SVYM Jnana Manthan 2022: ದೇಶಕಟ್ಟುವುದು ಸಂಸತ್ತಿನಲ್ಲಿ ಅಲ್ಲ, ತರಗತಿ ಕೋಣೆಯಲ್ಲಿ - ಪ್ರೊ. ಶಿವಪ್ರಸಾದ
Sep 12, 2022 01:27 PM IST
ಧಾರವಾಡದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಯಪುರದಲ್ಲಿ ಭಾನುವಾರ ಸಂಜೆ ನಡೆದ ʻಜ್ಞಾನ ಮಂಥನ – 2022ʼ ಎರಡು ದಿನಗಳ ಶಿಕ್ಷಕರ ಸಮಾವೇಶದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ. ಶಿವಪ್ರಸಾದ ಮಾತನಾಡಿದರು.
- SVYM Jnana Manthan 2022: ಸಮಾಜ ಬದಲಾವಣೆ ಆಗಬೇಕಾದರೆ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ದೇಶ ಕಟ್ಟುವ ಕೆಲಸ ನಡೆಯುವುದು ತರಗತಿಯ ಕೊಠಡಿಯಲ್ಲೇ ಹೊರತು, ಸಂಸತ್ತಿನಲ್ಲಿ ಅಲ್ಲ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ. ಶಿವಪ್ರಸಾದ ಹೇಳಿದರು.
ಧಾರವಾಡ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕಲಿಯುವ ಸಾಮರ್ಥ್ಯವಿದೆ. ಶಿಕ್ಷಕರು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು. ದೇಶ ಬದಲಾಗಬೇಕಾದರೆ ದೇಶದ ಬಗ್ಗೆ ಹೆಮ್ಮೆ ಇರಬೇಕು ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ. ಶಿವಪ್ರಸಾದ ಹೇಳಿದರು.
ಧಾರವಾಡದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಯಪುರದಲ್ಲಿ ಭಾನುವಾರ ಸಂಜೆ ನಡೆದ ಜ್ಞಾನ ಮಂಥನ – ೨೦೨೨ ಎರಡು ದಿನಗಳ ಶಿಕ್ಷಕರ ಸಮಾವೇಶದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ. ಶಿವಪ್ರಸಾದ ಮಾತನಾಡಿದರು.
ಸಮಾಜ ಬದಲಾವಣೆ ಆಗಬೇಕಾದರೆ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಜ್ಞಾನ ಹಂಚುವ ಕಾರ್ಯ ಅತ್ಯುತ್ತಮ ಎಂದು ಶಿಕ್ಷಕರು ಭಾವಿಸಬೇಕು. ದೇಶದೊಳಗೆ ಬೆಳೆಸುವ ಸಂಸ್ಕೃತಿ , ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಶಾಲೆಗಳಲ್ಲೇ ಸಿಗಬೇಕು ಹಾಗೂ ಪ್ರತಿ ಕೆಲಸದಲ್ಲೂ ಹೃದಯ ವೈಶಾಲ್ಯತೆ ಇರಬೇಕು.
ಯುವಕರನ್ನು ಸರಿಯಾದ ಮಾರ್ಗದಲ್ಲಿ ನಾವು ನಡೆಸದೆ ಹೋದರೆ ದೇಶದ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ದೇಶ ಕಟ್ಟುವ ಕಾರ್ಯ ತರಗತಿಯಲ್ಲೇ ಆಗಬೇಕು. ಪ್ರತಿ ಕೆಲಸವನ್ನು ಜವಾಬ್ಧಾರಿ ಎಂದು ಭಾವಿಸದೆ ಅದೊಂದು ಅವಕಾಶ ಎಂದು ಭಾವಿಸಿ ಕಾರ್ಯಪ್ರವೃತ್ತರಾಗಬೇಕು. ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗಿದೆ. ಆದುದರಿಂದ ವಿದ್ಯಾರ್ಥಿಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಕೊಡುಗೆಗಳನ್ನು ನೀಡಲು ಪ್ರೇರೇಪಿಸಬೇಕು ಹಾಗೂ ಮಕ್ಕಳಿಗೆ ತಂತ್ರಜ್ಞಾನದ ಸದಾವಕಾಶಗಳನ್ನು ಬಳಸಿಕೊಂಡು ಹೇಗೆ ಕಲಿಕೆಯಲ್ಲಿ ಮುಂದುವರೆಯಬೇಕು ಎಂಬ ಸಕರಾತ್ಮಕ ಅಂಶಗಳನ್ನು ಮನದಟ್ಟು ಮಾಡಬೇಕು ಎಂದು ಅವರು ಹೇಳಿದರು.
ತಂಡತ್ವದಲ್ಲಿ ಕಾರ್ಯನಿರ್ವಹಿಸುವ ಮಹತ್ವವನ್ನು ಮೊಲ ಮತ್ತು ಆಮೆಯ ಕಥೆಯನ್ನು ಸ್ವಾರಸ್ಯವಾಗಿ ಹೇಳಿದ ಅವರು, ಜಗತ್ತಿನ ಜ್ಞಾನ ನಮ್ಮ ಕೈಯಲ್ಲಿದೆ, ಶಿಕ್ಷಕರಾದ ನಾವು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಗೊಳ್ಳುವುದು ಅನಿವರ್ಯ ಮತ್ತು ೫ಜಿ ಸೇವೆ ಬಂದರೆ ತರಗತಿ ಕೋಣೆಯೊಳಗೆ ಶಿಕ್ಷಕರ ಅಗತ್ಯತೆಯ ಬಗ್ಗೆ ನಾವೆಲ್ಲರೂ ಚಿಂತಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಆತ್ಮವಿಶ್ವಾಸವನ್ನು ಮೂಡಿಸುವ ಜೊತೆಗೆ ಜ್ಞಾನಧಾರಿತ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರವೀಣ್ಕುಮಾರ್. ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಕಲಿಯುವ ವಿಷಯದಲ್ಲಿ ಮಕ್ಕಳಂತೆ ವರ್ತಿಸಬೇಕು ಹಾಗೂ ಕಲಿಕೆಯನ್ನು ಸಂತಸವೆಂದು ತಿಳಿಯಬೇಕು. ಪ್ರತಿ ಮಗುವಿನ ಬೆಳವಣಿಗೆಗೆ ಸರ್ವರೀತಿಯಲ್ಲೂ ಸಹಕಾರ ನೀಡಬೇಕು. ಪ್ರತಿ ಕಾರ್ಯಕ್ರಮ ರೂಪಿಸುವಾಗ ಮಗುವೇ ಅಂತಿಮ ಎಂದು ಭಾವಿಸಬೇಕು ಎಂದು ಹೇಳಿ ಸಂಸ್ಥೆಯ ಶಿಕ್ಷಣ ವಿಭಾಗವು ಬೆಳೆದು ಬಂದ ಹಾದಿಯನ್ನು ಸವಿವರವಾಗಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಪ್ರಾದೇಶಿಕ ಮುಖ್ಯಸ್ಥ ಜಯಂತ್ .ಕೆ.ಎಸ್, ಸಂದೀಪ್ ಮತ್ತು ಲೋಕೇಶ.ಡಿ ರವರು ತಮ್ಮ ಕರ್ಯಕ್ಷೇತ್ರದ ನೈಜಘಟನೆಗಳನ್ನು ಹಂಚಿಕೊಂಡರು. ಅತಿಥಿಗಳನ್ನು ಪದ್ಮರಾಜು.ಆರ್.ಕೆ ಪರಿಚಯಿಸಿ ಸ್ವಾಗತಿಸಿದರು. ಜಯಕುಮಾರ್ ವಂದಿಸಿದರು.