Actress Deepa committed Suicide: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವನಟಿ ದೀಪಾ..!
Sep 19, 2022 06:58 AM IST
ತಮಿಳು ನಟಿ ದೀಪಾ ಆತ್ಮಹತ್ಯೆ
- ದೀಪಾ ಕೆಲವು ದಿನಗಳಿಂದ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲವಾದ್ದರಿಂದ ಆತನ ಸ್ನೇಹಿತರೊಬ್ಬರು ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ಆಕೆಯ ಅಪಾರ್ಟ್ಮೆಂಟ್ ಬಳಿ ತೆರಳಿ ಪರಿಶೀಲಿಸಿದಾಗ ದೀಪಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿತ್ರರಂಗದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣ ಮುಂದುವರೆದಿದೆ. ಕೆಲವು ದಿನಗಳ ಹಿಂದಷ್ಟೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಲಿವುಡ್ನ ಗೀತರಚನೆಕಾರ ಕಬಿಲನ್ ಪುತ್ರಿ ತೂರಿಗಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಯುವ ನಟಿ ದೀಪಾ, ಆತ್ಮಹತ್ಯೆಗೆ ಶರಣಾಗಿದ್ದಾರೆ. ದೀಪಾಗೆ 29 ವರ್ಷ ವಯಸ್ಸಾಗಿತ್ತು.
ದೀಪಾಗೆ ಪೌಲಿನ್ ಜೆಸ್ಸಿಕಾ ಎಂಬ ಮತ್ತೊಂದು ಹೆಸರಿತ್ತು. ಭಾನುವಾರ ಮಧ್ಯಾಹ್ನ ದೀಪಾ ಚೆನ್ನೈನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ದೀಪಾ ಕೆಲವು ದಿನಗಳಿಂದ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲವಾದ್ದರಿಂದ ಆತನ ಸ್ನೇಹಿತರೊಬ್ಬರು ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ಆಕೆಯ ಅಪಾರ್ಟ್ಮೆಂಟ್ ಬಳಿ ತೆರಳಿ ಪರಿಶೀಲಿಸಿದಾಗ ದೀಪಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಆತ ನಮಗೆ ವಿಚಾರ ಮುಟ್ಟಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೀಪಾ ಕೆಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದು ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ದೀಪಾ ಸಾಯುವ ಮುನ್ನ ಡೆತ್ ನೋಟ್ ಬರೆದಿದ್ದು, ಕೊನೆಯವರೆಗೂ ನಾನು ಆತನನ್ನೇ ಪ್ರೀತಿಸುತ್ತೇನೆ ಎಂದು, ವ್ಯಕ್ತಿಯ ಹೆಸರು ಉಲ್ಲೇಖಿಸದೆ ಬರೆದಿದ್ದಾರೆ ಎನ್ನಲಾಗಿದೆ. ಪೊಲೀಸರು ದೀಪಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೀಪಾ ತುಪ್ಪಾರಿವಾಲನ್, ವಾಯ್ಡಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ದೀಪಾ ಆತ್ಮಹತ್ಯೆ ವಿಚಾರ ತಿಳಿದ ಆಕೆಯ ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಕೂಡಾ ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
2020 ರಲ್ಲಿ ದೊಡ್ಡ ಸುದ್ದಿಯಾಗಿದ್ದ ನಟಿ ಚಿತ್ರಾ ಆತ್ಮಹತ್ಯೆ
9 ಡಿಸೆಂಬರ್ 2020 ರಂದು ತಮಿಳು ನಟಿ, ನಿರೂಪಕಿ ಚಿತ್ರಾ ನಜರತ್ಪೇಟ್ನ ಫೈವ್ಸ್ಟಾರ್ ಹೋಟೆಲ್ನಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದರು. ಚಿತ್ರಾ ಇನ್ನಿಲ್ಲ ಎಂದು ತಿಳಿದಾಗ ಅಭಿಮಾನಿಗಳು ಶಾಕ್ ಆಗಿದ್ದರು. ನಿರೂಪಕಿಯಾಗಿ ಬಣ್ಣದ ಲೋಕದಲ್ಲಿ ಕರಿಯರ್ ಆರಂಭಿಸಿದ್ದ ಚಿತ್ರಾ, ಸ್ಟಾರ್ ವಿಜಯ್ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಂಡಿಯನ್ ಸ್ಟೋರ್ಸ್' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಚಿತ್ರಾ ಅಭಿನಯಿಸುತ್ತಿದ್ದ ಮುಲ್ಳೈ ಎಂಬ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸಾಯುವ ಕೆಲವು ದಿನಗಳ ಹಿಂದಷ್ಟೇ ಚಿತ್ರಾಗೆ ಹೇಮನಾಥನ್ ಎಂಬುವವರೊಂದಿಗೆ ನಿಶ್ಚಿತಾರ್ಥ ಕೂಡಾ ಆಗಿತ್ತು. ಆದರೆ ಡಿಸೆಂಬರ್ 9 ರಂದು ಚಿತ್ರಾ ಶೂಟಿಂಗ್ ಮುಗಿಸಿ ಬಂದವರೇ ಹೋಟೆಲ್ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಮನಾಥನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ತೆಲುಗು ಸಹಾಯಕ ನಿರ್ದೇಶಕ
ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಾಯಿಕುಮಾರ್ ಎಂಬುವವರು ಇತ್ತೀಚೆಗೆ ಹೈದರಾಬಾದ್ನ ದುರ್ಗಂ ಚೆರುವು (ಕೆರೆ)ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಭಾದೆ ತಾಳಲಾರದೆ ಆತ ಸಾವನ್ನಪ್ಪಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಒಟ್ಟಿನಲ್ಲಿ ನಾನಾ ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಬರುವ ಯುವ ಪ್ರತಿಭೆಗಳು ಹೀಗೆ ಆತ್ಮಹತ್ಯೆಯಂತ ದಾರಿ ಹಿಡಿಯುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ.