ನಿಮಗೆ ಪ್ರದರ್ಶನಕ್ಕಿಂತ ಪವಾಡದ ಮೇಲೆ ನಂಬಿಕೆ ಹೆಚ್ಚು; ಬಾಬರ್ ನಾಯಕತ್ವ ಟೀಕಿಸಿದ ಅಫ್ರಿದಿ
Oct 27, 2023 05:00 AM IST
ಶಾಹೀದ್ ಅಫ್ರಿದಿ ಮತ್ತು ಬಾಬರ್ ಅಜಮ್.
- Babar Azam - Shahid Afridi: ನಾಯಕನಾದವನು, ತಂಡಕ್ಕೆ ಪ್ರೇರಣೆಯಾಗಬೇಕು. ಆದರೆ ನಿಮ್ಮಲ್ಲಿ ಅದರ ಕೊರತೆ ಇದೆ. ಮೈದಾನದಲ್ಲಿ ನಿಮ್ಮ (ಬಾಬರ್) ವರ್ತನೆ ಮತ್ತು ನಾಯಕತ್ವದ ನಿರ್ಧಾರಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರೇರಣೆಗೆ ಒಳಗಾಗುವಂತಿಲ್ಲ ಎಂದು ಶಾಹೀದ್ ಅಫ್ರಿದಿ ಟೀಕಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಅಫ್ಘಾನಿಸ್ತಾನ ವಿರುದ್ಧ ಹೀನಾಯ ಪಾಕಿಸ್ತಾನ (Pakistan vs Afghanistan) ಸೋಲಿನ ಬಳಿಕ ಬಾಬರ್ ಅಜಮ್ (Babar Azam) ನಾಯಕತ್ವದ ಕುರಿತು ಚರ್ಚೆಗಳು ನಡೆಯುತ್ತಿವೆ. ಏಕದಿನ ವಿಶ್ವಕಪ್ ಬಳಿಕ ಅವರನ್ನು ಕೆಳಗಿಳಿಸಿ ಬೇರೆಯವರಿಗೆ ಪಟ್ಟ ಕಟ್ಟಬೇಕೆಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನಲ್ಲೂ (Pakistan Cricket Board) ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ತಮ್ಮ ದೇಶದ ಮಾಜಿ ಕ್ರಿಕೆಟಿಗರು ಸಹ ಬಾಬರ್ ಮೇಲೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium, Chennai) ನಿಧಾನಗತಿಯ ಪಿಚ್ನಲ್ಲಿ ಅಫ್ಘಾನಿಸ್ತಾನಕ್ಕೆ ಸ್ಪರ್ಧಾತ್ಮಕ 283 ರನ್ಗಳ ಗುರಿ ನೀಡಿದ್ದರೂ, ಅದನ್ನು ರಕ್ಷಿಸಿಕೊಳ್ಳಲು ಪಾಕ್ ವಿಫಲವಾಯಿತು. ರಹಮಾನುಲ್ಲಾ ಗುರ್ಬಾಜ್ (65) ಮತ್ತು ಇಬ್ರಾಹಿಂ ಜದ್ರಾನ್ (87) ಬಲವಾದ ಆರಂಭ ಒದಗಿಸಿದ್ದರಿಂದ ಪಾಕಿಸ್ತಾನ 8 ವಿಕೆಟ್ಗಳ ಸೋಲನ್ನು ಒಪ್ಪಿಕೊಂಡಿತು. ರೆಹಮತ್ ಶಾ ಅಜೇಯ 77, ಹಶ್ಮತುಲ್ಲಾ ಶಾಹಿದಿ ಔಟಾಗದೆ 48 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಾಕ್ ಮಾಜಿ ಕ್ರಿಕೆಟಿಗರ ಆರೋಪ
ಆಘಾತಕಾರಿ ಸೋಲಿನ ನಂತರ ಪಾಕಿಸ್ತಾನದ ವಿಶ್ವಕಪ್ ಅಭಿಯಾನವು ಅಂಚಿನಲ್ಲಿ ನಿಂತಿದೆ. ಟೂರ್ನಿಯಲ್ಲಿ ಕಳಪೆ ಪ್ರದರ್ಶನಕ್ಕಾಗಿ ಮಾಜಿ ಆಟಗಾರರು ನಾಯಕ ಬಾಬರ್ ಅಜಮ್ ಮತ್ತು ಇತರ ಆಟಗಾರರನ್ನು ಹರಿಹಾಯ್ದಿದ್ದಾರೆ. ವಾಸೀಂ ಅಕ್ರಮ್, ಮಿಸ್ಬಾ ಉಲ್ ಹಕ್, ರಮಿಜ್ ರಾಜಾ, ರಶೀದ್ ಲತೀಫ್, ಮುಹಮ್ಮದ್ ಹಫೀಜ್, ಆಕಿಬ್ ಜಾವೇದ್, ಶೋಯೆಬ್ ಮಲಿಕ್, ಮೊಯಿನ್ ಖಾನ್ ಅಥವಾ ಶೋಯೆಬ್ ಅಖ್ತರ್ ಅವರು, ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನದ ಸೋಲಿನ ಓಟಕ್ಕೆ ಬಾಬರ್ ಕಾರಣ ಎಂದು ಆರೋಪಿಸಲಾಗಿದೆ.
ಶಾಹೀದ್ ಅಫ್ರಿದಿ ಸರದಿ
ಇವರ ಬೆನ್ನಲ್ಲೇ ಮಾಜಿ ನಾಯಕ ಶಾಹೀದ್ ಅಫ್ರಿದಿ ಟೀಕೆ ನಡೆಸಿದ್ದಾರೆ. ನಾಯಕನಾದವನು, ತಂಡಕ್ಕೆ ಪ್ರೇರಣೆಯಾಗಬೇಕು. ಆದರೆ ನಿಮ್ಮಲ್ಲಿ ಅದರ ಕೊರತೆ ಇದೆ. ಮೈದಾನದಲ್ಲಿ ನಿಮ್ಮ (ಬಾಬರ್) ವರ್ತನೆ ಮತ್ತು ನಾಯಕತ್ವದ ನಿರ್ಧಾರಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರೇರಣೆಗೆ ಒಳಗಾಗುವಂತಿಲ್ಲ. ಪಂದ್ಯದಲ್ಲಿ ಸರಿಯಾದ ಪ್ರದರ್ಶನ ತೋರದೇ ಇರುವುದನ್ನು ಗಮನಿಸಿದರೆ ನೀವು ಚಿಪ್ಪಿನೊಳಗೆ ಅಡಗಿರುವಂತೆ ಭಾಸವಾಗುತ್ತದೆ ಎಂದು ಕಿಡಿಕಾರಿದ್ದಾರೆ.
‘ನಿಮಗೆ ಪ್ರದರ್ಶನಕ್ಕಿಂತ ಪವಾಡದ ಮೇಲೆ ನಂಬಿಕೆ’
ಆಟದಲ್ಲಿ ತೋರುವ ಪ್ರದರ್ಶನಕ್ಕಿಂತ ಪವಾಡಕ್ಕೆ ಕಾಯುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ಆದರೆ ಇಲ್ಲಿ ಒಂದು ತಿಳಿಯಬೇಕು. ನೀವು ಹೇಗೆ ಹೋರಾಡಬೇಕೆಂದು ತಿಳಿದಾಗ ಮಾತ್ರ ಪವಾಡಗಳು ಸೃಷ್ಟಿಯಾಗುತ್ತವೆ. ನಾಯಕನಾದವನು ಸಹ ಆಟಗಾರರಿಗೆ ಸ್ಫೂರ್ತಿಯಾಗಬೇಕು. ಫೀಲ್ಡಿಂಗ್ ಮಾಡುವಾಗ ಡೈವ್ ಮಾಡಬೇಕು. ಮೈದಾನದ ತುಂಬೆಲ್ಲಾ ಓಡುತ್ತಿರಬೇಕು. ಚುರುಕಾಗಿರಬೇಕು. ನಾಯಕನ ವರ್ತನೆ ಕಂಡು ನಿಮ್ಮ ಸಹ ಆಟಗಾರನಿಗೂ ನಾನು ಕೂಡ ಅದೇ ರೀತಿ ಇರಬೇಕೆಂಬ ಛಲ ಬರುತ್ತದೆ ಎಂದು ಸಾಮಾ ಟಿವಿಯಲ್ಲಿ ಹೇಳಿದ್ದಾರೆ.
‘ಸಾಕಷ್ಟು ಕಸರತ್ತು ನಡೆಸಬೇಕು’
ನಾನು ನಾಯಕನಾಗಿದ್ದೆ. ಮೊಹಮ್ಮದ್ ಯೂಸುಫ್ ಕೂಡ ಆಗಿದ್ದರು. ಕ್ಯಾಪ್ಟನ್ ಹೆಚ್ಚಿನ ಶ್ರಮ ಹಾಕದಿದ್ದರೆ, ತಂಡದ ಆಟಗಾರರೇ ಪ್ರೇರಣೆ ಪಡೆಯುವುದಿಲ್ಲ. ಒತ್ತಡ ಹೇರುವುದು ನಾಯಕನ ಪಾತ್ರ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ತಂಡವನ್ನು ಗೆಲುವಿನ ಗೆರೆ ದಾಟಿಸಲು ಸಾಕಷ್ಟು ತಂತ್ರಗಳನ್ನು ರೂಪಿಸಬೇಕು. ಸಾಕಷ್ಟು ಕಸರತ್ತು ನಡೆಸಬೇಕು. ಎಲ್ಲವೂ ಪವಾಡಗಳಿಂದಲೇ ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ ಎಂದು ಅಫ್ರಿದಿ ಸಲಹೆ ನೀಡಿದ್ದಾರೆ.
ಎದುರಾಳಿಗಳ ಮೇಲೆ ಒತ್ತಡ ಹೇರುವ ಕಲೆಯನ್ನು ಕಲಿಯುವಂತೆ ಒತ್ತಾಯಿಸಿದ ಅಫ್ರಿದಿ, ಆಸ್ಟ್ರೇಲಿಯಾ ಮತ್ತು ಅಫ್ಘನ್ ಪಂದ್ಯಗಳಲ್ಲಿ ಒಬ್ಬ ವೇಗಿ ಬೌಲಿಂಗ್ ಮಾಡುತ್ತಿದರೂ ಸ್ಲಿಪ್ನಲ್ಲಿ ಫೀಲ್ಡರ್ ಅನ್ನು ನಿಲ್ಲಿಸಲೇ ಇಲ್ಲ. 12 ಎಸೆತಗಳಲ್ಲಿ 4 ರನ್ ಅಗತ್ಯ ಇದ್ದಾಗ ಮತ್ತು ನೀವು ಬ್ಯಾಕ್ವರ್ಡ್ ಪಾಯಿಂಟ್ ತೆಗೆದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ಅದೇ ಆಸೀಸ್ ತಂಡವನ್ನು ನೋಡಿ ಕಲಿಯಿರಿ. ಹೇಗೆ ಫೀಲ್ಡಿಂಗ್ ಸೆಟ್ ಮಾಡಿದರೆ, ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಬಹುದು ಎಂಬುದನ್ನು ಅವರಿಂದ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.