Siddaramaiah: ವಿದ್ಯುತ್ ದುರುಪಯೋಗ ಮಾಡುವಂತೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ
Jun 05, 2023 01:28 PM IST
Siddaramaiah: ವಿದ್ಯುತ್ ದುರುಪಯೋಗ ಮಾಡುವಂತೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ
- World Enviornment Day: ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ದುಂದುವೆಚ್ಚ ಎನ್ನುವುದು ಪ್ರಕೃತಿ ವಿರೋಧಿ, ಜನ ವಿರೋಧಿ ಮತ್ತು ಪರಿಸರ ವಿರೋಧಿಯಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ವಿದ್ಯುತ್ ಅನ್ನು ದುಂದುವೆಚ್ಚ ಮತ್ತು ದುರುಪಯೋಗ ಮಾಡುವಂತೆ ಜನರಿಗೆ ಬಿಜೆಪಿ ಕುಮ್ಮಕ್ಕು ಕೊಡುತ್ತಿದೆ. ಆದರೆ ನಾವು ಅಗತ್ಯಕ್ಕೆ ತಕ್ಕಂತೆ ಬಳಸಲು ನಾಡಿನ ಜನತೆಗೆ ನೆರವಾಗುತ್ತೇವೆ. ಈ ಮೂಲಕ ದುಂದುವೆಚ್ಚ-ದುರುಪಯೋಗಕ್ಕೆ ಕಡಿವಾಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ 2023 ಉದ್ಘಾಟಿಸಿದ ಬಳಿಕ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ದುಂದುವೆಚ್ಚ ಎನ್ನುವುದು ಪ್ರಕೃತಿ ವಿರೋಧಿ, ಜನ ವಿರೋಧಿ ಮತ್ತು ಪರಿಸರ ವಿರೋಧಿಯಾದದ್ದು ಎಂದರು.
ಮನುಷ್ಯ ಪ್ರಕೃತಿಕ ಅವಿಭಾಜ್ಯ ಅಂಗ. ಪ್ರಕೃತಿ ನಾಶ ನಮ್ಮ ನಾಶ. ಹೀಗಾಗಿ ಪ್ರಕೃತಿಯ ಜತೆಗೆ ನಾವು ಬೆಳೆಯಬೇಕು ಮತ್ತು ಬದುಕಬೇಕು ಎಂದು ಅವರು ಕರೆ ನೀಡಿದರು.
ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ.10 ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ. ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆದರೆ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರ್ಬಳಕೆ, ದುಂದುವೆಚ್ಚ ಮತ್ತು ದುರುಪಯೋಗ ಮಾಡಲು ಕುಮ್ಮಕ್ಕು ಕೊಡುತ್ತಿದೆ. ಇದು ಜನವಿರೋಧಿಯಾದ ನಡಿಗೆ. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದರು.
ಪರಿಸರ ಉಳಿಸುವುದು, ಕಾಡು ಬೆಳೆಸುವುದು ಮತ್ತು ಉಳಿಸುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯ ಅಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪ್ರಕೃತಿ ಉಳಿಸುವ ಜವಾಬ್ದಾರಿ ಇದೆ ಎಂದರು.
ಹಾಲಿನ ದರ ಕಡಿತ ಬೇಡ
ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ.
ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ ಸಿಎಂ, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು. ದರ ಕಡಿತ ಮಾಡಿದರೆ ರೈತರಿಗೆ ತೊಂದರೆಯಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು.