Fraud case: ಕಸ್ಟಮ್ಸ್ನಿಂದ ಕಡಿಮೆ ಬೆಲೆಗೆ ಚಿನ್ನ, ಐಫೋನ್ ಕೊಡಿಸ್ತೇವೆಂದು ವಂಚಿಸುತ್ತಿದ್ದ ಜೋಡಿ; ಉಡುಪಿಯಲ್ಲಿ ಪೊಲೀಸ್ ಬಲೆಗೆ
Nov 24, 2022 09:26 AM IST
ಬಂಧಿತ ಆರೋಪಿಗಳಾದ ದರ್ಬಿನ್ ದಾಸ್ ಮತ್ತು ರಾಚೆಲ್
Fraud case: ದರ್ಬಿನ್ ದಾಸ್ ಮತ್ತು ರಾಚೆಲ್ ಜೋಡಿ ಉಡುಪಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದೆ. ಈ ಜೋಡಿ ಇತ್ತೀಚೆಗೆ ಮಂಗಳೂರಿನ ಮೇರಿಹಿಲ್ಸ್ ನಲ್ಲಿ ಬಾಡಿಗೆ ಮನೆ ಪಡೆದಿತ್ತು. ಅಲ್ಲಿ 34.5 ಲಕ್ಷ ರೂಪಾಯಿ ನಗದು, 106.965 ಗ್ರಾಂ ತೂಕದ ಚಿನ್ನಾಭರಣ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಜೋಡಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಮತ್ತು ಆತನ ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಎಂದು ಗುರುತಿಸಲಾಗಿದೆ.
ಇಂದಿರಾನಗರದಲ್ಲಿ ನೈಲ್ಬಾಕ್ಸ್ ಅಕಾಡೆಮಿ ನಡೆಸುತ್ತಿರುವ ಸ್ನೇಹಾ ಕೆ. ಭಾಗವತ್ ಎಂಬುವವರನ್ನುಈ ಜೋಡಿ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವಂಚಿಸಿತ್ತು.
ಸ್ನೇಹಾ ಕೆ. ಭಾಗವತ್ ನಡೆಸುತ್ತಿದ್ದ ಅಕಾಡೆಮಿಗೆ ಧನುಷ್ಯ ಟ್ರೇನಿಂಗ್ ಪಡೆಯಲು ಸೇರ್ಪಡೆಯಾಗಿದ್ದಳು. ಆಕೆ ತನ್ನ ಪರಿಚಯ ಮಾಡುತ್ತ, ತನ್ನ ಪತಿ ದರ್ಬಿನ್ ದಾಸ್ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೀಜ್ ಆಗಿರುವ ಚಿನ್ನದ ಒಡವೆಗಳು ಕಸ್ಟಮ್ಸ್ನಿಂದ ಕಡಿಮೆ ಬೆಲೆಗೆ ಅವರಿಗೆ ಲಭ್ಯವಿದೆ. ಅವುಗಳನ್ನು ನಿಮಗೂ ಕೊಡಿಸಬಹುದು ಎಂದು ನಂಬಿಸಿದ್ದಳು.
ಈ ನಂಬಿಕೆಯ ಮೇರೆಗೆ ಬೇರೆ ಬೇರೆ ದಿನಂಕಾಗಳಲ್ಲಿ ಸ್ನೇಹಾ ಕೆ. ಭಾಗವತ್ ಅವರಿಂದ ಒಟ್ಟು 68,00,000 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಧನುಷ್ಯ ಪಡೆದುಕೊಂಡಿದ್ದಳು. ಆದರೆ, ಚಿನ್ನದ ಒಡವೆಗಳನ್ನು ಮಾತ್ರ ಕೊಡಿಸಿರಲಿಲ್ಲ. ಅಷ್ಟೇ ಅಲ್ಲ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಳು.
ಇಷ್ಟಾದ ಬಳಿಕ ಸ್ನೇಹಾ ಅವರಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇನ್ನೊಂದು ಪ್ರಕರಣದಲ್ಲಿ, ದೇವನಹಳ್ಳಿಯ ಯೂರೋ ಕಿಡ್ಸ್ ಶಾಲೆಯ ಶಿಕ್ಷಕಿ ಶ್ವೇತಾ ಎಂಬುವವರನ್ನು ಸಂಪರ್ಕಿಸಿದ ದರ್ಬಿನ್ ದಾಸ್, ತಾನು ಏರ್ಪೋರ್ಟ್ನ ಕಸ್ಟಮ್ಸ್ ವಿಭಾಗದಲ್ಲಿ ಕೆಸಲ ಮಾಡುವುದಾಗಿ ಹೇಳಿ ಪರಿಚಯಿಸಿಕೊಂಡಿದ್ದ. ಅಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಶ್ವೇತಾ ಅವರಿಂದ 96,750 ರೂಪಾಯಿ ಪಡೆದುಕೊಂಡಿದ್ದ. ಆದರೆ ಕೆಲಸ ಕೊಡಿಸಿರಲಿಲ್ಲ. ಹಣ ಪಡೆದುಕೊಂಡ ಬಳಿಕ ತಲೆಮರೆಸಿಕೊಂಡಿದ್ದ. ವಂಚನೆಗೆ ಒಳಗಾದ ಶ್ವೇತಾ ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಈ ಜೋಡಿ, ಅಕಾಡೆಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮಗಳು ಓದುತ್ತಿರುವ ಶಾಲೆಯ ಶಿಕ್ಷಕರು, ಮಗಳ ಸಹಪಾಠಿಗಳ ಪಾಲಕರು, ಬ್ರಿಗೇಡ್ ಆರ್ಚರ್ಡ್ ಅಪಾರ್ಟ್ಮೆಂಟ್ ನಿವಾಸಿಗಳಿಗೂ ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ವಂಚಿಸಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಕಡಿಮೆ ಬೆಲೆಗೆ ಚಿನ್ನಾಭರಣ, ಐಫೋನ್, ಲ್ಯಾಪ್ಟಾಪ್, ಗ್ಯಾಜೆಟ್ಸ್ ಕೊಡಿಸುತ್ತೇನೆ ಎಂದು ಹಲವರ ಬಳಿ ಬೇರೆ ಬೇರೆ ದಿನಾಂಕಗಳಲ್ಲಿ ನಗದು ಮತ್ತು ಆನ್ಲೈನ್ ಮೂಲಕ ಹಣ ಪಡೆದುಕೊಂಡಿರುವ ಆರೋಪ ಈ ಜೋಡಿಯ ಮೇಲಿದೆ.
ಉಡುಪಿಯಲ್ಲಿ ಬಂಧನ
ದರ್ಬಿನ್ ದಾಸ್ ಮತ್ತು ರಾಚೆಲ್ ಜೋಡಿ ಉಡುಪಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದೆ. ಈ ಜೋಡಿ ಇತ್ತೀಚೆಗೆ ಮಂಗಳೂರಿನ ಮೇರಿಹಿಲ್ಸ್ ನಲ್ಲಿ ಬಾಡಿಗೆ ಮನೆ ಪಡೆದಿತ್ತು. ಅಲ್ಲಿ 34.5 ಲಕ್ಷ ರೂಪಾಯಿ ನಗದು, 106.965 ಗ್ರಾಂ ತೂಕದ ಚಿನ್ನಾಭರಣ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರದ ಈಶಾನ್ಯ ವಿಭಾಗದ ಉಪಪೊಲಿಸ್ ಆಯುಕ್ತ ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಆರ್.ಮಂಜುನಾಥ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎನ್.ರಾಜಣ್ಣ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಪ್ರತಿಮಾ ಬಿ.ಎಂ., ಹೆಚ್ಸಿಗಳಾದ ಪುಟ್ಟರಾಜು, ಅರುಣ್ ಕೋಲಾಕರ್, ಗಿರೀಶ್ ವೈ.ಜಿ, ಮಂಜುನಾಥ್ ಪಿ.ವಿ, ಹಿರೇಮಠ್ ತಂಡದಲ್ಲಿದ್ದರು.