ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ವಿಕೆಟ್ ಕೀಪರ್ ಇಶಾನ್ ಕಿಶನ್ ಔಟ್; ಹಿರಿಯ ಅಧಿಕಾರಿ ಹೇಳಿದ್ದೇನು?
Feb 14, 2024 10:00 AM IST
ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ವಿಕೆಟ್ ಕೀಪರ್ ಇಶಾನ್ ಕಿಶನ್ ಔಟ್
- Ishan Kishan : ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೇಳಿದರೂ ಅವರ ಮಾತಿಗೂ ಕಿಮ್ಮತ್ತು ನೀಡದ ಇಶಾನ್ ಕಿಶನ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಚಿಂತನೆ ನಡೆಸಿದೆ ಎಂಬ ವದಂತಿಗಳಿವೆ.
ಕಳೆದೊಂದು ತಿಂಗಳಿಂದ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಆತನನ್ನು ತಂಡಕ್ಕೆ ಆಯ್ಕೆ ಮಾಡಬೇಕೇ ಬೇಡವೇ ಎನ್ನುವುದರ ಕುರಿತು ಬಿಸಿಸಿಐ (BCCI) ಚಿಂತನೆ ನಡೆಸುತ್ತಿದೆ. ಸುಳ್ಳಿ ಹೇಳಿ ಅಶಿಸ್ತಿನಿಂದ ನಡೆದುಕೊಂಡ ಯುವ ಆಟಗಾರರನಿಗೆ ಡ್ರಾಪ್ ಶಿಕ್ಷೆ ಕೊಡುತ್ತಿದೆ. ಕೆಲವರು ಆತನಿಗೇಕೆ ಅಷ್ಟೊಂದು ಹೈಪ್ ಕೊಡ್ತೀರಾ? ಬೇರೆ ವಿಕೆಟ್ ಕೀಪರ್ಗಳು ಕಣ್ಣಿಗೆ ಕಾಣುತ್ತಿಲ್ಲವೇ ಎನ್ನುತ್ತಿದ್ದಾರೆ.
ಗುತ್ತಿಗೆ ಪಟ್ಟಿಯಿಂದ ಔಟ್?
ಮಾನಸಿಕ ಆಯಾಸದ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ನಂತರ ನಿಜವಾಗಿಯೂ ಇಶಾನ್ ಕಿಶನ್ ಕಠಿಣ ಸಮಯ ಎದುರಿಸುತ್ತಿದ್ದಾರೆ. ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೇಳಿದರೂ ಅವರ ಮಾತಿಗೂ ಕಿಮ್ಮತ್ತು ನೀಡದ ಇಶಾನ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಚಿಂತನೆ ನಡೆಸಿದೆ ಎಂಬ ವದಂತಿಗಳಿವೆ.
ವಿಶ್ರಾಂತಿ ಹೇಳಿ ಪಾರ್ಟಿಗೆ ಹೋಗಿದ್ದ ಇಶಾನ್
ನಾನು ಆಯಾಸಗೊಂಡಿದ್ದೇನೆ. ನನಗೆ ರೆಸ್ಟ್ ಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡಿದ್ದ ಇಶಾನ್, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದಾಗಿ ಹೇಳಿದ್ದರು. ಹಾಗಾಗಿ ವಿಶ್ರಾಂತಿ ನೀಡಲಾಗಿತ್ತು. ಆದರೆ ಮಾನಸಿಕ ಆಯಾಸವೆಂದು ಹೇಳಿ ದುಬೈನಲ್ಲಿ ಪಾರ್ಟಿಗೆ ಹೋಗಿದ್ದ ಕಿಶನ್, ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ಬನೇಗಾ ಕರೋಡ್ಪತಿಯಲ್ಲೂ ಭಾಗವಹಿಸಿದ್ದರು.
ಇಶಾನ್ ಕಿಶಾನ್ ನಡೆ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ಗೆ ಕೋಪ ತರಿಸಿತ್ತು. ಹಾಗಾಗಿ ರಣಜಿ ಆಡಿದರೆ ಮಾತ್ರ ಭಾರತ ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದು ಮುಖ್ಯಕೋಚ್ ರಾಹುಲ್ ದ್ರಾವಿಡ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದರೆ, ಗುರು ಮಾತಿಗೂ ಬೆಲೆ ಕೊಡದ ಯುವ ಆಟಗಾರ ಜಾರ್ಖಂಡ್ ಪರ ಒಂದು ಪಂದ್ಯವೂ ರಣಜಿ ಆಡಿಲ್ಲ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ಬೇಸತ್ತ ಬಿಸಿಸಿಐ
ಇಶಾನ್ ಕಿಶನ್ ನಡೆದುಕೊಂಡ ಅಶಿಸ್ತಿನಿಗೆ ಬೇಸರಗೊಂಡ ಬಿಸಿಸಿಐ, ಅಫ್ಘನ್ ವಿರುದ್ಧದ ಟಿ20 ಸರಣಿಗೆ ಆತನನ್ನು ಆಯ್ಕೆ ಮಾಡಲಿಲ್ಲ. ಇದಕ್ಕೂ ಮೊದಲು ಟೆಸ್ಟ್ ಕ್ರಿಕೆಟ್ಗೆ ಮೊದಲ ಆದ್ಯತೆಯಾಗಿದ್ದ ಇಶಾನ್ ಅವರನ್ನು ಇಂಗ್ಲೆಂಡ್ ಸರಣಿಗೂ ಸೆಲೆಕ್ಟ್ ಮಾಡಲಾಗಿಲ್ಲ. ಬದಲಿಗೆ ಯುವ ಆಟಗಾರ ದ್ರುವ್ ಜುರೆಲ್ಗೆ ಮಣೆ ಹಾಕಲಾಯಿತು. ಇಷ್ಟಾದರೂ ರಣಜಿ ಆಡುವಂತೆ ಮತ್ತೊಮ್ಮೆ ಬಿಸಿಸಿಐ ಸೂಚಿಸಿತ್ತು.
ತದನಂತರವೂ ಬಿಸಿಸಿಐ ಹೇಳಿದ ಮಾತನ್ನು ಲೆಕ್ಕಿಸದೆ ಇಶಾನ್ ಮತ್ತೆ ರಣಜಿ ಆಡದೆ ದೂರ ಉಳಿದರು. ಹೀಗಾಗಿ ಸಾಕಷ್ಟು ಕೋಪ ತರಿಸಿದ ಕಾರಣ ಆತನಿಗೆ ಮತ್ತೊಂದು ಶಿಕ್ಷೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ತಂಡಕ್ಕೆ ಆಯ್ಕೆಯಾಗದೆ ದೂರವಾಗಿರುವ ವಿಕೆಟ್ ಕೀಪರ್ರನ್ನು ಗುತ್ತಿಗೆಯಿಂದ ಬಿಸಿಸಿಐ ನಿರ್ಧರಿಸಿದೆ ಎಂಬ ವದಂತಿಗಳು ಹರಡಿವೆ. ಆದರೆ ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
ಪಿಟಿಐ ಜೊತೆಗಿನ ಸಂವಾದದಲ್ಲಿ, ಕಿಶನ್ ಅವರನ್ನು ಅವರ ಸೆಂಟ್ರಲ್ ಗುತ್ತಿಗೆ ಒಪ್ಪಂದದಿಂದ ನಿಜವಾಗಿಯೂ ಬಿಡುಗಡೆ ಮಾಡಲಾಗಿದೆಯೇ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರನ್ನು ಕೇಳಿದಾಗ, 'ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ' ಎಂದು ಅವರು ಉತ್ತರಿಸಿದ್ದಾರೆ. 'ಕೇಂದ್ರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆದಿಲ್ಲ' ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಐಪಿಎಲ್ 2024ರ ಸೀಸನ್ಗೆ ಮುಂಚಿತವಾಗಿ ಇಶಾನ್ ಬರೋಡಾದಲ್ಲಿ ಪಾಂಡ್ಯ ಸಹೋದರರೊಂದಿಗೆ ಅಭ್ಯಾಸದಲ್ಲಿ ಕಾಣಿಸಿಕೊಂಡು ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಲು ಮತ್ತೆ ಹಿಂದೆ ಸರಿದಿದ್ದರು. ಭಾರತ ರೆಡ್ಬಾಲ್ ತಂಡದಿಂದ ಹೊರಗುಳಿದ ಆಟಗಾರರು 3-4 ರಣಜಿ ಪಂದ್ಯಗಳನ್ನು ಆಡಬೇಕು. ಇಲ್ಲವಾದಲ್ಲಿ ಐಪಿಎಲ್ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿ ಬಹಿರಂಗಪಡಿಸಿದ್ದಾರೆ.