Bengaluru Weather: ತಾಪಮಾನ ಏರಿಕೆಯಿಂದ ಬೇಸತ್ತ ಬೆಂಗಳೂರಿನ ಜನತೆ; ನಗರದಲ್ಲಿ5 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲು
May 18, 2023 06:51 PM IST
ಬೆಂಗಳೂರಿನಲ್ಲಿ ತಾಪಮಾನ ಏರಿಕೆ (ಸಾಂದರ್ಭಿಕ ಚಿತ್ರ)
- Highest Temperature in Bengaluru: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಜನ ತತ್ತರಿಸಿದ್ದಾರೆ. ತಡೆಯಲಾರದ ಬಿಸಿಲು, ಸೆಖೆ ಕಂಗೆಡಿಸಿದೆ. ಕಳೆದ ಐದು ವರ್ಷಗಳಲ್ಲೇ ಈ ವರ್ಷ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದ್ದು, ಬಿಸಿಲಿನ ತಾಪದಿಂದ ಜನರು ಕಂಗೆಟ್ಟಿದ್ದಾರೆ. ಸದಾ ತಂಪಾಗಿದ್ದ ಸಿಲಿಕಾನ್ ಸಿಟಿ ಈಗ ಸಂಪೂರ್ಣ ಬದಲಾಗಿದೆ. ಮೇ ತಿಂಗಳ ಆರಂಭದಲ್ಲಿ ಮಳೆಯಿದ್ದು, ವಾತಾವರಣ ತಂಪಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಳೆಯ ಛಾಯೆಯೂ ಇಲ್ಲದೆ, ತಾಪಮಾನದಲ್ಲೂ ಏರಿಕೆಯಾಗಿ ಸೆಖೆಯಿಂದ ಜನರು ತತ್ತರಿಸಿದ್ದಾರೆ.
ಈ ವಾರ ಬೆಂಗಳೂರಿನಲ್ಲಿ 33 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಿನ್ನೆ (ಏಪ್ರಿಲ್ 17) ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿ ಇಷ್ಟು ಉಷ್ಣಾಂಶ ದಾಖಲಾಗಿದ್ದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ಮೇ ತಿಂಗಳ ಸರಾಸರಿ ತಾಪಮಾನವನ್ನು - 1990 ರಿಂದ 2020 ರ ಅಂಕಿಅಂಶಗಳ ಆಧಾರದ ಮೇಲೆ - 33.1 ಡಿಗ್ರಿ ಸೆಲ್ಸಿಯಸ್ಗೆ ನಿಗದಿಪಡಿಸಿದೆ. ಈ ವಾರ ಗರಿಷ್ಠ ತಾಪಮಾನವು 33 ಮತ್ತು 35 ಡಿಗ್ರಿಗಳ ನಡುವೆ ಇರುತ್ತದೆ, ಆದರೆ ಎರಡು ಡಿಗ್ರಿ ವಿಚಲನವು ಅಸಹಜವಾಗಿಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
ಹವಾಮಾನ ವೈಪರೀತ್ಯಕ್ಕೆ ಮರಗಳ ಸಂಖ್ಯೆ ಕಡಿಮೆಯಾಗಿರುವುದೇ ಮುಖ್ಯ ಕಾರಣ ಎನ್ನುತ್ತಿದ್ದಾರೆ ತಜ್ಞರು. ಇದರೊಂದಿಗೆ ಕೈಗಾರಿಕೆಗಳ ಹೆಚ್ಚಳವೂ ಕಾರಣವಾಗಿದೆ. ಈ ಕಾರಣದಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿದೆ ಎನ್ನುವುದು ತಜ್ಞರು ಅಭಿಪ್ರಾಯ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಎಂ.ಎನ್.ತಿಮ್ಮೇಗೌಡ, ‘ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಹಾಗೂ ಜೀವವೈವಿಧ್ಯ ಕಡಿಮೆಯಾಗುತ್ತಿದೆ. ಮರಗಳನ್ನು ಕಡಿದು ಪರಿಸರ ನಾಶ ಮಾಡುವುದರಿಂದ ಶಾಖದ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆʼ ಎನ್ನುತ್ತಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಅವರು ʼನಾವು ಶಾಲೆಗೆ ಹೋಗುವಾಗ 8ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದರು, ಬೆವರು ಬರುತ್ತಿರಲಿಲ್ಲ. ಸದ್ಯ ಬೆಂಗಳೂರಿನ ಸ್ಥಿತಿಯಲ್ಲಿ 500 ಮೀಟರ್ ನಡೆಯುವುದು ಕೂಡ ಕಷ್ಟವಾಗಿದೆʼ ಎಂದಿದ್ದಾರೆ.
ನಗರದಲ್ಲಿ ಕಾಣಿಸಿಲ್ಲ ಮೋಚಾ ಎಫೆಕ್ಟ್
ಮೋಚಾ ಚಂಡಮಾರುತದ ಕಾರಣದಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ವರದಿ ಉಲ್ಟಾ ಆಗಿ, ಬಿಸಿಲಿನ ತಾಪದಲ್ಲಿ ಏರಿಕೆಯಾಗಿದೆ. ಅತಿಯಾದ ಬಿಸಿಲಿನ ಕಾರಣದಿಂದ ಜನ ಮನೆಯಿಂದ ಹೊರಗಡೆ ಕಾಲಿಡಲು ಅಂಜಿಕೆ ಪಡುವಂತಾಗಿದೆ.
ವಿಭಾಗ