HD Kumaswamy on CM Bommai: ಸುಖಾಸುಮ್ಮನೆ ಕೆಣಕಿದರೆ ಬಿಡಲಾಗುತ್ತದೆಯೇ? ವಿಡಿಯೋ ವೈರಲ್ ಬಗ್ಗೆ ಮಾಜಿ ಸಿಎಂ ಹೇಳಿದ್ದಿಷ್ಟು..
ನನ್ನ ಗಮನ ಜನರ ಕಡೆ, ನನ್ನ ಪಾಡಿಗೆ ನಾನು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ಸುಖಾಸುಮ್ಮನೆ ಕೆಣಕಿದರೆ ಬಿಡಲಾಗುತ್ತದೆಯೇ? ಕೋರ್ಟ್ ನಲ್ಲಿ ಸ್ಟೇ ತೆಗೆದು ಕೊಂಡ ಮಂತ್ರಿಗಳೇ ವಿಡಿಯೋಗಳು ಇದ್ದರೆ ಬಿಡಿ ಎನ್ನುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಮ್ನಾಬಾದ್(ಬೀದರ್): ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ದೇವೇಗೌಡರು ಪ್ರತಿಪಕ್ಷ ನಾಯಕರಾಗಿದ್ದಾಗ ದೇವರಾಜ ಅರಸು ಅವರ ಅಳಿಯ ನಟರಾಜು ಬಗ್ಗೆ ಹೇಳಿದ್ದರು. ಅಂಥ ಮೇಲ್ಪಂಕ್ತಿಯನ್ನು ಕುಮಾರಸ್ವಾಮಿ ಅವರು ಅನುಸರಿಸಲಿ ಎಂದು ಸಿಎಂ ಹೇಳಿದ್ದರು.
ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಟಾಂಗ್ ನೀಡಿದ್ದಾರೆ. ಬೀದರ್ ನ ಹುಮ್ನಾಬಾದ್ ನಲ್ಲಿಂದು ಮಾತನಾಡಿರುವ ಹೆಚ್ಡಿಕೆ, ಕುಮಾರಸ್ವಾಮಿ ಅವರು ದೇವೇಗೌಡರಂತೆ ಮಾತನಾಡಲಿ ಎಂದು ಸಿಎಂ ಬೊಮ್ಮಾಯಿ ಅವರು ನನಗೆ ಪುಕ್ಕಟ್ಟೆ ಸಲಹೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ಯಾರ ಬಗ್ಗೆಯೂ ನಾನು ವೈಯಕ್ತಿಕವಾಗಿ ಮಾತನಾಡಲ್ಲ ಎಂದು ನೂರು ಬಾರಿ ಹೇಳಿದ್ದೇನೆ. ಆದರೆ ಇಂಥ ಕೆಟ್ಟ ಶಕ್ತಿಗಳಿಂದ ಆಡಳಿತಕ್ಕೆ ಧಕ್ಕೆ ಆಗುತ್ತದೆ, ಅದಕ್ಕೆ ಹೇಳಿದ್ದೇನೆ ಎಂದಿದ್ದಾರೆ.
ಸ್ಯಾಂಟ್ರೋ ರವಿ ಅಧಿಕಾರಿಗಳಿಗೆ ಹೆದರಿಸುತ್ತಾನೆ, ಮಂತ್ರಿಗಳು ಅಧಿಕಾರಿಗಳು ಜೇಬಿನಲ್ಲಿ ಇದ್ದಾರೆ ಎಂದು ಪೋಸು ಕೊಡುತ್ತಾನೆ. ಅಧಿಕಾರಿಗಳು ಕೆಲಸ ಮಾಡುವುದು ಹೇಗೆ? ಆಡಳಿತ ಯಂತ್ರ ಕುಸಿಯಲ್ಲವೆ? ನಾನು ಹೇಳಿರುವುದು ಇದನ್ನೇ. ಯಾರ ವೈಯಕ್ತಿಕ ವಿಷಯ ಕಟ್ಟಿಕೊಂಡು ನನಗೆ ಏನಾಗಬೇಕಿದೆ. ನನ್ನ ಗಮನ ಜನರ ಕಡೆ, ನನ್ನ ಪಾಡಿಗೆ ನಾನು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ಸುಖಾಸುಮ್ಮನೆ ಕೆಣಕಿದರೆ ಬಿಡಲಾಗುತ್ತದೆಯೇ? ಕೋರ್ಟ್ ನಲ್ಲಿ ಸ್ಟೇ ತೆಗೆದು ಕೊಂಡ ಮಂತ್ರಿಗಳೇ ವಿಡಿಯೋಗಳು ಇದ್ದರೆ ಬಿಡಿ ಎನ್ನುತ್ತಿದ್ದಾರೆ.
ಸ್ಟೇ ತೆಗೆಸಿ ಸತ್ಯವಂತರು ಎಂದು ಸಾಬೀತು ಮಾಡಿಕೊಳ್ಳಲಿ
ಕುಮಾರಸ್ವಾಮಿ ಅವರ ಹತ್ತಿರ ಖಾಲಿ ಬುಟ್ಟಿ ಇದೇ ಎನ್ನುತ್ತಿದ್ದಾರೆ. ಹಾಗಾದರೆ, ಅವರಿಗೆ ಹಾವುಗಳ ಬಗ್ಗೆ ಅಕ್ಕರೆ ಜಾಸ್ತಿ ಅಂತಾಯಿತು. ಇಂಥವರನ್ನು ಬೊಮ್ಮಾಯಿ ಅವರು ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ. ಅವರೇ ಹೇಳುತ್ತಿದ್ದಾರೆ, ಕುಮಾರಸ್ವಾಮಿ ಬುಟ್ಟಿಯಲ್ಲಿ ಇರುವ ಹಾವುಗಳನ್ನು ಬಿಡಲಿ ಎಂದು. ಹಾಗಾದರೆ ಅವರು ಸ್ಟೇ ತೆಗೆಸಲಿ, ಅವರು ಸತ್ಯವಂತರು ಎಂದು ಸಾಬೀತು ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ಸಚಿವ ಅರಗ ಜ್ಞಾನೇಂದ್ರ ಅವರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೋ ಎಲ್ಲ ಕಡೆ ವೈರಲ್ ಆಗಿದೆ. ಅವರ ಮನೆಯಲ್ಲಿ ಲೆಕ್ಕ ಹಾಕಿದ ಹಣದ ಫೋಟೋ ತೆಗೆದವರು ಯಾರು? ಎಸಿಪಿ ಒಬ್ಬರನ್ನು ವರ್ಗಾವಣೆ ಮಾಡಿಸಲು 15 ಲಕ್ಷವನ್ನು ಎಣಿಸುತ್ತಿರುವುದಂತೆ. ಇದರ ಬಗ್ಗೆ ಗೃಹ ಸಚಿವರು ತನಿಖೆ ಮಾಡಿಸಲಿ. ಗೃಹ ಸಚಿವರ ಗೃಹದಲ್ಲೇ ಹೀಗೆ ಆಗಿದೆ ಎಂದಿದ್ದಾರೆ.
ದಲ್ಲಾಳಿಗಳೇ ಸರ್ಕಾರದ ಆಡಳಿತ ನಡೆಸುವ ಸ್ಥಿತಿ
ಸಚಿವ ಎಸ್ ಟಿ ಸೋಮಶೇಖರ್ ಅವರ ಜತೆ ಕೂಡ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆಯೇ ಮಾತನಾಡಿದ್ದಾನೆ. ಆ ವಿಡಿಯೋ ರೆಕಾರ್ಡ್ ನಾನು ಮಾಡಿದೇನೆಯೇ? ಇದೆಲ್ಲಾ ಏನು ಎಂದು ಜನರೇ ಕೇಳುತ್ತಿದ್ದಾರೆ. ಇಂಥ ವಿಷಯ ಇಟ್ಟುಕೊಂಡು ನಾನು ರಾಜಕೀಯ ಮಾಡಲ್ಲ. ಇಂಥ ಕರ್ಮ ನನಗಿಲ್ಲ, ಸಚಿವರೇ ಬಿಡಿ ಬಿಡಿ ಎನ್ನುತ್ತಿದ್ದಾರೆ. ದಲ್ಲಾಳಿಗಳೇ ಸರ್ಕಾರದ ಆಡಳಿತ ನಡೆಸುವ ಸ್ಥಿತಿಯನ್ನು ಸಿಎಂ ಸೃಷ್ಟಿ ಮಾಡಿಕೊಂಡಿದ್ದಾರೆ.
ಕುಮಾರಕೃಪ ಹೊಸ ಕಟ್ಟಡದಲ್ಲಿ ಏನೆಲ್ಲಾ ನಡೆಯಿತು. ಅಲ್ಲಿ ಉಸ್ತುವಾರಿ ಇದ್ದ ದೇವರಾಜು ಎನ್ನುವ ವ್ಯಕ್ತಿಯನ್ನು ಯಾಕೆ ಎತ್ತಂಗಡಿ ಮಾಡಿದರು? ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಎತ್ತಂಗಡಿ ಯಾಕೆ ಆಯಿತು? ಜಗದೀಶ್ ಅವರಿಗೆ ಕುಮಾರಕೃಪದ ಹೆಚ್ಚುವರಿ ಹೊಣೆ ಇತ್ತು. ಬೆಂಕಿ ಇಲ್ಲದೆ ಹೋಗೆ ಬರುತ್ತಾ? ನಿಮ್ಮ ತಂದೆಯವರು ಹೇಳಿಕೊಟ್ಟಿದ್ದು, ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಇದೇನಾ ಬೊಮ್ಮಾಯಿ ಅವರೇ? ಎಸ್.ಆರ್.ಬೊಮ್ಮಾಯಿ ಅವರಿಂದ ಸಿಎಂ ಕಲಿತದ್ದು ಇದೇನಾ? ಮುಖ್ಯಮಂತ್ರಿ ನಿವಾಸದ ಕೂಗಳತೆ ದೂರದಲ್ಲಿ ಇದೆಲ್ಲಾ ಅಸಹ್ಯ ನಡೆದಿದೆ.
ಇದು ಸರೀನಾ ಮಿಸ್ಟರ್ ಬೊಮ್ಮಾಯಿ ಅವರೇ?
ಇದು ಸರೀನಾ ಮಿಸ್ಟರ್ ಬೊಮ್ಮಾಯಿ ಅವರೇ? ಇದೇನಾ ನೀವು ನಿಮ್ಮ ತಂದೆಯವರಿಂದ ಕಲಿತದ್ದು? ಸ್ಯಾಂಟ್ರೋ ರವಿಯನ್ನು ಹಿಡಿಯುವುದು ಸರ್ಕಾರದ ಕೆಲಸ. ಎಲ್ಲಾ ನಾವೇ ಹೇಳುವುದಾದರೆ ಗೃಹ ಸಚಿವರು ಏತಕ್ಕೆ? ದಾಖಲೆ ಇದ್ದರೆ ಕೊಡಲಿ ಎನ್ನುತ್ತಾರೆ? ಸ್ಯಾಂಟ್ರೋ ರವಿ ಹುಡುಕುತ್ತಿದ್ದೇವೆ ಎನ್ನುತ್ತಾರೆ. ಪ್ರಕರಣವನ್ನು ಹಳ್ಳ ಹಿಡಿಸಲು ಇದಕ್ಕಿಂತ ಒಳ್ಳೆಯ ಉದಾಹರಣೆ ಇದೆಯಾ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.