ಕನ್ನಡ ಸುದ್ದಿ  /  Karnataka  /  Indian Railway News Bengaluru Murdeshwar Other Trains Partial Cancellation Train Numbers And Other Details Pcp

Indian Railways: ರೈಲು ಪ್ರಯಾಣಿಕರೇ ಗಮನಿಸಿ, ಬೆಂಗಳೂರು ಮುರುಡೇಶ್ವರ ಸೇರಿದಂತೆ ಹಲವು ರೈಲುಗಳ ಪ್ರಯಾಣ ಭಾಗಶಃ ರದ್ದು

ಭಾರತೀಯ ರೈಲ್ವೆಯು ರೈಲು ಹಳಿಗಳು ಮತ್ತು ನಿಲ್ದಾಣಗಳಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಬೆಂಗಳೂರು-ಮುರುಡೇಶ್ವರ ಸೇರಿದಂತೆ ಕೆಲವು ರೈಲುಗಳ ಸಂಚಾರವು ಭಾಗಶಃ ರದ್ದಾಗಲಿದೆ. ಇದೇ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೆಲವು ಕಡೆ ಹೆಚ್ಚುವರಿ ರೈಲುಗಳನ್ನು ಆರಂಭಿಸಲಾಗುತ್ತಿದೆ. (ವರದಿ: ಪ್ರಿಯಾಂಕ ಗೌಡ)

ಬೆಂಗಳೂರು ಮುರುಡೇಶ್ವರ ಸೇರಿದಂತೆ ಹಲವು ರೈಲುಗಳ ಪ್ರಯಾಣ ಭಾಗಶಃ ರದ್ದು
ಬೆಂಗಳೂರು ಮುರುಡೇಶ್ವರ ಸೇರಿದಂತೆ ಹಲವು ರೈಲುಗಳ ಪ್ರಯಾಣ ಭಾಗಶಃ ರದ್ದು

ಬೆಂಗಳೂರು: ದೇಶದಲ್ಲಿ ರೈಲು ಸಂಚಾರಗಳ ಮಾರ್ಗಗಳು ವಿಸ್ತರಣೆಯಾಗುತ್ತಿದ್ದು, ಹಲವು ಕಾಮಗಾರಿಗಳು ನಡೆಯುತ್ತಿವೆ. ದಿನೇ ದಿನೇ ರೈಲು ಪ್ರಯಾಣಿಕ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ಇದೀಗ, ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳ ಕಾರಣ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಮಾರ್ಚ್ 13 ರಿಂದ 16 ರವರೆಗೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಅವು ಯಾವ್ಯಾವು ಇಲ್ಲಿದೆ ವಿವರ.

ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್, ಮಾರ್ಚ್ 12, 13, 14 ಮತ್ತು 15 ರಂದು ಪ್ರಯಾಣವನ್ನು ಪ್ರಾರಂಭಿಸಿ, ಭಟ್ಕಳದಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್, ಮಾರ್ಚ್ 13, 14, 15 ಮತ್ತು 16 ರಂದು ಪ್ರಯಾಣವನ್ನು, ಅದರ ನಿಗದಿತ ಸಮಯದಲ್ಲಿ ಭಟ್ಕಳದಿಂದ ಹೊರಡುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಬೆಂಗಳೂರಿನಿಂದ ಬಿಹಾರಕ್ಕೆ ಹೋಳಿ ವಿಶೇಷ ರೈಲುಗಳು

ಹೋಳಿ ಹಬ್ಬ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿಯಿದೆ. ಹೀಗಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ಮುಜಾಫರ್‌ಪುರ ಮತ್ತು ಯಶವಂತಪುರ ನಡುವೆ ಹೋಳಿ ವಿಶೇಷ ರೈಲುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.

ಮಾರ್ಚ್ 29 ಮತ್ತು ಏಪ್ರಿಲ್ 5 ರಂದು (ಶುಕ್ರವಾರ) ರೈಲು ಸಂಖ್ಯೆ 05271 ಮುಜಫರ್‌ಪುರದಿಂದ ಮಧ್ಯಾಹ್ನ 3.30ಕ್ಕೆ ಹೊರಟರೆ ಭಾನುವಾರ ಸಂಜೆ 7 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

ಏಪ್ರಿಲ್ 1 ಮತ್ತು 8 ರಂದು (ಸೋಮವಾರ) ರೈಲು ಸಂಖ್ಯೆ 05272 ಯಶವಂತಪುರದಿಂದ ಬೆಳಿಗ್ಗೆ 7.30ಕ್ಕೆ ಹೊರಟು ಬುಧವಾರ ಮಧ್ಯಾಹ್ನ ಮುಜಾಫರ್‌ಪುರ ತಲುಪಲಿದೆ.

ರೈಲುಗಳು ಹಾಜಿಪುರ, ಪಾಟ್ಲಿಪುತ್ರ, ಅರಾ, ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಪ್ರಯಾಗ್ ರಾಜ್ ಛೋಕಿ, ಮಾಣಿಕ್‌ಪುರ್, ಸತ್ನಾ, ಕಟ್ನಿ, ಜಬಲ್‌ಪುರ, ನರಸಿಂಗ್‌ಪುರ್, ಪಿಪಾರಿಯಾ, ಇಟಾರ್ಸಿ, ನಾಗಪುರ, ಬಲ್ಹರ್ಷಾ, ಸಿರ್ಪುರ್ ಕಾಘಜ್‌ನಗರ, ರಾಮಗುಂಡಂ, ಕಾಜಿಪೇಟ್, ಜಂಗಾವ್, ಕಚೇಗುಡ, ಶಾದ್‌ನಗರ, ಜಡ್‌ಚರ್ಲಾ, ಮಹಬೂಬ್‌ನಗರ, ಗದ್ವಾಲ್, ಕರ್ನೂಲ್ ಸಿಟಿ, ಧೋಣೆ, ಗೂಟಿ, ಅನಂತಪುರ ಮತ್ತು ಧರ್ಮಾವರಂನಲ್ಲಿ ರೈಲುಗಳು ನಿಲುಗಡೆಯನ್ನು ಹೊಂದಿವೆ.

15ಕ್ಕೂ ಹೆಚ್ಚು ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಚಿಂತನೆ

ಅಂದಹಾಗೆ, ಭಾರತೀಯ ರೈಲ್ವೆಯ ಉತ್ತರ ವಿಭಾಗವು 15ಕ್ಕೂ ಹೆಚ್ಚು ಹೆಚ್ಚುವರಿ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ. ಭಾರತೀಯ ರೈಲ್ವೇಯು ಹೋಳಿ ವಿಶೇಷ ರೈಲುಗಳ ವೇಳಾಪಟ್ಟಿಗಳು, ದರಗಳು ಮತ್ತು ಮಾರ್ಗಗಳನ್ನು ಬಿಡುಗಡೆ ಮಾಡಿದೆ. ದೆಹಲಿಯಿಂದ ಸುಮಾರು ಆರು ರೈಲುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ರೈಲುಗಳು ಕತ್ರಾ, ವಾರಣಸಿ ಮತ್ತು ಸಹರಾನ್‌ಪುರದಂತಹ ನಗರಗಳನ್ನು ಸಂಪರ್ಕಿಸುತ್ತವೆ.

ಸಹರ್ಸಾದಿಂದ ಅಂಬಾಲಾಕ್ಕೆ, ಪಾಟ್ನಾ ಮತ್ತು ಗಯಾದಂತಹ ನಗರಗಳಿಂದ ದೆಹಲಿಯ ಆನಂದ್ ವಿಹಾರ್‌ಗೆ ರೈಲು ಇರುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ವೇಳಾಪಟ್ಟಿಯ ಪ್ರಕಾರ, ಜಾರ್ಖಂಡ್‌ನ ಧನ್‌ಬಾದ್ ಮೂಲಕ ಹಾದುಹೋಗುವ ಕೆಲವು ರೈಲುಗಳು ಬಿಹಾರದ ಮೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ ಎನ್ನಲಾಗಿದೆ.

ಇನ್ನೊಂದೆಡೆ, ಮಾರ್ಚ್ 2024 ರಲ್ಲಿ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ವಿಪರೀತ ಬೇಡಿಕೆಯನ್ನು ಪೂರೈಸಲು 112 ಹೋಳಿ ವಿಶೇಷ ರೈಲು ಸೇವೆಗಳನ್ನು ಪ್ರಾರಂಭಿಸುವುದಾಗಿ ಸೆಂಟ್ರಲ್ ರೈಲ್ವೆ ಹೇಳಿದೆ.

ರೈಲಿನ ವೇಳಾಪಟ್ಟಿ ಮರುಹೊಂದಿಕೆ

ಇನ್ನು ತಿರುವನಂತಪುರಂ ರೈಲ್ವೆ ವಿಭಾಗದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ. ಹೀಗಾಗಿ ರೈಲು ಸಂಖ್ಯೆ 16320 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಬೈ-ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ಮಾರ್ಚ್ 15 ರಂದು 135 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ ಎಂದು ತಿಳಿಸಲಾಗಿದೆ.

  • ವರದಿ: ಪ್ರಿಯಾಂಕ ಗೌಡ

IPL_Entry_Point