Suspected man detained: ಮಧ್ಯಪ್ರದೇಶದಲ್ಲಿ ಶಂಕಿತನ ಬಂಧನ; ಉಗ್ರ ನಂಟು ಶಂಕೆ, ಚೀನಾ ಪ್ರವಾಸ ಕಾರಣ
Feb 28, 2023 03:28 PM IST
ಎನ್ಐಎ (ಸಾಂಕೇತಿಕ ಚಿತ್ರ)
Suspected man detained: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನೀಡಿದ ಮಾಹಿತಿ ಮೇರೆಗೆ ಇಂದೋರ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಬಂಧಿತ ವ್ಯಕ್ತಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಇಂದೋರ್: ಚೀನಾ ಮತ್ತು ಹಾಂಗ್ ಕಾಂಗ್ನಲ್ಲಿ 2005 ಮತ್ತು 2018 ರ ನಡುವೆ ತಂಗಿದ್ದ 40 ವರ್ಷದ ವ್ಯಕ್ತಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆ ಇರುವ ಕಾರಣ ಆ ವ್ಯಕ್ತಿಯನ್ನು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನೀಡಿದ ಮಾಹಿತಿ ಮೇರೆಗೆ ಇಂದೋರ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಬಂಧಿತ ವ್ಯಕ್ತಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಇಂದೋರ್ನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ರಜತ್ ಸಕ್ಲೇಚಾ ಅವರು ಶಂಕಿತನ ಹೆಸರು ಬಹಿರಂಗ ಪಡಿಸಲು ನಿರಾಕರಿಸುತ್ತಾ, ಮುಂಬೈ ಪೊಲೀಸರು ಮತ್ತು ಎನ್ಐಎಯಿಂದ ಈ ವ್ಯಕ್ತಿಗೆ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿರುವ ಶಂಕೆಯ ಮಾಹಿತಿ ಬಂದಿದೆ ಎಂದು ಹೇಳಿದರು.
ವ್ಯಕ್ತಿ ಇಂದೋರ್ನ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಶಂಕಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವ್ಯಕ್ತಿಯು 2005 ಮತ್ತು 2018 ರ ನಡುವೆ ಚೀನಾ ಮತ್ತು ಹಾಂಗ್ ಕಾಂಗ್ನಲ್ಲಿ ಕೆಲಸ ಮಾಡಿದ್ದಾನೆ. ಈ ಕುರಿತು ವಿಚಾರಿಸಿದಾಗ ಆತ, ಚೀನಾದ ಮಹಿಳೆ ಜತೆಗೆ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಆಕೆಯ ಪರ ವಕೀಲರು ಭಾರತದ ಗುಪ್ತಚರ ಏಜೆನ್ಸಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಇಂದೋರ್ ಪೊಲೀಸರು ಈ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ಸಮನ್ವಯದಲ್ಲಿ ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಆತನ ಬಗ್ಗೆ ಪೊಲೀಸರು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಭೋಪಾಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ಮಿಶ್ರಾ, ಬಂಧಿತ ವ್ಯಕ್ತಿ ಸರ್ಫರಾಜ್ನನ್ನು ಎನ್ಐಎ ಮಾಹಿತಿ ಆಧರಿಸಿ ಬಂಧಿಸಲಾಗಿದೆ. ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ರಾಜ್ಯವು ಕಾನೂನು ಆಳ್ವಿಕೆಯಲ್ಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಇಲ್ಲಿ ಆದ್ಯತೆ. ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವ ಯಾರನ್ನೂ ಸುಮ್ಮನೆ ಬಿಡಲಾಗದು ಎಂದು ಹೇಳಿದರು.
ಇದಕ್ಕೂ ಮೊದಲು, ಮುಂಬೈ ಪೊಲೀಸರು ಅಲರ್ಟ್ ಆಗಿದ್ದರು. ನಗರದಲ್ಲಿ ಆತನ ಚಲನವಲನದ ಬಗ್ಗೆ ಎನ್ಐಎ ಎಚ್ಚರಿಕೆ ನೀಡಿದ ನಂತರ "ಪಾಕಿಸ್ತಾನದಲ್ಲಿ ತರಬೇತಿ ಪಡೆದ" ವ್ಯಕ್ತಿಯನ್ನು ಪತ್ತೆಹಚ್ಚಲು ಹುಡುಕಾಟವನ್ನು ಪ್ರಾರಂಭಿಸಿದ್ದರು ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದರು.
ಅಪಾಯಕಾರಿ ವ್ಯಕ್ತಿಯ ಅನುಮಾನಾಸ್ಪದ ಚಲನವಲನಗಳ ಬಗ್ಗೆ ಎನ್ಐಎ ನಗರ ಘಟಕದಿಂದ ಇ-ಮೇಲ್ ಬಂದ ನಂತರ ಮುಂಬೈ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಎನ್ಐಎ ಕಳುಹಿಸಿದ ಸಂದೇಶದಲ್ಲಿ ಮುಂಬೈಗೆ ಪ್ರವೇಶಿಸಿದ ಶಂಕಿತನನ್ನು ಸರ್ಫರಾಜ್ ಮೆಮನ್ ಎಂದು ಗುರುತಿಸಿದೆ. ಮೆಮನ್ ಅಲ್ಲಿಂದ ಮಧ್ಯಪ್ರದೇಶದಿಂದ ಹೋಗಿರುವ ಮಾಹಿತಿ ಲಭ್ಯವಾದ ಕಾರಣ ಅಲ್ಲಿನ ಪೊಲೀಸರನ್ನೂ ಎಚ್ಚರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶಂಕಿತನ ಬಗ್ಗೆ ಮಾಹಿತಿ ನೀಡುವಾಗ, ಎನ್ಐಎ ಅಧಿಕಾರಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್ಪೋರ್ಟ್ನಂತಹ ವಿವರಗಳನ್ನು ಹಂಚಿಕೊಂಡಿದ್ದಾರೆ. ಬಂದ ಮಾಹಿತಿಯ ಪ್ರಕಾರ ಶಂಕಿತನು ಚೀನಾ, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.