Independence day 2023: ಅಮೃತ ಸ್ವಾತಂತ್ರೋತ್ಸವದ ನೆನಪಿಗೆ ಮೈಸೂರು ಜಿಲ್ಲೆಯ 256 ಗ್ರಾಪಂನಲ್ಲೂ ವೀರ ಶಿಲಾಫಲಕಂ: ಯೋಧರ ಸ್ಮರಣೆ, ಹಸುರೀಕರಣ
Aug 14, 2023 09:16 PM IST
ಸ್ವಾತಂತ್ರೋತ್ಸವ ದಿನದಂದು ಮೈಸೂರು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಶಿಲಾ ಫಲಕಗಳು ಬಳಕೆಗೆ ಬರಲಿವೆ. ಹಸುರೀಕರಣಕ್ಕೆ ಮಹಿಳೆಯರು ಕೈ ಜೋಡಿಸಿರುವುದು.
- Independence day Mysuru initiative ಸ್ವಾತಂತ್ರೋತ್ಸವವನ್ನು ಒಂದಿಲ್ಲೊಂದು ರೀತಿ ಭಿನ್ನವಾಗಿ ಆಚರಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಮೈಸೂರು ಜಿಲ್ಲಾಪಂಚಾಯಿತಿಯು ವೀರ ಶಿಲಾಫಲಕಂ ಕಾರ್ಯಕ್ರಮದ ಮೂಲಕ ಗಮನ ಸೆಳೆಯುತ್ತಿದೆ. ಏನೇನು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎನ್ನುವ ವಿವರ ಇಲ್ಲಿದೆ.
ಮೈಸೂರು: ಮೈಸೂರು ಜಿಲ್ಲೆಯ ಪ್ರತಿ ಗ್ರಾಮಪಂಚಾಯಿತಿಗಳಲ್ಲೂ ವಿಭಿನ್ನವಾಗಿ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲಾಪಂಚಾಯಿತಿ ಸಜ್ಜುಗೊಂಡಿದೆ.
ಅದರಲ್ಲೂ ವಿಶೇಷವಾಗಿ ಭಾರತದ 77ನೇ ಸ್ವಾತಂತ್ರ ಮಹೋತ್ಸವದ ಅಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ನಮ್ಮ ದೇಶಕ್ಕಾಗಿ ವಿಶೇಷವಾಗಿ ತ್ಯಾಗ ಬಲಿದಾನ ಮಾಡಿದ ವೀರರಿಗೆ ಗೌರವ ಸಲ್ಲಿಸಲು "ಮೇರಾ ಮಾಟಿ ಮೇರಾ ದೇಶ" (ನಮ್ಮ ನೆಲ, ನಮ್ಮ ದೇಶ) ಎಂಬ ಕಾರ್ಯಕ್ರಮ ರೂಪಿಸಲಾಗಿದೆ.
ಇದರ ಅಂಗವಾಗಿ ಭೂಮಿಯನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟು 'ಅಮೃತ ವಾಟಿಕ'ವನ್ನು ಅಭಿವೃದ್ಧಿಪಡಿಸುವ "ವಸುಧ ವಂದನ" ಕಾರ್ಯಕ್ರಮಕ್ಕೂ ಇದೇ ವೇಳೆ ಗಣ್ಯರು ಚಾಲನೆ ನೀಡಲಿದ್ದಾರೆ.
ಪ್ರತಿ ಗ್ರಾಪಂನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಿದ ಕೆರೆ ಅಥವಾ ಶಾಲಾ-ಕಾಲೇಜು, ಆಸ್ಪತ್ರೆ ಹಾಗೂ ಸರ್ಕಾರಿ ಕಟ್ಟಡದ ಆವರಣದಲ್ಲಿ ಗಿಡ ನೆಟ್ಟು ಸ್ವಾತಂತ್ರ್ಯ ಮಹೋತ್ಸವ ಆಚರಣೆಯಲ್ಲಿ ಸಂಭ್ರಮಿಸಲು ತಯಾರಿ ನಡೆಸಿದೆ.
256 ಗ್ರಾಮ ಪಂಚಾಯಿತಿಗಳಲ್ಲಿಯೂ ಸರ್ಕಾರದ ಸೂಚನೆಯಂತೆ 'ಶಿಲಾಫಲಕಂ' ಹಾಗೂ 'ವಸುಧ ವಂದನಾ' ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯ ಯೋಧರು ಅಥವಾ ಗಣ್ಯರು ಪಾಲ್ಗೊಂಡು ಸ್ವಾತಂತ್ರ್ಯ ಮಹೋತ್ಸವ ಆಚರಣೆ ಮಾಡಲಿದ್ದಾರೆ ಎನ್ನುವುದು - ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರ ವಿವರಣೆ.
ಶಿಲಾ ಫಲಕಂ ವಿಶೇಷ
ಈ ಬಾರಿಯೂ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ಮಹೋತ್ಸವ ಆಚರಣೆಗೆ ತಯಾರಿ ನಡೆಸಿರುವ ಮೈಸೂರು ಜಿಪಂ ಈ ಬಾರಿ 256 ಗ್ರಾಪಂನಲ್ಲೂ ವೀರ ಸೇನಾನಿಗಳ ' ಶಿಲಾಫಲಕಂ' ಅನಾವರಣಗೊಳಿಸಿ ಸ್ವಾತಂತ್ರ್ಯ ಮಹೋತ್ಸವ ಅರ್ಥಪೂರ್ಣವಾಗಿಸಲಿದೆ.
ಕಳೆದ ಬಾರಿ ಕೆರೆಗಳ ಅಂಗಳದಿ ಬಾವುಟ ಹಾರಿಸಿ ದಾಖಲೆ ಬರೆದಿದ್ದ ಮೈಸೂರು ಜಿಪಂ ಈಗ ಅಷ್ಟು ಕೆರೆಗಳಲ್ಲೂ 'ಶಿಲಾ ಫಲಕಂ' ಜಾರಿ ಜತೆಗೆ ಪ್ರತಿ ಕೆರೆ ಅಂಗಳದಿ ಸಸಿ ನೆಡುವ ಯೋಜನೆ ರೂಪಿಸಿದೆ.
ರಾಜ್ಯ ಸರ್ಕಾರ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ಮೇರೆಗೆ ಭಾರತ ಸ್ವಾತಂತ್ರೋತ್ಸವ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಹುತಾತ್ಮ ಯೋಧರ ಗೌರವಾರ್ಥ ಶಿಲಾಫಲಕ ಸ್ಥಾಪಿಸಿದೆ. ಈ ವೀರ ಶಿಲಾಫಲಕದಲ್ಲಿ ಗ್ರಾಮ ಪಂಚಾಯಿತಿಯ ಹೆಸರು, ಪ್ರಧಾನ ಮಂತ್ರಿಗಳ ಘೋಷವಾಕ್ಯ, ಮುಖ್ಯಮಂತ್ರಿಗಳ ಘೋಷವಾಕ್ಯ, ವಚನಕಾರ ಬಸವಣ್ಣನವರ ವಚನ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿನ ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರುಗಳನ್ನು ಬರೆದಿರಲಿದೆ.
ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ ಬಳಿ ಅಥವಾ ಅಮೃತ ಸರೋವರ ಲಭ್ಯವಿಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸರ್ಕಾರಿ ಶಾಲೆಯ ಬಳಿ ನಿರ್ಮಿಸಲಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರು ಇಲ್ಲದಿದ್ದಲ್ಲಿ ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಎಂದು ಬರೆಸುವಂತೆ ತಿಳಿಸಲಾಗಿದೆ. ಭೂಮಿಯನ್ನು ಹಸಿರೀಕರಣಗೊಳಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಹಾಗೂ ನಾನಾ ವಿಧವಾದ ಸಸಿಗಳನ್ನು ನೆಟ್ಟು ಸ್ವಾತಂತ್ರ್ಯ ಮಹೋತ್ಸವ ಹಸಿರೀಕರಣಕ್ಕೂ ಆದ್ಯತೆ ನೀಡಲು ಸಜ್ಜಾಗಿರುವುದು ಈ ಬಾರಿಯ ವಿಶೇಷ.
ಮಣ್ಣಿನ ಕಲಶ ನಿರ್ಮಿಸಿ ರಾಷ್ಟ್ರ ರಾಜಧಾನಿಗೆ ರವಾನೆ
ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕು ಹಂತದಲ್ಲಿ ಮಣ್ಣಿನ ಕಲಶವನ್ನು ದೆಹಲಿಗೆ ಕಳುಹಿಸಿಕೊಡುವುದಕ್ಕಾಗಿ ತಾಪಂ ಇಒ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಎಲ್ಲಾ ಗ್ರಾ.ಪಂ. ಗಳಿಂದ ಮಣ್ಣನ್ನು ಸಂಗ್ರಹಿಸಿ ಸ್ವಯಂ ಸೇವಕರ ಮೂಲಕ ತಾಲ್ಲೂಕು ಮಟ್ಟಕ್ಕೆ ತರಬೇಕು. ಎಲ್ಲಾ ಗ್ರಾಪಂ ಗಳಿಂದ ಬಂದ ಮಣ್ಣನ್ನು ಸ್ವೀಕರಿಸಿ, ಒಟ್ಟುಗೂಡಿಸಿ, ಸರ್ವಾಲಂಕೃತ ಕಲಶದಲ್ಲಿ ಇಟ್ಟು, ಕಲಶವನ್ನು ರಾಷ್ಟ್ರ ರಾಜಧಾನಿಗೆ ಸ್ವಯಂ ಸೇವಕರ ಮೂಲಕ ಗೌರವಗಳೊಡನೆ ಕಳುಹಿಸಲು ಕ್ರಮವಹಿಸುವುದು. ಮಣ್ಣಿನ ಕಲಶವನ್ನು ರಾಷ್ಟ್ರ ರಾಜಧಾನಿಗೆ ಕೊಂಡೊಯ್ಯಲು ಸ್ವಯಂ ಸೇವಕರನ್ನು ನೆಹರು ಯುವಕ ಕೇಂದ್ರದವರು ಆಯ್ಕೆ ಮಾಡಿ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ಸುತ್ತೋಲೆ ಅನ್ವಯ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ಮಹೋತ್ಸವ ಆಚರಣೆಗೆ ಎಲ್ಲಾ ರೀತಿಯ ತಯಾರಿ ನಡೆಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಜಿಪಂ ಉಪಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು.