ಕನ್ನಡ ಸುದ್ದಿ  /  Karnataka  /  Two Mlas From Hassan District Are In Touch I Will Not Not Disclose Names Says Dk Sivakumar

DK Shivakumar in Praja dhwani : ಹಾಸನ ಜಿಲ್ಲೆಯ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ; ಅವರ ಹೆಸರು ಹೇಳುವುದಿಲ್ಲ: ಡಿಕೆ ಶಿವಕುಮಾರ್

ರಾಜ್ಯದಲ್ಲಿ ಈಗ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಇದು ಕಳಂಕಿತ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಮಾಡಲಿಲ್ಲ. ಪೊಲೀಸ್, ಇಂಜಿನಿಯರ್, ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಹಿಡಿದು ಎಲ್ಲಾ ನೇಮಕಾತಿಯಲ್ಲೂ ಅಕ್ರಮ ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಹಾಸನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರು ಚಾಲನೆ ನೀಡಿದರು.
ಹಾಸನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರು ಚಾಲನೆ ನೀಡಿದರು.

ಹಾಸನ: ವೈಎಸ್ ವಿ ದತ್ತಾ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಜಿಲ್ಲೆಯ ಇನ್ನೂ ಇಬ್ಬರು ಶಾಸಕರು ಸಂಪರ್ಕದಲ್ಲಿ ಇದ್ದಾರೆ . ಅವರ ಹೆಸರು ಹೇಳುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹಾಸದನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಕದ ಜಿಲ್ಲೆಯ ಗುಬ್ಬಿ ಶಾಸಕ ಶ್ರೀನಿವಾಸ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸಗೌಡರು, ದಾವಣಗೆರೆಯ ದೇವೇಂದ್ರಪ್ಪ ಸೇರಿದಂತೆ ಹಲವು ನಾಯಕರು ಪಕ್ಷ ಸೇರಿದ್ದಾರೆ. ಇವರು ಸುಮ್ಮನೆ ಕಾಂಗ್ರೆಸ್ ಸೇರಲು ದಡ್ಡರೇ? ಕಳೆದ ಚುನಾವಣೆಯಲ್ಲಿ ಪರಿಷತ್ ಸದಸ್ಯರಾಗಿದ್ದ, ಕೋಲಾರದ ಮನೋಹರ್ ಕೂಡ ಪಕ್ಷ ಸೇರಿದ್ದಾರೆ ಎಂದು ಡಿಕೆಶಿ ವಿವರಿಸಿದ್ದಾರೆ.

ರಾಜ್ಯದಲ್ಲಿ ಈಗ ಅತ್ಯಂತ ಭ್ರಷ್ಟ, ಕಳಂಕಿತ ಸರ್ಕಾರ ಇದೆ

ರಾಜ್ಯದಲ್ಲಿ ಈಗ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಇದು ಕಳಂಕಿತ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಮಾಡಲಿಲ್ಲ. ಪೊಲೀಸ್, ಇಂಜಿನಿಯರ್, ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಹಿಡಿದು ಎಲ್ಲಾ ನೇಮಕಾತಿಯಲ್ಲೂ ಅಕ್ರಮ ಮಾಡಿದರು. ಈ ಸರ್ಕಾರ ಬರಲು ಯಾರು ಕಾರಣ, ಇದನ್ನು ನೀವೇ ಆಲೋಚಿಸಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮ ಆಡಳಿತ ನಾವು ಸರಿಯಾಗಿ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ಕಳೆದ ಚುನಾವಣೆ ಸೋಲು ಒಪ್ಪಿದ್ದೇವೆ. ಈ ಜಿಲ್ಲೆಯಲ್ಲಿ ಒಂದು ಬಿಜೆಪಿ, ಉಳಿದ ಎಲ್ಲರನ್ನೂ ಜೆಡಿಎಸ್ ಪಕ್ಷದಿಂದ ಆರಿಸಿದ್ದೀರಿ ಎಂದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಸೀಟುಗಳು ಬಂದಿದ್ದವು. ಬಹುಮತ ಬರಲಿಲ್ಲ. ಹೀಗಾಗಿ ಈ ರಾಜ್ಯದ ಆಡಳಿತ ಕೆಟ್ಟ ಬಿಜೆಪಿ ಸರ್ಕಾರದ ಕೈಗೆ ಹೋಗಬಾರದು ಎಂದು ನಾವು ಜಾತ್ಯಾತೀತ ತತ್ವದ ಆಧಾರದ ಮೇಲೆ ಎಲ್ಲಾ ವರ್ಗದವರ ರಕ್ಷಣೆ ಮಾಡಲೆಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು 5 ವರ್ಷಗಳ ಕಾಲ ಅಧಿಕಾರ ಮಾಡಿ ಎಂದು ಬೆಂಬಲ ನೀಡಿದೆವು.

ಕೆಟ್ಟ ಬಿಜೆಪಿ ಕೈಗೆ ಅಧಿಕಾರ ಹೋಗಬಾರದು

ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ, ನಾನು ಪಕ್ಷದ ನಾಯಕನಾಗಿ ಕುಮಾರಸ್ವಾಮಿ ಅವರ ಜತೆ ಸರ್ಕಾರ ಮಾಡುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದೆವು. ಕುಮಾರಸ್ವಾಮಿ ಅವರ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇತ್ತು. ಬಿಜೆಪಿ ಆಪರೇಷನ್ ಕಮಲ ಮಾಡಿದ ಪರಿಣಾಮ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೆಟ್ಟ ಬಿಜೆಪಿ ಕೈಗೆ ಅಧಿಕಾರ ಹೋಗಬಾರದು ಎಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ನಾವು ತಪ್ಪು ಮಾಡಿದ್ದರೆ, ನಿಮ್ಮ ವಿವೇಚನೆಗೆ ತಕ್ಕಂತೆ ಶಿಕ್ಷೆ ನೀಡಿ, ಅನುಭವಿಸುತ್ತೇವೆ. ನಾಯಕನಾದವನಿಗೆ ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಆಪರೇಷನ್ ಕಮಲದಲ್ಲಿ ನಮ್ಮ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಬಲಿಯಾಗಿ ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದು ಹೇಳಿದರು.

ರೈತರ ಬದುಕು ಹಸನ ಮಾಡುತ್ತೇವೆ

ಕಾಂಗ್ರೆಸ್ ಪಕ್ಷ ಜನರಿಗೆ ಉತ್ತಮವಾದ, ಭ್ರಷ್ಟ ರಹಿತ, ನುಡಿದಂತೆ ನಡೆವ ಆಡಳಿತ ನೀಡುತ್ತದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ. ರೈತರ ಬದುಕು ಹಸನ ಮಾಡುತ್ತೇವೆ. ಇದು ನಮ್ಮ ಸಂಕಲ್ಪ. ಅದಕ್ಕಾಗಿ ನಮಗೆ ಶಕ್ತಿ ನೀಡಿ ಎಂದು ಕೇಳುತ್ತಿದ್ದೇನೆ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಬೆಂಬಲ ನೀಡಿದೆವು. ಆದರೆ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ ಯಾಕೆ ಎಂದು ನೀವು ಅವರನ್ನು ಕೇಳಬೇಕು.

ಹಾಸನದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ಕೇಳುತ್ತಿದ್ದೇನೆ, ಹೊಸ ಬದಲಾವಣೆ ನೀಡಲು ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ. ಎಸ್.ಎಂ ಕೃಷ್ಣ ಅವರ ನಾಯಕತ್ವದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ. ಅದೇ ರೀತಿ ಈ ಬಾರಿ ನನ್ನ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹಾಸನ ಜನರಲ್ಲಿಲ ಡಿಕೆ ಶಿವಕುಮಾರ್ ಮನವಿ ಮಾಡಿದರು.

ನನಗೆ ಹೊಳೆನರಸೀಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಕಾಂಗ್ರೆಸ್ 135ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದರು.

IPL_Entry_Point