Praveen Nettaru Murder Case: ರಾಜ್ಯಾದ್ಯಂತ ಎನ್ಐಎ ಅಧಿಕಾರಿಗಳ ದಾಳಿ; ಮತ್ತೆ ಮೂವರ ವಶ
Nov 05, 2022 10:00 AM IST
ಪ್ರವೀಣ್ ನೆಟ್ಟಾರು
- ಬೆಳ್ಳಾರೆ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಾಗೂ ಸುಳ್ಯದಲ್ಲೂ ದಾಳಿ ನಡೆದಿದೆ. ಅಲ್ಲದೆ ಮೈಸೂರು ಹಾಗೂ ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿ ಪಿಎಫ್ಐ ಮುಖಂಡರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಮಂಗಳೂರು: ಪುತ್ತೂರು ಸಮೀಪದ ಬೆಳ್ಳಾರೆ ಬಳಿ ಹತ್ಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳ ತಂಡವು, ಇಂದು ಮೂವರನ್ನು ವಶಪಡಿಸಿಕೊಂಡಿದೆ.
ರಾಷ್ಟ್ರೀಯ ತನಿಖಾ ದಳ (National Investigation Agency)ದ ಅಧಿಕಾರಿಗಳು, ಈಗಾಗಲೇ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ , ಇಂದು ಮುಂಜಾನೆ ತನಿಖಾ ಸಂಸ್ಥೆ ಅಧಿಕಾರಿಗಳ ತಂಡವು ಬೆಳ್ಳಾರೆಯಲ್ಲಿ ದಾಳಿ ನಡೆಸಿದೆ. ಈ ವೇಳೆ ಇಬ್ರಾಹಿಂ ಶಾ, ಶಾಫಿ ಬೆಳ್ಳಾರೆ ಹಾಗೂ ಇಕ್ಬಾಲ್ ಹೆಸರಿನ ಮೂವರು ಆರೋಪಿಗಳು ಸೆರೆಸಿಕ್ಕಿದ್ದಾರೆ.
ಈ ಆರೋಪಿಗಳಲ್ಲಿ ಶಾಫಿ ಬೆಳ್ಳಾರೆ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿದ್ದು, ಇಕ್ಬಾಲ್ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಎನ್ನಲಾಗಿದೆ.
ಬೆಳ್ಳಾರೆ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಾಗೂ ಸುಳ್ಯದಲ್ಲೂ ದಾಳಿ ನಡೆದಿದೆ. ಅಲ್ಲದೆ ಮೈಸೂರು ಹಾಗೂ ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿ ಪಿಎಫ್ಐ ಮುಖಂಡರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಪುತ್ತೂರಿನ ಸುತ್ತಮುತ್ತ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಪುತ್ತೂರು, ಬೆಳ್ಳಾರೆ ಹಾಗೂ ಸುಳ್ಯ ಸುತ್ತಮುತ್ತಲ ಪ್ರದೇಶದಲ್ಲಿ ಎನ್ಐಎ ಅಧಿಕಾರಿಗಳ ಒಟ್ಟು ಆರು ತಂಡಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಧಿಕಾರಿಗಳು ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿಕೊಳ್ಳುತ್ತಿದ್ದಾರೆ.
ನಿಷೇಧಿತ ಪಿಎಫ್ಐ ಸಂಘಟನೆಯ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಮೈಸೂರಿನ ಮಂಡಿ ಮೊಹಲಾದಲ್ಲಿರುವ ಮಹಮ್ಮದ್ ಸುಲೇಮಾನ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ.
ಇನ್ನೊಂದೆಡೆ ಹಳೆ ಹುಬ್ಬಳ್ಳಿಯ ನುರಾನಿ ಪ್ಲಾಟ್ನಲ್ಲಿರುವ ಎಸ್ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾಬಂದ್ ಮನೆ ಮೇಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಸುಕಿನ ಜಾವ ನಾಲ್ಕು ಗಂಟೆಗೆ ಎನ್ಐಎ ಅಧಿಕಾರಿಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟು 10 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳು ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಬಹುಮಾನ ಘೋಷಣೆ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಘೋಷಿಸಿತ್ತು. ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿರುವ ಎನ್ಐಎ, ಒಟ್ಟು 14 ಲಕ್ಷ ರೂಪಾಯಿ ಬಹುಮಾನ ಘೋಷಿಸಿ ಪ್ರಕಟಣೆ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾಲ್ವರು ಪ್ರಮುಖ ಆರೋಪಿಗಳ ಮಾಹಿತಿಗಾಗಿ ಒಟ್ಟು 14 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆ ಆಗಿದೆ. ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದ್ರೆ ತಲಾ 5 ಲಕ್ಷ ರೂಪಾಯಿ. ಬಹುಮಾನ. ಇನ್ನು ಇಬ್ಬರು ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದ್ರೆ ತಲಾ 2 ಲಕ್ಷ ಬಹುಮಾನ ರೂಪಾಯಿ ನಗದು ಬಹುಮಾನ ನೀಡುವ ಮಾಹಿತಿ ಎನ್ಐಎ ಪ್ರಕಟಣೆಯಲ್ಲಿದೆ.