ಕನ್ನಡ ಸುದ್ದಿ  /  ಕರ್ನಾಟಕ  /  Shimoga News: ಶಿವಮೊಗ್ಗದಲ್ಲಿ ಭಾರೀ ಮಳೆ, ಸಿಡಿಲಿಗೆ ಯುವಕ ಸಾವು, ಮತ್ತೊಬ್ಬರಿಗೆ ಗಾಯ, ಮನೆ, ಬೆಳೆಗೂ ಹಾನಿ

Shimoga News: ಶಿವಮೊಗ್ಗದಲ್ಲಿ ಭಾರೀ ಮಳೆ, ಸಿಡಿಲಿಗೆ ಯುವಕ ಸಾವು, ಮತ್ತೊಬ್ಬರಿಗೆ ಗಾಯ, ಮನೆ, ಬೆಳೆಗೂ ಹಾನಿ

Rain Updates ಸಿಡಿಲಿಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಶಿವಮೊಗ್ಗ ಬಳಿ ನಡೆದಿದೆ.

ಸಿಡಿಲಿಗೆ ಬಲಿಯಾದ ರಾಕೇಶ್‌ ಹಾಗೂ ಮನೆ ಮೇಲೆ ಬಿದ್ದ ಮರ.
ಸಿಡಿಲಿಗೆ ಬಲಿಯಾದ ರಾಕೇಶ್‌ ಹಾಗೂ ಮನೆ ಮೇಲೆ ಬಿದ್ದ ಮರ.

ಶಿವಮೊಗ್ಗ: ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಮಳೆ ಜೋರಾಗಿದೆ. ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಮಲೆನಾಡು ಪ್ರದೇಶವಾದ ಸಾಗರ. ಹೊಸನಗರದ ಜತೆಗೆ ಅರೆಮಲೆನಾಡು ಭಾಗವಾದ ಭದ್ರಾವತಿ,ಶಿಕಾರಿಪುರ ತಾಲ್ಲೂಕುಗಳಲ್ಲೂ ಮಳೆಯಾಗಿರುವ ವರದಿಯಾಗಿದೆ. ಅದರಲ್ಲೂ ಶುಕ್ರವಾರ ಸಂಜೆಯಿಂದಲೇ ಸುರಿದ ಭಾರೀ ಮಳೆಗೆ ಅನಾಹುತಗಳು ಆಗಿವೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಇನ್ನೊಬ್ಬನಿಗೆ ಗಾಯವಾಗಿದೆ. ಹಲವಾರು ಕಡೆಗಳಲ್ಲಿ ಗಾಳಿ ಸಹಿತ ಮಳೆಗೆ ಬೆಳೆ ಹಾನಿಯಾಗಿದೆ. ಮನೆಗಳೂ ಅಲ್ಲಲ್ಲಿ ಉರುಳಿ ಬಿದ್ದು ನಷ್ಟ ಸಂಭವಿಸಿದೆ. ಇನ್ನೂ ನಾಲ್ಕು ದಿನ ಶಿವಮೊಗ್ಗದಲ್ಲಿ ಮಳೆ ಬರುವ ಮುನ್ಸೂಚನೆಯಿದ್ದು, ಶನಿವಾರವೂ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆ ಬವಣೆ ತಪ್ಪಿಸಲು ಮಳೆ ಬಂದಿದೆಯಾದರೂ ಗಾಳಿ. ಗುಡುಗು ಕೂಡ ಇರುವುರಿಂದ ಭಾರೀ ಹಾನಿಯೇ ಆಗುತ್ತಿದೆ. ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟ ಬಳಿ ಹೊಲದ ಕೆಲಸದಲ್ಲಿ ನಿರತನಾಗಿದ್ದ ಯುವಕನಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತನನ್ನು ಹರಮಘಟ್ಟ ಗ್ರಾಮದ ರಾಕೇಶ್‌ ಎಂದು ಗುರುತಿಸಲಾಗಿದೆ. ಸಂಜೆ ಸಮಯದಲ್ಲಿ ಜಮೀನಲ್ಲಿದಾಗ ಮಳೆ ಶುರುವಾಗಿದ್ದು. ಗುಡುಗು ಕೂಡ ಬಂದಿದೆ. ಈ ವೇಳೆ ಸಿಡಿಲು ಬಡಿದು ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಿಡಿಲು ಬಡಿದು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಇದಲ್ಲದೇ ಶಿವಮೊಗ್ಗನಗರದಲ್ಲೂ ಉತ್ತಮ ಮಳೆಯಾಗಿದೆ. ಜಿಲ್ಲೆಯ ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಭದ್ರಾವತಿ ತಾಲ್ಲೂಕಿನ ಹಲವು ಭಾಗಗಳಲ್ಲೂ ಮಳೆ ಸುರಿದಿದೆ. ಸಾಗರ ತಾಲ್ಲೂಕು ಆನಂದಪುರ ಸಮೀಪದ ಬೈರಾಪುರ ಗ್ರಾಮದ ನಿತ್ಯಾನಂದ ಅವರ ಬಾಳೆತೋಟ ಭಾರಿ ಮಳೆ ಗಾಳಿಯಿಂದಾಗಿ ಹಾಳಾಗಿ ಹೋಗಿದೆ. ಇದರಿಂದ ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸಮೀಪದ ಕಣ್ಣೂರು ಗ್ರಾಮದಲ್ಲಿ ಮಂಜಮ್ಮ ಎಂಬುವವರಿಗೆ ಸೇರಿದ ಒಂದು ಕೆರೆ ಜೋಳದ ಬೆಳೆಯೂ ಹಾಳಾಗಿ ಹೋಗಿದೆ. ಹೊಸ ಕೊಪ್ಪ ಗ್ರಾಮದ ಯಶೋಧಮ್ಮ ಅವರ ಮನೆ ಮೇಲೆ ಭಾರೀ ಮರ ಬಿದ್ದಿದ್ದು. ಅನಾಹುತ ತಪ್ಪಿದೆ. ಕಣ್ಣೂರು ಗ್ರಾಮದಲ್ಲೂ ಮಳೆಯಿಂದ ಪಾರ್ವತಮ್ಮ ಎನ್ನುವವರ ಮನೆ ಗೋಡೆ ಕುಸಿತ ಕಂಡಿದೆ. ಇನ್ನೂ ಹಲವು ಕಡೆಗಳಲ್ಲಿ ತೊಂದರೆಯಾಗಿವೆ. ಭದ್ರಾವತಿ, ಸೊರಬ ತಾಲ್ಲೂಕಿನಲ್ಲೂ ಮಳೆಯಾಗಿ ಸಣ್ಣಪುಟ್ಟ ಹಾನಿಗಳಾಗಿವೆ.

ಅದೇ ರೀತಿ ಹೊಸನಗರ ತಾಲ್ಲೂಕಿನ ಮುಂಬಾರು ಗ್ರಾಮದಲ್ಲಿ ಮಂಜುನಾಥ್‌ ಎನ್ನುವವರ ಮನೆ ಹಾಗೂ ಕೊಟ್ಟಿಗೆ ಕೂಡ ಬಿದ್ದಿದೆ. ಗಾಳಿಯಿಂದ ಭಾರೀ ಗಾತ್ರದ ಮರ ಉರುಳಿದ್ದರಿಂದ ಹೀಗಾಗಿದೆ. ಅಪಾಯಕಾರಿ ಮರ ತೆಗೆಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.

ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಭಾರೀ ಮಳೆಯಿಂದ ನಷ್ಟ ಉಂಟಾದ ಗ್ರಾಮಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

IPL_Entry_Point