ಶ್ರೀಲಂಕಾ ಕ್ರಿಕೆಟ್ ಹಾಳಾಗಿದ್ದೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾರಿಂದ; ಅರ್ಜುನ ರಣತುಂಗ ಗಂಭೀರ ಆರೋಪ
Nov 15, 2023 12:57 PM IST
ಜಯ್ ಶಾ ವಿರುದ್ಧ ಅರ್ಜುನ ರಣತುಂಗ ಗಂಭೀರ ಆರೋಪ
- Arjuna Ranatunga: ಶ್ರೀಲಂಕಾ ಕ್ರಿಕೆಟ್ ಹಾಳಾಗಲು ಮತ್ತು ಹೀನಾಯ ಸ್ಥಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ ಶಾ ಕಾರಣ ಎಂದು ಶ್ರೀಲಂಕಾ ಕ್ರಿಕೆಟ್ನ ಮಧ್ಯಂತರ ಸಮಿತಿ ಅಧ್ಯಕ್ಷ ಅರ್ಜುನ ರಣತುಂಗ ಹೊಸ ಬಾಂಬ್ ಸಿಡಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಅತ್ಯಂತ ಕಳಪೆ ಪ್ರದರ್ಶನ ನೀಡಿದ ಶ್ರೀಲಂಕಾ ತಂಡವು ಲೀಗ್ ಹಂತದಲ್ಲೇ ಹೊರಬಿತ್ತು. ಹೀಗಾಗಿ ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (Sri Lanka Cricket Board) ಆಡಳಿತ ಮಂಡಳಿಯನ್ನು ವಜಾಗೊಳಿಸಿತು. ನವೆಂಬರ್ 2ರಂದು ಭಾರತದ ವಿರುದ್ಧ 55 ರನ್ಗಳಿಗೆ ಆಲೌಟ್ ಆದ ಬಳಿಕ ಈ ಬೆಳವಣಿಗೆ ನಡೆಯಿತು. ಇದಾದ ನಂತರ ಕ್ರಿಕೆಟ್ ನಿರ್ವಹಣೆಗೆ ಅರ್ಜುನ ರಣತುಂಗ ನೇತೃತ್ವದಲ್ಲಿ ಮಧ್ಯಂತರ ಸಮಿತಿ ರಚಿಸಿತು.
ಆದರೆ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶ್ರೀಲಂಕಾ ವಿರುದ್ಧ ಅಮಾನತಿನ ದಂಡದ ಶಿಕ್ಷೆ ನೀಡಿತು. ಇದರ ಬೆನ್ನಲ್ಲೇ ಲಂಕಾ ಕ್ರಿಕೆಟ್ನಲ್ಲಿ ಭ್ರಷ್ಟಚಾರ ಹೆಚ್ಚಾದ ಮಂಡಳಿಯನ್ನು ಕಿತ್ತೊಗೆಯಲಾಗಿದೆ ಎಂದು ಶ್ರೀಲಂಕಾದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಹೇಳಿದ್ದರು. ಈ ಬಗ್ಗೆ ಇತ್ತೀಚಿನ ಬೆಳವಣಿಗೆ ಎಂಬಂತೆ 1996ರ ವಿಶ್ವಕಪ್ ಗೆದ್ದ ನಾಯಕ ಅರ್ಜುನ ರಣತುಂಗ (Arjuna Ranatunga) ಸ್ಫೋಟಕ ಹೇಳಿಕೆ ನೀಡಿದ್ದಾರೆ.
‘ಲಂಕಾ ಕ್ರಿಕೆಟ್ ಹಾಳಾಗಲು ಜಯ್ ಶಾ ಕಾರಣ’
ಶ್ರೀಲಂಕಾ ಕ್ರಿಕೆಟ್ ಹಾಳಾಗಲು ಮತ್ತು ಹೀನಾಯ ಸ್ಥಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ ಶಾ (BCCI Secretary Jay Shah) ಕಾರಣ ಎಂದು ಶ್ರೀಲಂಕಾ ಕ್ರಿಕೆಟ್ನ ಮಧ್ಯಂತರ ಸಮಿತಿ ಅಧ್ಯಕ್ಷ ಅರ್ಜುನ ರಣತುಂಗ ಹೊಸ ಬಾಂಬ್ ಸಿಡಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಜಯ್ ಶಾ ಮತ್ತು ಶ್ರೀಲಂಕಾ ಮಂಡಳಿ ಅಧಿಕಾರಿಗಳ ನಡುವೆ ಒಳಒಪ್ಪಂದ ನಡೆದಿತ್ತು. ದಬ್ಬಾಳಿಕೆ ನಡೆಸುತ್ತಿದ್ದರು. ಕಾರಣ ದೇಶದಲ್ಲಿ ಕ್ರಿಕೆಟ್ ಮಂಡಳಿ ಇಷ್ಟು ಹೀನಾಯ ಸ್ಥಿತಿಗೆ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಧಿಕಾರ ನಡೆಸುತ್ತಿದ್ದದ್ದು ಜಯ್ ಶಾ
ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಮ್ಮ ತಂದೆ ಗೃಹ ಸಚಿವ ಅಮಿತ್ ಶಾ ಅವರ ಅಧಿಕಾರ ಉಪಯೋಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದರು. ಹೆಸರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಾದರೂ, ಅಧಿಕಾರ ನಡೆಸುತ್ತಿದ್ದದ್ದು ಮಾತ್ರ ಜಯ್ ಶಾ. ಮಂಡಳಿಯ ಅಧಿಕಾರಿಗಳು ಸಹ ಜಯ್ ಶಾ ಮಾತಿಗೆ ಎದುರು ಮಾತನಾಡುತ್ತಿರಲಿಲ್ಲ. ಅವರ ಪ್ರಭಾವವೇ ಹೀಗಾಗಲು ಕಾರಣ. ಕ್ರಿಕೆಟ್ ಮಂಡಳಿ ಜಯ್ ಶಾ ಕೈಗೊಂಬೆಯಾಗಿತ್ತು. ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಕೆಳಗಿಳಿಯಲು ಕೂಡ ಜಯ್ ಶಾ ಕಾರಣ ಎಂದು ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕುತಂತ್ರ ನಡೆಸಿ ಗಂಗೂಲಿಯನ್ನು ಕೆಳಗಿಳಿಸಿದ್ರು!
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸುವ ಸಲುವಾಗಿ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷನ ಪಟ್ಟ ಕಟ್ಟಲಾಯಿತು. ಆದರೆ ಗಂಗೂಲಿ ಬಿಜೆಪಿ ಸೇರಲು ಒಪ್ಪದ ಕಾರಣ ಅವರನ್ನು ಕೆಳಗಿಳಿಸಲು ಜಯ್ ಶಾ ಕುತಂತ್ರ ನಡೆಸಿದರು. ಆ ಮೂಲಕ ಕೆಳಗಿಳಿಸಿದರು. ಆದರೆ ಆತ ಮಾತ್ರ ಬಿಸಿಸಿಐ ಕಾರ್ಯದರ್ಶಿಯಾಗಿ 2ನೇ ಬಾರಿಗೆ ಆಯ್ಕೆಯಾದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಶ್ವಕಪ್ನಲ್ಲಿ ಲಂಕಾ ಪ್ರದರ್ಶನ
ಪ್ರಸ್ತುತ ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಶ್ರೀಲಂಕಾ ಅತ್ಯಂತ ಹೀನಾಯ ಪ್ರದರ್ಶನ ನೀಡಿತು. ತಾನಾಡಿದ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತು. 7 ಪಂದ್ಯಗಳಲ್ಲಿ ಸೋತು ಕೇವಲ 4 ಅಂಕ ಪಡೆದು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು. ಇದರೊಂದಿಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಸದ್ಯ ಲಂಕಾ ಕ್ರಿಕೆಟ್ ಮಂಡಳಿ ಅಮಾನತುಗೊಂಡಿದ್ದು, ಯಾವುದೇ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವಂತಿಲ್ಲ.