Madal Virupakshappa: ವಿರೂಪಾಕ್ಷಪ್ಪ ಮೆಡಿಕಲ್ ರಿಪೋರ್ಟ್ ನಾರ್ಮಲ್; ಇಂದು ಸಂಜೆ 4 ಗಂಟೆಗೆ ಕೋರ್ಟಿಗೆ ಹಾಜರುಪಡಿಸಲು ʻಲೋಕಾʼ ಸಿದ್ಧತೆ
Mar 28, 2023 11:27 AM IST
ಭ್ರಷ್ಟಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ.
ಭ್ರಷ್ಟಾಚಾರ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರಿಗೆ ಬೌರಿಂಗ್ ಅಸ್ಪತ್ರೆಯಲ್ಲಿ ಇಸಿಜಿ, ಶುಗರ್ ಹಾಗೂ ಬಿಪಿ ತಪಾಸಣೆ ನಡೆಸಲಾಗಿದೆ. ಎಲ್ಲಾ ನಾರ್ಮಲ್ ಇದೆ ಅಂತ ವರದಿ ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇವತ್ತು ಸಂಜೆ 4 ಗಂಟೆಗೆ ವಿರೂಪಾಕ್ಷಪ್ಪ ಅವರನ್ನ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಇಂದು ಸಂಜೆ 4 ಗಂಟೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ಇದೇ ವೇಳೆ ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಕಸ್ಟಡಿಗೆ ನೀಡಿದ್ರೆ ಲೋಕಾಯುಕ್ತ ಕಚೇರಿಗೆ ಕರೆತಂದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿ ಮುಂಭಾಗ ಭದ್ರತೆ ಹೆಚ್ಚಿಸಲಾಗಿದ್ದು, ಕಚೇರಿ ಮುಂಭಾಗ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಹೆಚ್ಚಿನ ವಿಚಾರಣೆ ಅಗತ್ಯ ಇರುವ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮತ್ತೆ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ಕೋರ್ಟ್ ಗೆ ಮನವಿ ಮಾಡಲಿದ್ದಾರೆ. ಈ ಹಿಂದೆ ಮೂರು ಬಾರಿ ವಿಚಾರಣೆಗೆ ಹಾಜರಾದಗಲೂ ವಿಚಾರಣೆಗೆ ಸಹಕರಿಸದ ಕಾರಣ ಇಂದು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಹಾರಿಕೆ ಉತ್ತರ ನೀಡುವ ಮೂಲಕ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಪೂರಕ ಸಾಕ್ಷ್ಯಾಧಾರ ಒದಗಿಸುತ್ತಿಲ್ಲ. ಹಣದ ಮೂಲದ ಕುರಿತಂತೆ ಪುರಾವೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮೂರು ಬಾರಿ ವಿಚಾರಣೆ ವೇಳೆಯಲ್ಲೂ ಹಣದ ಮೂಲದ ದಾಖಲೆ ನೀಡಲು ವಿಫಲವಾಗಿದ್ದಾರೆ.
ಮೊದಲಿಗೆ ಕೃಷಿ ಮೂಲದ ಹಣವೆಂದಿದ್ದ ಮಾಡಳ್ ವಿರೂಪಾಕ್ಷಪ್ಪ ವಿಚಾರಣೆ ವೇಳೆ ತಿಳಿಸಿದ್ದಾರೆ. ಆ ಬಳಿಕ ನಡೆದ ವಿಚಾರಣೆಯಲ್ಲಿ ಸೂಕ್ತ ದಾಖಲೆಗಳ ಒದಗಿಸಿ, ಸಮರ್ಥಿಸಲು ತಡಬಡಾಯಿಸಿದ್ದಾರೆ ಎಂದು ಗೊತ್ತಾಗಿದೆ.
ತಡರಾತ್ರಿ ಲೋಕಾಯುಕ್ತ ಕಚೇರಿಯಲ್ಲೇ ಕಾಲ ಕಳೆದಿದ್ದ ಮಾಡಾಳ್ ವಿರೂಪಾಕ್ಷಪ್ಪಗೆ . ರಾತ್ರಿ 12 ಗಂಟೆಯವರೆಗೂ ತನಿಖಾಧಿಕಾರಿಗಳ ತಂಡ ಸಾಕಷ್ಟು ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದುಬಂದಿದೆ. 8 ಕೋಟಿ ಹಣ ಎಲ್ಲಿಂದ ಬಂತು? ಅದರ ಮೂಲವೇನು?, ಎಲ್ಲಿಗೆ ತಲುಪಿಸಲಾಗುತ್ತಿತ್ತು ಎಂಬೆಲ್ಲ ಪ್ರಶ್ನೆಗಳನ್ನು ಶಾಸಕರಿಗೆ ಕೇಳಲಾಗಿದೆ.
ಆ ಬಳಿಕ, ತಮ್ಮ ಆಪ್ತರ ಮೂಲಕ ಲೋಕಾಯುಕ್ತ ಕಚೇರಿಗೆ ಪ್ರತ್ಯೇಕ ಮಂಚ, ಹಾಸಿಗೆ, ದಿಂಬು, ಊಟ, ನೀರು ತರಿಸಿಕೊಂಡ ಮಾಡಾಳ್, ವಿಚಾರಣೆ ಮುಗಿಸಿ, ತನಿಖಾಧಿಕಾರಿಗಳು ಹೊರಟು ಹೋದ ಬಳಿಕ ನಿದ್ರೆಗೆ ಜಾರಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರು ನಿನ್ನೆ ಚನ್ನಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಅರೆಸ್ಟ್ ಮಾಡಲಾಗಿತ್ತು. ಮಧ್ಯಂತರ ಜಾಮೀನು ವಜಾ ಆದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಆ ಬಳಿಕ ಅವರಿಗೆ ಬೌರಿಂಗ್ ಅಸ್ಪತ್ರೆಯಲ್ಲಿ ಇಸಿಜಿ, ಶುಗರ್ ಹಾಗೂ ಬಿಪಿ ತಪಾಸಣೆ ನಡೆಸಲಾಗಿತ್ತು. ಇವತ್ತು ವೈದ್ಯಕೀಯ ತಪಾಸಣೆ ರಿಪೋರ್ಟ್ ನಾರ್ಮಲ್ ಬಂದಿರುವ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಕೋರ್ಟಿಗೆ ಹಾಜರುಪಡಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಮಾರ್ಚ್ 2 ರಂದು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಹಾಗೂ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್, 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಆರೋಪಿ ಪ್ರಶಾಂತ್ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಇದೀಗ ಪ್ರಶಾಂತ್ ಮಾಡಾಳ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಕೆಎಸ್ಡಿಎಲ್ಗೆ ಕಚ್ಚಾವಸ್ತು ಪೂರೈಕೆ ಟೆಂಡರ್ ನೀಡುವ ಸಂಬಂಧ ಲಂಚ ಪಡೆಯುತ್ತಿದ್ದಾಗ ಲೋಕಾಯಕ್ತ ಪೊಲೀಸರು ದಾಳಿ ಮಾಡಿದ್ದರು. ಗುತ್ತಿಗೆದಾರರಿಗೆ ಮೊದಲು 80 ಲಕ್ಷ ರೂ. ಬೇಡಿಕೆ ಇರಿಸಲಾಗಿತ್ತು. ಆದರೆ ಅಂತಿಮವಾಗಿ 40 ಲಕ್ಷ ರೂ.ಗಳಿಗೆ ಒಪ್ಪಂದ ಏರ್ಪಟ್ಟಿತ್ತು. ಕ್ರಸೆಂಟ್ ರಸ್ತೆಯಲ್ಲಿರುವ ಶಾಸಕ ವಿರೂಪಾಕ್ಷಪ್ಪ ಅವರಿಗೆ ಸೇರಿದ ಕಚೇರಿಯಲ್ಲಿ, ಮಾರ್ಚ್ 2ರ ಸಾಯಂಕಾಲ ಗುತ್ತಿಗೆದಾರರಿಂದ ಪ್ರಶಾಂತ್ 40 ಲಕ್ಷ ರೂ. ಲಂಚ ಸ್ಚೀಕರಿಸುವ ವೇಳೆ, ಲೋಕಾಯುಕ್ತ ಎಸ್ಪಿ ಕೆ.ವಿ ಅಶೋಕ್ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಿತ್ತು. ಆ ಬಳಿಕ ಇವರ ನಿವಾಸದ ಮೇಲೆ ದಾಳಿ ಮಾಡಿದ ಕೋಟಿ ಕೋಟಿ ಹಣ ಪತ್ತೆಯಾಗಿತ್ತು.