Traffic fines: ವಾಹನ ಸವಾರರಿಗೆ ಗುಡ್ ನ್ಯೂಸ್; ಟ್ರಾಫಿಕ್ ದಂಡ ಪಾವತಿಯ ಶೇ.50 ರಷ್ಟು ರಿಯಾಯಿತಿ 15 ದಿನ ವಿಸ್ತರಣೆ
Mar 03, 2023 08:20 PM IST
ಸಂಚಾರಿ ನಿಯಮ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ದಂಡ ಪಾವತಿಸುವಿಕೆಗೆ ಇರುವ ಶೇ.50 ರಷ್ಟು ರಿಯಾಯಿತಿಯನ್ನು 15 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
ರಾಜ್ಯದಾದ್ಯಂತ ಟ್ರಾಫಿಕ್ ದಂಡ ಸಂಗ್ರಹದ ಶೇ.50 ರಷ್ಟು ರಿಯಾಯಿತಿಯ ಅವಧಿಯನ್ನು ಮಾರ್ಚ್ 4 ರಿಂದ 18ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು: ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅರೇ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಯಾವುದಾದ್ರೂ ಯೋಜನೆ ಇರಬೇಕು ಅಂತ ಅಂದುಕೊಳ್ಳಬೇಡಿ. ಬದಲಾಗಿ ಇದು ಸಂಚಾರಿ ದಂಡದ ಶೇ.50 ರಿಯಾಯಿತಿ ನೀಡುವಂತಹ ಸಿಹಿ ಸುದ್ದಿ.
ಹೌದು.. ಇತ್ತೀಚೆಗೆ ಭಾರಿ ಯಶಸ್ಸು ಕಂಡಿದ್ದ ಟ್ರಾಫಿಕ್ ದಂಡ ಸಂಗ್ರಹದ ಶೇ.50 ರಷ್ಟು ರಿಯಾಯಿತಿಯ ಅವಧಿಯನ್ನು ಸರ್ಕಾರ ಮತ್ತೆ 15 ದಿನಗಳ ಮಟ್ಟಿಗೆ ವಿಸ್ತರಿಸಲಾಗಿದೆ. ಎಎಪಿ ಸೇರಿದಂತೆ ಹಲವರು ಈ ಆಫರ್ ಅವನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಿದ್ದರು.
15 ದಿನಗಳ ವರೆಗೆ ವಿಸ್ತರಿಸಿರುವ ಈ ಅವಧಿ ಮಾರ್ಚ್ 4 ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಸಂಚಾರ ನಿಮಯ ಉಲ್ಲಂಘಿಸಿ ದಂಡವನ್ನು ಬಾಕಿ ಉಳಿಸಿಕೊಂಡಿರುವವರು ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ದಂಡವನ್ನು ಪಾವತಿಸಿ. ಆ ಮೂಲಕ ತಮ್ಮ ವಾಹನಗಳ ಮೇಲಿನ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವುದು ಸೂಕ್ತ.
ಟ್ರಾಫಿಕ್ ದಂಡ ಪಾವತಿಯ ಶೇ.50 ರಷ್ಟು ರಿಯಾಯಿತಿಯನ್ನು ಮಾರ್ಚ್ 4 ರಿಂದ ಅನ್ವಯವಾಗುವಂತೆ ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ರಾಜ್ಯ ಸರ್ಕಾರ ಇಂದು (ಮಾರ್ಚ್ 3, ಶುಕ್ರವಾರ) ಪ್ರಕಟಿಸಿದೆ.
ಕಳೆದ ತಿಂಗಳು ನೀಡಿದ್ದ ಈ ಆಫರ್ ಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ ಈ ಅಧಿಯನ್ನು ವಿಸ್ತರಿಸುವಂತೆ ರಾಜಕೀಯ ಪಕ್ಷಗಳು ಹಾಗೂ ವಾಹನ ಸವಾರರು ಸರ್ಕಾರವನ್ನು ಒತ್ತಾಯಿಸಿದ್ದರು. ಸದ್ಯ ಸರ್ಕಾರ ಇದಕ್ಕೆ ಸ್ಪಂದಿಸಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಬಿ ವೀರಪ್ಪ, ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತ ಎಂ. ಸಲೀಮ್ ಸಭೆ ನಡೆಸಿದ ಬಳಿಕ ಟ್ರಾಫಿಕ್ ದಂಡ ಪಾವತಿಯ ಅವಧಿಯನ್ನು ವಿಸ್ತರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಮಾರ್ಚ್ 18 ರವರೆಗೆ ವಿಸ್ತರಿಸಲು ನಿರ್ಧರಿಸಿದ್ದಾರೆ.
ಶೇ. 50 ರಷ್ಟು ರಿಯಾಯಿತಿ ಪ್ರಸ್ತಾಪವನ್ನು ಫೆಬ್ರವರಿ 2 ರಂದು ಜಾರಿಗೆ ತರಲಾಗಿತ್ತು. ಫೆಬ್ರವರಿ 11 ರವರೆಗೆ ಮಾತ್ರ ಆಫರ್ ನಲ್ಲಿ ದಂಡ ಪಾವತಿಗೆ ಅವಕಾಶ ನೀಡಲಾಗಿತ್ತು.
ಆದರೂ ರಾಜ್ಯದಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ಲೋಕ ಅದಾಲತ್ ನಲ್ಲಿ ದಾಖಲೆಯ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದ ಕಾರಣ ಇನ್ನೂ ಎರಡು ವಾರಗಳವರೆಗೆ ರಿಯಾಯಿತಿ ಪ್ರಸ್ತಾಪವನ್ನು ವಿಸ್ತರಿಸುವಂತೆ ಕೆಎಸ್ಎಲ್ಎಸ್ಎ ರಾಜ್ಯ ಸರ್ಕಾರಕ್ಕೆ ವಿನಂತಿಸಿತ್ತು.
ಅನೇಕ ವಾಹನ ಮಾಲೀಕರು ಟ್ರಾಫಿಕ್ ದಂಡದ ಮೊತ್ತದ ಶೇಕಡಾ 50 ರಷ್ಟು ಹಣವನ್ನು ಪಾವತಿಸುವ ಮೂಲಕ ವಾಹನಗಳ ಮೇಲಿನ ಪ್ರಕರಣಗಳನ್ನು ಕ್ಲೀಯರ್ ಮಾಡಿಕೊಂಡಿದ್ದರು. ಈ ಕಲ್ಪನೆಯನ್ನು ಮೊದಲ ಬಾರಿಗೆ 2022 ರಲ್ಲಿ ಹೈದರಾಬಾದ್ನಲ್ಲಿ ಜಾರಿಗೆ ತರಲಾಯಿತು, ಇದು ಭಾರಿ ಯಶಸ್ಸನ್ನು ಕಂಡಿತು.
ಮೂರು ತಿಂಗಳಿಗೆ ವಿಸ್ತರಿಸುವಂತೆ ಎಎಪಿ ಮನವಿ
ರಸ್ತೆ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಯ ಶೇ. 50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಈ ಹಿಂದೆ ಆಗ್ರಹಿಸಿತ್ತು.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆಬ್ರವರಿ 11ರೊಳಗೆ ಪಾವತಿಸಿದಲ್ಲಿ ಶೇ. 50% ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೀಗೆ ವಿನಾಯಿತಿ ನೀಡುವ ಮೂಲಕ ವಾಹನ ಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲ ಕೇವಲ ಶ್ರೀಮಂತ ವಾಹನ ಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದರು.