IPL 2023 Final: ಫಿಕ್ಸ್ ಆಯ್ತಾ ಐಪಿಎಲ್ ಫೈನಲ್ ಪಂದ್ಯ; ರನ್ನರ್ ಅಪ್ ಸಿಎಸ್ಕೆ ಎಂಬ ಚಿತ್ರ ವೈರಲ್ಗೆ ಅಸಲಿ ಕಾರಣವೇನು?
May 28, 2023 08:50 PM IST
ಎಂಎಸ್ ಧೋನಿ; ಹಾರ್ದಿಕ್ ಪಾಂಡ್ಯ
- Chennai Super Kings vs Gujarat Titans: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಚಿತ್ರವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಐಪಿಎಲ್ನಿಂದ ಎರಡು ವರ್ಷ ಬ್ಯಾನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕುರಿತಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಐಪಿಎಲ್ನ 16ನೇ ಆವೃತ್ತಿಯ ಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುಂಚೆಯೇ, ಈ ಪಂದ್ಯ ಫಿಕ್ಸ್ ಆಗಿದೆಯಾ ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಆ ಒಂದು ಫೋಟೋ.
ಐಪಿಎಲ್ 2023ರ ಪಂದ್ಯಾವಳಿಯು ಬಹುತೇಕ ಇಂದು (ಭಾನುವಾರ) ಅಂತ್ಯಗೊಳ್ಳಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿದ್ದು, ಮಳೆ ನಿಂತ ಬೆನ್ನಲ್ಲೇ ಪಂದ್ಯ ನಡೆಸಲಾಗುತ್ತದೆ. ಒಂದು ವೇಳೆ ತಡರಾತ್ರಿಯವರೆಗೂ ಮಳೆ ಮುಂದುವರೆದರೆ, ಮೀಸಲು ದಿನವಾದ ನಾಳೆ ಪಂದ್ಯ ನಡೆಯಲಿದೆ.
ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ, ಇದೇ ಮೈದಾನದ್ದು ಎನ್ನಲಾದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಇದು ವೈರಲ್ ಆದ ಬೆನ್ನಲ್ಲೇ ಐಪಿಎಲ್ನ ಪ್ರಸಕ್ತ ಆವೃತ್ತಿಯ ಫೈನಲ್ ಪಂದ್ಯವನ್ನು ಫಿಕ್ಸ್ ಮಾಡಲಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದು ಮೈದಾನದಲ್ಲಿರುವ ದೈತ್ಯ ಪರದೆಯಲ್ಲಿ ತೋರಿಸಲಾಗುವ ಚಿತ್ರವಾಗಿದ್ದು, ಅದರ ಮೇಲೆ "ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್" ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ.
ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂದ್ಯ ವೈರಲ್ ಆದ ಬೆನ್ನಲ್ಲೇ ಹಲವರು ವ್ಯಾಪಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದೇ ವೇಳೆ ಸಿಎಸ್ಕೆ ಅಭಿಮಾನಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅತ್ತ ಗುಜರಾತ್ ಟೈಟಾನ್ಸ್ ತಂಡದ ಅಭಿಮಾನಿಗಳು ಸಂತೋಷ ಹೊರಹಾಕಿದ್ದಾರೆ.
ಏನಿರಬಹುದು ಇದರ ಮರ್ಮ?
ಈ ಫೋಟೋ ಎಡಿಟೆಡ್ ಇರಬಹುದಾ? ಅಥವಾ ನಿಜವಾಗಿಯೂ ಅಹಮದಾಬಾದ್ ಮೈದಾನದ್ದೆಯಾ ಎಂಬ ಬಗ್ಗೆಯೂ ಹಲವರು ಗೊಂದಲ ವ್ಯಕ್ತಪಡಿಸಿದ್ದಾರೆ. ಮಹತ್ವದ ಫೈನಲ್ ಪಂದ್ಯಕ್ಕೂ ಮುನ್ನ, ಮೈದಾನದಲ್ಲಿ ಸ್ಕ್ರೀನ್ ಟೆಸ್ಟಿಂಗ್ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಯಾರೋ ಕ್ಲಿಕ್ ಮಾಡಿರುವ ಫೋಟೋ ವೈರಲ್ ಆಗಿರುವ ಸಾಧ್ಯತೆ ಹೆಚ್ಚಿದೆ. ಸಿಎಸ್ಕೆ ತಂಡದಂತೆಯೇ ಗುಜರಾತ್ ಟೈಟಾನ್ಸ್ ತಂಡದ ಹೆಸರಿನಲ್ಲೂ ರನ್ನರ್ ಅಪ್ ಎಂಬ ಬರಹ ದೊಡ್ಡ ಸ್ಕ್ರೀನ್ನಲ್ಲಿ ಹಾಕಿರಬಹುದು. ಆದರೆ, ಸಿಎಸ್ಕೆಗೆ ಸಂಬಂಧಿಸಿದ ಚಿತ್ರ ಮಾತ್ರ ವೈರಲ್ ಆಗಿದೆ.
ಸದ್ಯ ಮಳೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿದೆ. ಒಂದು ವೇಳೆ ಭಾನುವಾರ ಟಾಸ್ ಗೆದ್ದು ಪಂದ್ಯ ನಡೆಯದಿದ್ದರೆ, ಮೀಸಲು ದಿನವಾದ ನಾಳೆ ಮರುಪಂದ್ಯ ನಡೆಸಲಾಗುತ್ತದೆ. ನಾಳೆ ಹೊಸದಾಗಿ ಟಾಸ್ ಪ್ರಕ್ರಿಯೆ ಮೂಲಕ ಪಂದ್ಯ ಆರಂಭವಾಗಲಿದೆ. ಮತ್ತೊಂದು ನಿಯಮದ ಪ್ರಕಾರ, ಭಾನುವಾರ ಒಂದು ತಂಡ ಬ್ಯಾಟಿಂಗ್ ನಡೆಸುತ್ತಿದ್ದಾಗ ಮಳೆ ಅಡ್ಡಿಪಡಿಸಿ ಪಂದ್ಯ ರದ್ದಾದರೆ, ಆಗ ಮೀಸಲು ದಿನದಂದು ಹಿಂದಿನ ದಿನ ಎಷ್ಟು ಓವರ್ಗೆ ಪಂದ್ಯ ನಿಂತಿತ್ತೋ ಅಲ್ಲಿಂದಲೇ ಪಂದ್ಯ ಮರು ಆರಂಭವಾಗಲಿದೆ.
ಒಂದು ವೇಳೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣ ಪಂದ್ಯ ನಡೆಯದೇ ರದ್ದುಗೊಂಡರೆ ಆಗ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾದರೆ, ಸತತ 2ನೇ ಬಾರಿಗೆ ಗುಜರಾತ್ ತಂಡವು ಐಪಿಎಲ್ ಟ್ರೋಫಿಗೆ ಮುತ್ತಿಕ್ಕಲಿದೆ.