PM Gati Shakti: ಚೀನಿ ಡ್ರ್ಯಾಗನ್ ಮಣಿಸಲು ಮೋದಿ ʼಮೆಗಾ ಪ್ಲ್ಯಾನ್ʼ: ಭಾರತವಾಗಲಿದೆ ಏಷ್ಯಾದ ಸೂಪರ್ಮ್ಯಾನ್!
Oct 03, 2022 10:29 AM IST
ಸಂಗ್ರಹ ಚಿತ್ರ
- ಭಾರತದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಮೂಲಸೌಕರ್ಯ ಯೋಜನೆಗಳಿಗೆ ವೇಗ ತುಂಬಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಪಿಎಂ ಗತಿ ಶಕ್ತಿಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿರುವ ಮೋದಿ ಸರ್ಕಾರ, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಹಾಗಾದರೆ ಜಾಗತಿಕ ಕಂಪನಿಗಳನ್ನು ಸೆಳೆಯಲು ಭಾರತ ಮಾಡಿರುವ ಪ್ಲ್ಯಾನ್ ಏನು?
ನವದೆಹಲಿ: ಭಾರತದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಮೂಲಸೌಕರ್ಯ ಯೋಜನೆಗಳಿಗೆ ವೇಗ ತುಂಬಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಪಿಎಂ ಗತಿ ಶಕ್ತಿಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿರುವ ಮೋದಿ ಸರ್ಕಾರ, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಪಿಎಂ ಗತಿ ಶಕ್ತಿ ಎಂಬ 100 ಟ್ರಿಲಿಯನ್ ರೂ. (1.2 ಟ್ರಿಲಿಯನ್ ಡಾಲರ್) ಮೆಗಾ ಯೋಜನೆಯಡಿ 16 ಸಚಿವಾಲಯಗಳ ಕಾರ್ಯವನ್ನು ಸಂಯೋಜಿಸುವ ಡಿಜಿಟಲ್ ವೇದಿಕೆಯನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಿತಿಮೀರಿದ ವೆಚ್ಚ ಮತ್ತು ವಿಳಂಬವನ್ನು ತಡೆಗಟ್ಟುವ ಮೂಲಕ ಅತ್ಯಂತ ವೇಗವಾಗಿ ಯೋಜೆನಗಳನ್ನು ಕಾರ್ಯಗತಗೊಳಿಸುವುದು ಇದರ ಮೂಲ ಧ್ಯೇಯವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಲಾಜಿಸ್ಟಿಕ್ಸ್ ವಿಶೇಷ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಸ್ಪಷ್ಟಪಡಿಸಿದ್ದಾರೆ.
ಜಾಗತಿಕ ಕಂಪನಿಗಳು ಭಾರತವನ್ನು ತಮ್ಮ ಉತ್ಪಾದನಾ ಕೇಂದ್ರವಾಗಿ ಆರಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ಚೀನಾ ಈಗಲೂ ಹೊರಗಿನ ಪ್ರಪಂಚಕ್ಕೆ ಅಷ್ಟಾಗಿ ತೆರೆದುಕೊಂಡಿಲ್ಲ. ಅಲ್ಲದೇ ಚೀನಾದಲ್ಲಿ ಹೂಡಿಕೆ ಮಾಡುವ ಕಂಪನಿಗಳು ಚೀನಾ-ಪ್ಲಸ್-ಒನ್ ನೀತಿಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ. ಭಾರತ ಇದರ ಲಾಭ ಪಡೆದುಕೊಳ್ಳಲು ತುದಿಗಾಲ ಮೇಲೆ ನಿಂತಿದೆ ಎಂದು ಅಮೃತ್ ಲಾಲ್ ಮೀನಾ ಹೇಳಿದ್ದಾರೆ.
ಚೀನಾದೊಂದಿಗೆ ಸ್ಪರ್ಧಿಸಲು ಇರುವ ಏಕೈಕ ಮಾರ್ಗವೆಂದರೆ, ಜಾಗತಿಕ ಕಂಪನಿಗಳು ಭಾರತದತ್ತ ಮುಖ ಮಾಡುವಂತ ಸನ್ನಿವೇಶವನ್ನು ಸೃಷ್ಟಿಸುವುದು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು, ಪಿಎಂ ಗತಿ ಶಕ್ತಿ ಯೋಜನೆಯಡಿ ಮೂಲಭುತ ಸೌಕರ್ಯ ನಿರ್ಮಾಣಕ್ಕೆ ಮತ್ತಷ್ಟು ವೇಗ ನೀಡಲಿದೆ ಎಂದು ಅಮೃತ್ ಲಾಲ್ ಮೀನಾ ಹೇಳಿದರು.
ಪಿಎಂ ಗತಿ ಶಕ್ತಿ ಪೋರ್ಟಲ್ ಪ್ರಸ್ತುತ ಮೇಲ್ವಿಚಾರಣೆ ಮಾಡುತ್ತಿರುವ 1,300 ಯೋಜನೆಗಳಲ್ಲಿ, ಭೂಸ್ವಾಧೀನ, ಅರಣ್ಯ ಮತ್ತು ಪರಿಸರ ಅನುಮತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ, ಸುಮಾರು ಶೇ.40ರಷ್ಟು ಯೋಜನೆಗಳು ಕುಂಟುತ್ತಾ ಸಾಗಿವೆ. ಇದರ ಪರಿಣಾಮವಾಗಿ ವೆಚ್ಚವು ಮಿತಿಮೀರಿದೆ. ಕನಿಷ್ಠ 422 ಯೋಜನೆಗಳ ಪೈಕಿ 200 ಯೋಜನೆಗಳು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಈಗಾಗಲೇ ಪರಿಹಾರ ಕಂಡುಹಿಡಿಯಲಾಗಿದೆ ಎಂದೂ ಅಮೃತ್ ಲಾಲ್ ಮೀನಾ ಮಾಹಿತಿ ನೀಡಿದರು.
ಪಿಎಂ ಗತಿ ಶಕ್ತಿ ಯೋಜನೆ ಅಡಿಯಲ್ಲಿ, ಭಾರತದಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಕೆಲಸ ನಡೆಯುತ್ತಿದ್ದು, ಇಂದಿನ ಭಾರತವು ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಬದ್ಧವಾಗಿದೆ ಎಂಬ ಸಂದೇ ಸಾರುವಲ್ಲಿಯೂ ಯಶಸ್ವಿಯಾಗಿದೆ ಎಂದು ಅಮೃತ್ ಲಾಲ್ ಮೀನಾ ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.
ಗುಣಮಟ್ಟದ ಮೂಲಸೌಕರ್ಯವು ಹಲವಾರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸಹಕಾರಿಯಾಗಿದೆ. ಆಧುನಿಕ ಮೂಲಸೌಕರ್ಯವಿಲ್ಲದೆ, ಭಾರತದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಮೃತ್ ಲಾಲ್ ಮೀನಾ ಅಭಿಪ್ರಾಯಪಟ್ಟರು.
2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಕೋವಿಡ್ -19 ಸೋಂಕುಗಳ ಆಕ್ರಮಣಕಾರಿ ಅಲೆಯಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಉತ್ತೇಜಿಸಲು, ಪ್ರಧಾನಿ ಮೋದಿ ಮೂಲಸೌಕರ್ಯಗಳ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದ್ದಾರೆ. ಪ್ರಧಾನಿ ಮೋದಿ ಈ ಪ್ರಯತ್ನದಲ್ಲಿ ಕೆಲವು ಆರಂಭಿಕ ಯಶಸ್ಸನ್ನೂ ಕಂಡಿದ್ದಾರೆ ಎಂಬುದನ್ನು ಅಂಕಿ ಅಂಶಗಳು ತೋರಿಸಿವೆ.
ಭಾರತಕ್ಕೆ ಜಾಗತಿಕ ಕಂಪನಿಗಳನ್ನು ಸೆಳೆದು ಉದ್ಯೋಗ ಸೃಷ್ಟಿಸುವುದು ಮೋದಿ ಸರ್ಕಾರದ ಯೋಜನೆಯಾಗಿದೆ. ಇದಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದ್ದು, ಪಿಎಂ ಗತಿ ಶಕ್ತಿ ಯೋಜನೆ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ.
ವಿಭಾಗ