚ್ಚಿನ ರೈಲುಗಳ ಜತೆಗೆ ಮಾರ್ಗಗಳ ವಿದ್ಯುದೀಕರಣ ವೂ ಪೂನಾವರೆಗೆ ಆಗಬೇಕು ಎನ್ನುವ ಬೇಡಿಕೆಯೂ ಇದೆ. ಮೈಸೂರಿನಿಂದ ಕುಶಾಲನಗರ ಮಾರ್ಗದ ಬೇಡಿಕೆ ಹಳೆಯದ್ದು. ಇದಕ್ಕೂ ಹೆಚ್ಚಿನ ಅನುದಾನ ಮೀಸಲಿಟ್ಟು ಯೋಜನೆ ಆರಂಭಿಸುವ ಒತ್ತಡವೂ ಇದೆ. ದಾವಣಗೆರೆ- ತುಮಕೂರು, ವಿಜಯಪುರ- ಶಹಾಬಾದ್‌ ಮಾರ್ಗಗಳ ಕುರಿತು ಹೆಚ್ಚಿನ ಬೇಡಿಕೆಗಳಿವೆ.

ವಿಶೇಷ ರೈಲು ಅಧಿಕೃತಗೊಳಿಸಿ

ಕರ್ನಾಟಕದಲ್ಲಿ ಹಲವು ಪ್ರಾಯೋಗಿಕ ವಿಶೇಷ ರೈಲುಗಳ ಸಂಚಾರವಿದೆ. ಜನರ ಬೇಡಿಕೆ ಇರುವ ಕಾರಣದಿಂದಲೇ ಈ ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೆಚ್ಚು ಪ್ರಯಾಣಿಕರಿರುವ ವಿಶೇಷ ರೈಲುಗಳನ್ನು ಅಧಿಕೃತಗೊಳಿಸಿ ಪ್ರಯಾಣ ದರ ತಗ್ಗಿಸಬೇಕು ಎನ್ನುವ ಒತ್ತಾಯವೂ ರೈಲು ಪ್ರಯಾಣಿಕರದ್ದು.

ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್‌.ಕೃಷ್ಣಪ್ರಸಾದ್‌ ಅವರು ಟೈಮ್ಸ್‌ ಆಫ್‌ ಇಂಡಿಯಾಕ್ಕೆ ತಿಳಿಸಿದಂತೆ, ಪ್ರಾಯೋಗಿಕ ಇಲ್ಲವೇ ಹೊಸದಾಗಿ ಆರಂಭಿಸಿದ ಯಾವುದೇ ರೈಲುಗಳ ಸಂಚಾರ ಆರು ತಿಂಗಳವರೆಗೆ ಇರಬಹುದು. ಆನಂತರ ಆ ಮಾರ್ಗಗಳನ್ನು ಅಧಿಕೃತವಾಗಿ ಪ್ರಕಟಿಸಲೇಬೇಕು. ವಿಶೇಷ ರೈಲು ಎನ್ನುವ ಘೋಷಣೆ ಇದ್ದಾಗ ಪ್ರಯಾಣಿಕರು ಶೇ. 30 ರಷ್ಟು ಹೆಚ್ಚುವರಿ ಪ್ರಯಾಣ ದರ ತೆರಬೇಕಲಾಗುತ್ತದೆ. ಪ್ರಯಾಣಿಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಕರ್ನಾಟಕದಲ್ಲಿಯೇ ಆರಂಭಿಸಲಾಗಿರುವ ಹಲವಾರು ವಿಶೇಷ ರೈಲುಗಳನ್ನು ಅಧಿಕೃತಗೊಳಿಸಬೇಕು ಎನ್ನುವ ಬೇಡಿಕೆ ಇದೆ .

ದಾವಣಗೆರೆ-ತುಮಕೂರು ಮಾರ್ಗ

ಕರ್ನಾಟಕದಲ್ಲಿ ರೈಲ್ವೆ ಮಾರ್ಗಗಳನ್ನು ಬಲಗೊಳಿಸುವ ಪ್ರಯತ್ನ ನಡೆದಿದೆ. ಅದನ್ನು ಇನ್ನಷ್ಟು ವಿಸ್ತರಿಸಬೇಕು. ದಾವಣಗೆರೆ- ತುಮಕೂರು ರೈಲ್ವೆ ಮಾರ್ಗ ಆರಂಭದಿಂದ ಬೆಂಗಳೂರು -ಹುಬ್ಬಳ್ಳಿ ಸಂಚಾರ ಅವಧಿ ಕಡಿತವಾಗಲಿದೆ. ಈ ಯೋಜನೆಯೂ ವಿಳಂಬವಾಗಿದೆ. ಇದೇ ರೀತಿ ಕರ್ನಾಟಕದ ಇತರೆ ಮಾರ್ಗಗಳನ್ನೂ ಬೇಗನೇ ಮುಗಿಸಬೇಕು ಎನ್ನುವುದು ನೈರುತ್ಯ ರೈಲ್ವೆ ಪ್ರಯಾಣಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾವಣಗೆರೆಯ ರೋಹಿತ್‌ ಜೈನ್‌ ಅವರ ಅಭಿಪ್ರಾಯ.

ಹುಬ್ಬಳ್ಳಿ ಪೂನಾ ಮಾರ್ಗ ವಿದ್ಯುದೀಕರಣ

ಹೊಸ ಮಾರ್ಗಗಳನ್ನು ಪ್ರಕಟಿಸುವುದು ಒಳ್ಳೆಯದೇ . ಹಾಗೆಂದು ಹಿಂದೆ ಪ್ರಕಟಿಸಿದ ಯೋಜನೆಗಳು ಪೂರ್ಣಗೊಳ್ಳದೇ ಇದ್ದರೆ ರೈಲ್ವೆ ಮಾರ್ಗಗಳ ಪ್ರಗತಿಯೇ ಆಗುವುದಿಲ್ಲ. ಬೆಂಗಳೂರು- ಹುಬ್ಬಳ್ಳಿ-ಪೂನಾ ವಿದ್ಯುತ್‌ ಮಾರ್ಗದ ಯೋಜನೆಯೂ ಬೇಗನೇ ಮುಗಿಯಬೇಕು. ಬೆಂಗಳೂರು ಸಬ್‌ ಅರ್ಬನ್‌ ರೈಲು ಮಾರ್ಗಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ‌ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಮುಂಬೈ,ಜೋಧಪುರ, ಅಜ್ಮೇರ್‌ ಗೆ ತತ್ಕಾಲ್‌ ರೈಲುಗಳ ಸಂಚಾರಕ್ಕೆ ಒತ್ತು ನೀಡಬೇಕು ಎನ್ನುವುದು ರೋಹಿತ್‌ ಸಲಹೆ.

ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆಯ ಅಧ್ಯಕ್ಷ ಸುನೀಲ್‌ ಕುಲಕರ್ಣಿ ಅವರ ಪ್ರಕಾರ, ಕಲಬುರಗಿ ವಿಭಾಗದ ಬೇಡಿಕೆ ಬಹಳ ವರ್ಷದ್ದು. ಇದು ಜಾರಿಯಾದರೆ ಹೆಚ್ಚಿನ ಅನುದಾನ ಸಿಗಲಿದ್ದು, ಈ ಭಾಗದಲ್ಲಿ ರೈಲ್ವೆ ಪ್ರಗತಿಯೂ ಆಗಲಿದೆ. ಶಹಾಬಾದ್‌ ವಿಜಯಪುರ ರೈಲ್ವೆ ಮಾರ್ಗ ಆಗಬೇಕು ಎನ್ನುವುದು ಹಳೆಯ ಬೇಡಿಕೆ. ಇದು ಜಾರಿಯಾದರೆ ಹುಬ್ಬಳ್ಳಿ ಕಲಬುರಗಿ ಸಂಪರ್ಕ ಹೆಚ್ಚಲಿದೆ.

ಬೇಡಿಕೆ ಸಲ್ಲಿಕೆ

ಕರ್ನಾಟಕದಲ್ಲಿನ ಹಳೆ ಹಾಗೂ ಹೊಸ ಯೋಜನೆಗಳಿಗೆ ಬೇಡಿಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಕೆಲವು ಯೋಜನೆಗಳಿಗೆ ವಿಶೇಷ ಅನುದಾನ, ಹೊಸ ರೈಲುಗಳ ಪ್ರಸ್ತಾವನೆಯನ್ನು ಬಜೆಟ್‌ಗಾಗಿ ಸಲ್ಲಿಸಲಾಗಿದೆ. ಅವುಗಳ ಪ್ರಕಟಣೆ ಆಗುವ ನಿರೀಕ್ಷೆಯಿದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.

IPL_Entry_Point