Prakash Raj On Pathaan: ‘ಬೇಷರಮ್ ರಂಗ್’ನಲ್ಲಿ ಕೇಸರಿ ಬಿಕಿನಿ; ‘ಅಸಹ್ಯ.. ಇದನ್ನು ಎಲ್ಲಿವರೆಗೂ ಸಹಿಸಿಕೊಳ್ಳಬೇಕು’ ಎಂದ ಪ್ರಕಾಶ್ ರಾಜ್
Dec 15, 2022 01:55 PM IST
‘ಬೇಷರಮ್ ರಂಗ್’ನಲ್ಲಿ ಕೇಸರಿ ಬಿಕಿನಿ; ‘ಅಸಹ್ಯ.. ಇದನ್ನು ಎಲ್ಲಿವರೆಗೂ ಸಹಿಸಿಕೊಳ್ಳಬೇಕು’ ಎಂದ ಪ್ರಕಾಶ್ ರಾಜ್
- ಅನಿಸಿದ್ದನ್ನು ನೇರವಾಗಿ ಹೇಳುವ ಪ್ರಕಾಶ್ ರಾಜ್, ಇದೀಗ ದೇಶದಲ್ಲಿ ಕಾಂಟ್ರವರ್ಸಿ ಅಲೆ ಸೃಷ್ಟಿಸಿರುವ ಪಠಾಣ್ (Pathaan) ಚಿತ್ರದ ‘ಬೇಷರಮ್ ರಂಗ್’ ಹಾಡಿನ ಬಗ್ಗೆಯೂ ಮಾತನಾಡಿದ್ದಾರೆ.
Prakash Raj On Pathaan Song: ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಸದಾ ಗಮನಿಸುತ್ತಿರುತ್ತಾರೆ. ಕೆಲವು ಘಟನಾವಳಿಗಳ ಬಗ್ಗೆ ನೇರವಾಗಿ ಕುಟುಕಿದ ಉದಾಹರಣೆಗಳಿಗೇನು ಕಡಿಮೆ ಇಲ್ಲ. ಅನಿಸಿದ್ದನ್ನು ನೇರವಾಗಿ ಹೇಳುವ ಪ್ರಕಾಶ್ ರಾಜ್, ಇದೀಗ ದೇಶದಲ್ಲಿ ಕಾಂಟ್ರವರ್ಸಿ ಅಲೆ ಸೃಷ್ಟಿಸಿರುವ ಪಠಾಣ್ (Pathaan) ಚಿತ್ರದ ‘ಬೇಷರಮ್ ರಂಗ್’ ಹಾಡಿನ ಬಗ್ಗೆಯೂ ಮಾತನಾಡಿದ್ದಾರೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಮ್ ರಂಗ್’ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಹಲ್ಚಲ್ ಸೃಷ್ಟಿಸಿರುವ ಹಾಡು ಕೆಲವರ ಕೆಂಗೆಣ್ಣಿಗೆ ಗುರಿಯಾಗಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ‘ಪಠಾಣ್’ ಸಿನಿಮಾ ಬ್ಯಾನ್ಗೆ ಒತ್ತಾಯ ಕೇಳಿಬಂದಿದೆ. ಪ್ರತಿಭಟನೆಗಳೂ ನಡೆದಿವೆ. ಈಗ ಈ ಘಟನಾವಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, "ಅಸಹ್ಯ.. ಇನ್ನೂ ಎಷ್ಟು ಅಂತ ಇಂಥ ಮೌಢ್ಯವನ್ನು ಸಹಿಸಿಕೊಳ್ಳಬೇಕು.. ಬಣ್ಣದ ಕುರುಡುತನವ" ಎಂದಿದ್ದಾರೆ.
ಅಂದಹಾಗೆ, ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿಯಲ್ಲಿ ದೀಪಿಕಾ ಎದುರಾಗಿದ್ದಾರೆ. ಇದನ್ನು ಖಂಡಿಸಿರುವ ಕೆಲ ಹಿಂದೂಪರ ಸಂಘಟನೆಗಳು ಚಿತ್ರವನ್ನು ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಅದೇ ರೀತಿ ಬಿಜೆಪಿಯ ಕೆಲವರು ಕಾಂಟ್ರವರ್ಸಿಗೆ ಮಾತು ಪೋಣಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದ ಪ್ರಕಾಶ್ ರಾಜ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಅಸಹ್ಯಕರ.. ಇದನ್ನೆಲ್ಲ ನಾವು ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು? ಇದು ಬಣ್ಣದ ಕುರುಡುತನ’ ಎಂದು ಟ್ವಿಟ್ ಮಾಡಿದ್ದಾರೆ. ಇದರ ಜತೆಗೆ #AndhBhakts ಮತ್ತು #justasking ಎಂಬ ಹ್ಯಾಷ್ಟ್ಯಾಗ್ ಹಾಕಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ‘ಪಠಾಣ್’ ಸಿನಿಮಾ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇಲ್ಲಿವ ವೀರ ಶಿವಾಜಿ ಗುಂಪು ಇಂದೋರ್ ಸಿಟಿಯ ಪ್ರಮುಖ ಸ್ಥಳದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ. ಮುಂದಿನ ಜನವರಿಯಲ್ಲಿ ಬಿಡುಗಡೆಗೆ ಸಿದ್ಧವಿರುವ ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಆಗ್ರಹ ಪ್ರತಿಭಟನಾಕಾರರದ್ದು.
ಸಚಿವ ನರೋತ್ತಮ್ ಮಿಶ್ರಾ ಖಂಡನೆ..
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ಪಠಾಣ್ ಸಿನಿಮಾದ ಹಾಡಿನ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. "ಹಾಡಿನಲ್ಲಿ ಬಳಸಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಭ್ರಷ್ಟ ಮನಸ್ಥಿತಿಯಿಂದ ಈ ಹಾಡನ್ನು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈಗಾಗಲೇ ದೀಪಿಕಾ ಪಡುಕೋಣೆ ಜೆಎನ್ಯು ಪ್ರಕರಣದಲ್ಲಿ ತುಕ್ಡೆ-ತುಕ್ಡೆ ಗ್ಯಾಂಗ್ನ ಬೆಂಬಲಿಗರಾಗಿದ್ದಾರೆ. ಈ ಕಾರಣಕ್ಕಾಗಿ, ಹಾಡಿನಲ್ಲಿನ ದೃಶ್ಯಗಳನ್ನು ಸರಿಪಡಿಸಬೇಕೆಂದು ನಾನು ವಿನಂತಿಸುತ್ತೇನೆ. ಕಾಸ್ಟ್ಯೂಮ್ಸ್ ಸರಿಪಡಿಸಿ, ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೋ ಇಲ್ಲವೋ ಅನ್ನೋದು ಪ್ರಶ್ನೆ" ಎಂದಿದ್ದಾರೆ.